×
Ad

ಹರೇಕಳ: ಡಿವೈಎಫ್ಐ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ

Update: 2020-12-24 15:17 IST

ಕೊಣಾಜೆ: ಹರೇಕಳದಲ್ಲಿ ಚುನಾವಣಾ ವಿಚಾರದಲ್ಲಿ ಎಸ್ ಡಿಪಿಐ- ಕಾಂಗ್ರೆಸ್ ನಡುವೆ ಘರ್ಷಣೆ ನಡೆದ ಎರಡೇ ದಿನದಲ್ಲಿ ಗುರುವಾರ ಮತ್ತೆ ಚುನಾವಣಾ ವಿಚಾರ ಮಂದಿಟ್ಟುಕೊಂಡು ಡಿವೈಎಫ್ ಐ -ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದೆ.

ಹರೇಕಳದ 3 ನೇ ವಾರ್ಡ್ ನಿಂದ ಸಿಪಿಐಎಂ ಬೆಂಬಲಿತ ಅಭ್ಯರ್ಥಿಗಳಾಗಿ ಮುಹಮ್ಮದ್ ಅಶ್ರಫ್, ಮುಹಮ್ಮದ್ ಇಕ್ಬಾಲ್, ಅನುಸೂಯ ಅವರು ಸ್ಫರ್ಧಿಸಿದ್ದರು. ಗುರುವಾರ ಬೆಳಗ್ಗೆ ಫರೀದ್ ನಗರದಲ್ಲಿ ಅಶ್ರಫ್ ಅವರ ತಾಯಿಯೊಂದಿಗೆ ಕಾಂಗ್ರೆಸ್ ಕಾರ್ಯಕರ್ತ ಮುನೀರ್ ಎಂಬಾತ ಚುನಾವಣಾ ವಿಚಾರದಲ್ಲಿ ತಗಾದೆ ತೆಗೆದು ನಿಂದಿಸಿದ್ದಾಗಿ ಆರೋಪಿಸಲಾಗಿದೆ.

ಈ ಸಂದರ್ಭ ಮಧ್ಯ ಪ್ರವೇಶಿಸಿದ ಇಕ್ಬಾಲ್, ಮಹಿಳೆಯೊಂದಿಗೆ ಯಾಕೆ ವಾಗ್ವಾದ ನಡೆಸುತ್ತೀರಿ ಚುನಾವಣೆ ಮುಗಿದು ಹೋದ ಅಧ್ಯಾಯ ಎಂದು ಹೇಳಿದ್ದಾಗಿ ತಿಳಿದುಬಂದಿದ್ದು, ಈ ವೇಳೆ ಕುಪಿತಗೊಂಡ ಮುನೀರ್, ಇಕ್ಬಾಲ್ ರನ್ನು ದೂಡಿದ್ದು ಇಬ್ಬರ ನಡುವೆ ತಳ್ಳಾಟ ನಡೆದಿದೆ. ಗಾಯಗೊಂಡ ಇಕ್ಬಾಲ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದೇ ಘಟನೆಗೆ ಸಂಬಂಧಿಸಿ ಮುನೀರ್ ತನಗೆ ಕೂಡಾ ಡಿವೈಎಫ್ ಐ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿ, ತ‌ನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News