ಉಡುಪಿ: ಬ್ಯಾಂಕ್ಗಳ ಠೇವಣಿ ಮೊತ್ತ 22,667ಕೋಟಿ ರೂ.ಗೆ ಏರಿಕೆ
ಉಡುಪಿ, ಡಿ. 24: ಉಡುಪಿ ಜಿಲ್ಲೆಯ ಬ್ಯಾಂಕ್ಗಳ ಠೇವಣಿ ಮೊತ್ತವು 2020ರ ಸೆಪ್ಟಂಬರ್ ಅಂತ್ಯದ ವೇಳೆಗೆ 27,560 ಕೋಟಿ ರೂ.ಗೆ ಏರಿಕೆಯಾಗಿದ್ದು, ಶೇ.12.82ರ ಪ್ರಗತಿ ದಾಖಲಿಸಲಾಗಿದೆ ಎಂದು ಉಡುಪಿ ಜಿಲ್ಲೆಯ ಲೀಡ್ ಬ್ಯಾಂಕ್ ಕೆನರಾ ಬ್ಯಾಂಕ್ನ ಉಡುಪಿ ಪ್ರಾದೇಶಿಕ ಕಚೇರಿಯ ಎಜಿಎಂ ಎಂ.ವೈ. ಹರೀಶ್ ತಿಳಿಸಿದ್ದಾರೆ.
ಮಣಿಪಾಲದಲ್ಲಿರುವ ಉಡುಪಿ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಲೀಡ್ ಬ್ಯಾಂಕ್ನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಜಿಲ್ಲೆಯ ಬ್ಯಾಂಕುಗಳು 2020-21ನೇ ಸಾಲಿನ ಆರ್ಥಿಕ ವರ್ಷದ ಎರಡನೇ ಭಾಗದ ಮೂರು ತಿಂಗಳುಗಳಲ್ಲಿ ಸಾಧಿಸಿದ ಪ್ರಗತಿಯ ವರದಿಯನ್ನು ಸಭೆಯ ಮುಂದಿರಿಸಿ ಮಾತನಾಡುತಿದ್ದರು. ಉಡುಪಿ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸೆಪ್ಟಂಬರ್ ಅಂತ್ಯದವರೆಗೆ ಜಿಲ್ಲೆಯ ಬ್ಯಾಂಕ್ಗಳು ಒಟ್ಟು 12,418 ಕೋಟಿ ರೂ. ಸಾಲ ನೀಡಿದ್ದು, ಇದರ ವಾರ್ಷಿಕ ಪ್ರಗತಿ ಶೇ.4.23 ಆಗಿದೆ. ಇದರಿಂದ ಜಿಲ್ಲೆಯಲ್ಲಿ ಸಾಲ ಮತ್ತು ಠೇವಣಿಯ ಅನುಪಾತ ಶೇ.45.05ರಷ್ಟಿದೆ ಎಂದವರು ಹೇಳಿದರು.
2020-21ರಲ್ಲಿ ಜಿಲ್ಲೆಯ ಬ್ಯಾಂಕ್ಗಳು ಈ ಅವಧಿಯಲ್ಲಿ ಒಟ್ಟು 3840 ಕೋಟಿ ರೂ. ಸಾಲದ ಗುರಿಯನ್ನು ಹೊಂದಿದ್ದು, ಸೆಫ್ಟಂಬರ್ ತಿಂಗಳ ಕೊನೆಯವರೆಗೆ 3021 ಕೋಟಿ ರೂ. ಸಾಲವನ್ನು ನೀಡುವ ಮೂಲಕ ಶೇ.79 ಸಾಧನೆ ಮಾಡಲಾಗಿದೆ ಎಂದು ಹರೀಶ್ ತಿಳಿಸಿದರು.
ಈ ಸಾಲದಲ್ಲಿ ಕೃಷಿ ಕ್ಷೇತ್ರಗಳಿಗೆ 1587 ಕೋಟಿ ರೂ., ಅತೀ ಸಣ್ಣ, ಕಿರು ಹಾಗೂ ಮಧ್ಯಮ ಗಾತ್ರದ ಉದ್ಯಮಗಳಿಗೆ 1017 ಕೋಟಿ ರೂ., ಶಿಕ್ಷಣ ಕ್ಷೇತ್ರಕ್ಕೆ 14ಕೋಟಿ ರೂ. ಹಾಗೂ 145 ಕೋಟಿ ರೂ.ಗಳನ್ನು ಗೃಹ ಸಾಲವಾಗಿ ನೀಡಲಾಗಿದೆ. ಈ ಮೂಲಕ ಆದ್ಯತಾ ಕ್ಷೇತ್ರಕ್ಕೆ ಇದ್ದ ವಾರ್ಷಿಕ ಗುರಿಯಾದ 3340 ಕೋಟಿ ರೂ.ಗಳಲ್ಲಿ 2804 ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ವಿತರಿಸಿ ಶೇ.84ರಷ್ಟು ಸಾಧನೆ ಮಾಡಲಾಗಿದೆ. ಆದ್ಯತೇತರ ಕ್ಷೇತ್ರದಲ್ಲಿ ವಾರ್ಷಿಕ ಗುರಿಯಾದ 500 ಕೋಟಿ ರೂ.ಗಳಲ್ಲಿ 217 ಕೋಟಿ ರೂ.ಗಳ ಸಾಲ ವಿತರಣೆಯಾಗಿದೆ ಎಂದವರು ವಿವರಿಸಿದರು.
ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ವಿವಿಧ ಸರಕಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಒಟ್ಟು 82,570 ಫಲಾನುಭವಿಗಳಿಗೆ 2946 ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ನೀಡಲಾಗಿದೆ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ವರ್ಗದ 39,740 ಫಲಾನುಭವಿಗಳಿಗೆ ಒಟ್ಟು 1371 ಕೋಟಿ ರೂ.ಆರ್ಥಿಕ ಸಹಾಯವನ್ನು ನೀಡಲಾಗಿದೆ. ಅದೇ ರೀತಿ 68,060 ಮಂದಿ ಮಹಿಳೆಯರಿಗೆ ಒಟ್ಟು 2625 ಕೋಟಿ ರೂ.ಗಳ ಸಾಲವನ್ನು ವಿವಿಧ ಉದ್ದೇಶಗಳಿಗಾಗಿ ವಿತರಿಸಲಾಗಿದೆ. ಈ ಅವಧಿಯಲ್ಲಿ ಜಿಲ್ಲೆಯ 310 ವಿದ್ಯಾರ್ಥಿಗಳಿಗೆ ವಿದ್ಯಾ ಸಾಲ ಯೋಜನೆಯಡಿ 14 ಕೋಟಿ ರೂ.ಗಳನ್ನು ವಿತರಿಸಲಾಗಿದೆ ಎಂದರು.
ಲೀಡ್ ಬ್ಯಾಂಕ್ ಮುಖ್ಯಪ್ರಬಂಧಕ ರುದ್ರೇಶ್ ಡಿ.ಸಿ. ಮಾತನಾಡಿ, ಜಿಲ್ಲೆ ಯಲ್ಲಿ ಈ ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಜಿಲ್ಲೆಯ 9,470 ಮಂದಿ ರೈತ ಖಾತೆದಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 101 ಕೋಟಿ ೂ. ವಿತರಿಸಲಾಗಿದೆ ಎಂದು ತಿಳಿಸಿದರು
ಅಧ್ಯಕ್ಷತೆ ವಹಿಸಿದ್ದ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಜಿಲ್ಲೆಯಲ್ಲಿ ಬ್ಯಾಂಕ್ ಶಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ದರು. ಸಾಲ ನೀಡಿಕೆಯಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕ್ಗಳ ಈ ತ್ರೈಮಾಸಿಕ ಅವಧಿಯ ಸಾಧನೆ ತೀರಾ ನಿರಾಶಾಜನಕ ಎಂದು ಅಭಿಪ್ರಾಯಪಟ್ಟ ರಲ್ಲದೇ ಇದರಿಂದ ಸಾಲ ಮತ್ತು ಠೇವಣಿ ಅನುಪಾತ (ಸಿಡಿ ರೆಶ್ಯೂ) ಕೆಳಗಿಳಿದಿದೆ ಎಂದರು.
ಸಾಲ ನೀಡಲು ಆದ್ಯತೆ: ಜಿಲ್ಲೆಯಲ್ಲಿ ಸಾಲ ಮತ್ತು ಠೇವಣಿ ಅನುಪಾತ ತೀರಾ ಕೆಳಗಿದೆ. ಇದು ಪ್ರಗತಿ ಕಾಣುವ ಬದಲು ಕಳೆದ ತ್ರೈಮಾಸಿಕಕ್ಕಿಂತ ಶೇ.0.21ರಷ್ಟು ಹಾಗೂ ಇದೇ ಅವಧಿಯಲ್ಲಿ ಕಳೆದ ವರ್ಷಕ್ಕಿಂತ ಶೇ.3.72ರಷ್ಟು ಕೆಳಕ್ಕಿಳಿದಿದೆ ಎಂದು ರುದ್ರೇಶ್ ಬೊಟ್ಟು ಮಾಡಿದರು. ಆರ್ಬಿಐ ಸೂಚನೆಯಂತೆ ಈ ಅನುಪಾತ ಶೇ.60ರಷ್ಟಿರಬೇಕು. ಇದಕ್ಕೆ ಬ್ಯಾಂಕುಗಳು ಹೆಚ್ಚು ಹೆಚ್ಚು ಸಾಲಗಳನ್ನು ನೀಡಬೇಕು ಎಂದರು.
ಎಸ್ಸಿಡಿಸಿಸಿ ಬ್ಯಾಂಕನ್ನು ಹೊರತು ಪಡಿಸಿ ಉಳಿದ ಬ್ಯಾಂಕುಗಳು ಕೃಷಿ ಸಾಲ ನೀಡಲು ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ. ಇದರೊಂದಿಗೆ ಶೈಕ್ಷಣಿಕ ಸಾಲ ಹಾಗೂ ಗೃಹ ಸಾಲ ನೀಡಲು ಹೆಚ್ಚು ಆಸಕ್ತಿ ತೋರಿಸೇಕು ಎಂದವರು ಸಲಹೆ ನೀಡಿದರು.
ಕೋವಿಡ್ ಕಾರಣದಿಂದ ಈ ಬಾರಿ ಬ್ಯಾಂಕುಗಳ ಪ್ರಗತಿಗೆ ಹಿನ್ನಡೆಯಾಗಿದೆ ಎಂದು ಹೆಚ್ಚಿನ ಬ್ಯಾಂಕ್ ಪ್ರತಿನಿಧಿಗಳು ತಿಳಿಸಿದರು. ನಬಾರ್ಡ್ನ ಎಜಿಎಂ ಸಂಗೀತಾ ಕರ್ತ ಉಪಸ್ಥಿತರಿದ್ದು ಹೊಸ ಸುತ್ತೋಲೆಗಳ ಕುರಿತು ತಿಳಿಸಿದರು.
2021-22ನೇ ಸಾಲಿಗೆ 8,867 ಕೋಟಿ ರೂ. ಸಾಲ ಯೋಜನೆ
ಉಡುಪಿ ಜಿಲ್ಲೆಗೆ ನಬಾರ್ಡ್ ತಯಾರಿಸಿದ 2021-22ನೇ ಸಾಲಿನ ಸಾಮರ್ಥ್ಯ ಆಧಾರಿತ ಸಾಲ ಯೋಜನೆಯನ್ನು ಇಂದು ನಡೆದ ಲೀಡ್ ಬ್ಯಾಂಕ್ ಸಭೆಯಲ್ಲಿ ಉಡುಪಿ ಜಿಪಂ ಸಿಇಓ ಡಾ.ನವೀನ್ ಭಟ್ ವೈ. ಬಿಡುಗಡೆ ಗೊಳಿಸಿದರು.
ಇದರಂತೆ ಉಡುಪಿ ಜಿಲ್ಲೆಯ ಆದ್ಯತಾ ಕ್ಷೇತ್ರಕ್ಕೆ ಮುಂದಿನ ಆರ್ಥಿಕ ವರ್ಷದಲ್ಲಿ ಒಟ್ಟು 8,867.28 ಕೋಟಿ ರೂ. ಸಾಲದ ಯೋಜನೆಯನ್ನು ಬ್ಯಾಂಕ್ಗಳಿಗೆ ರೂಪಿಸಬೇಕಾಗಿದೆ. ಇದರಲ್ಲಿ ಬೆಳೆ ಉತ್ಪನ್ನ, ಕೃಷಿ ಹಾಗೂ ಕೃಷಿ ಸಂಬಂಧಿ ಯೋಜನೆಗಳಿಗೆ ಒಟ್ಟು 2,139.87 ಕೋಟಿ ರೂ., ಇದೂ ಸೇರಿ ಇಡೀ ಕೃಷಿ ಕ್ಷೇತ್ರದ ಮೂಲಭೂತ ಸೌಕರ್ಯಗಳಿಗೆ ಹಾಗೂ ಅದಕ್ಕೆ ಸಂಬಂಧಿಸಿದ ಇತರ ಕಾರ್ಯಕ್ರಮಗಳಿಗೆ ಒಟ್ಟು 4,776.83 ಕೋಟಿ ರೂ., ಸಣ್ಣ, ಅತಿಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳಿಗೆ 2,643.36 ಕೋಟಿ ರೂ. ಸಾಲ ನೀಡಲು ನಿರ್ಧರಿಸಲಾಗಿದೆ.
ಇನ್ನು ರಫ್ತು ಸಾಲ 255 ಕೋಟಿ ರೂ., ಶೈಕ್ಷಣಿಕ ಸಾಲ 162 ಕೋಟಿ ರೂ., ಗೃಹ ಸಾಲ 930 ಕೋಟಿ ರೂ., ನವೀಕರಿಸಬಹುದಾದ ಇಂಧನಕ್ಕೆ 40 ಕೋಟಿ ರೂ. ಸಾಲದ ಯೋಜನೆಗಳನ್ನು ಜಿಲ್ಲೆಯ 410 ಬ್ಯಾಂಕ್ ಶಾಖೆಗಳ ನಡುವೆ ಹಂಚಬೇಕಾಗಿದೆ.