ಪುತ್ತೂರು: ವಿದ್ಯುತ್ ಆಘಾತಕ್ಕೆ ಬಿಎಸ್ಸೆನ್ನೆಲ್ ಕೇಬಲ್ ಆಪರೇಟರ್ ಮೃತ್ಯು
Update: 2020-12-27 12:52 IST
ಪುತ್ತೂರು, ಡಿ.27: ಬಿಎಸ್ಸೆನ್ನೆಲ್ ಕೇಬಲ್ ಅಳವಡಿಕೆಗಾಗಿ ವಿದ್ಯುತ್ ಕಂಬ ಏರಿದ್ದ ಕೇಬಲ್ ಆಪರೇಟರ್ ಒಬ್ಬರು ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ರವಿವಾರ ನಡೆದಿದೆ. ಪುತ್ತೂರು ನಗರದ ಕೋರ್ಟ್ ರಸ್ತೆಯ ಮೀನು ಮಾರುಕಟ್ಟೆ ಬಳಿಯ ವಿದ್ಯುತ್ ಕಂಬಕ್ಕೆ ಹತ್ತಿದ ಕೇಬಲ್ ಆಪರೇಟರ್ ಆರ್ಲಪದವು ನಿವಾಸಿ ಪದ್ಮನಾಭ ಪಾಣಾಜೆ(44) ಮೃತಪಟ್ಟವರು.
ಪದ್ಮನಾಭ ಅವರು ಬಿಎಸ್ಸೆನ್ನೆಲ್ ಗುತ್ತಿಗೆದಾರ ಸಂಸ್ಥೆ ಶ್ರೀ ಅಸೋಸಿಯೇಟೆಡ್ನಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು. ಇಂದು ಬೆಳಗ್ಗೆ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದರೆನ್ನಲಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದರೂ ದಾರಿಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.