ಜಿಯೊದಿಂದ ಇತರ ಮೊಬೈಲ್ ನೆಟ್ವರ್ಕ್ಗಳಿಗೆ ಬದಲಾಗುತ್ತಿರುವ ಪ್ರತಿಭಟನಾನಿರತ ರೈತರು
ಹೊಸದಿಲ್ಲಿ, ಡಿ.27: ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ದಿಲ್ಲಿಯ ಗಡಿಗಳಲ್ಲಿ ಪ್ರತಿಭಟನೆಯನ್ನು ನಡೆಸುತ್ತಿರುವ ರೈತರು ಜಿಯೊ ಮೊಬೈಲ್ ನೆಟ್ವರ್ಕ್ನ್ನು ಏರ್ಟೆಲ್ ಮತ್ತು ವೊಡಾಫೋನ್-ಐಡಿಯಾದಂತಹ ಇತರ ನೆಟ್ವರ್ಕ್ಗಳಿಗೆ ಬದಲಿಸಿಕೊಳ್ಳುತ್ತಿದ್ದಾರೆ. ಪರಿಣಾಮವಾಗಿ ಪ್ರತಿಭಟನಾ ಸ್ಥಳಗಳಲ್ಲಿ ಈ ಮೊಬೈಲ್ ಕಂಪನಿಗಳ ಸಿಮ್ ಮಾರಾಟ ಮಳಿಗೆಗಳು ತಲೆಯೆತ್ತಿವೆ. ರೈತರು ತಮ್ಮ ನಂಬರ್ಗಳನ್ನು ಉಳಿಸಿಕೊಂಡು ಜಿಯೊ ಸಿಮ್ನಿಂದ ಬದಲಾಗಲು ಪೋರ್ಟೆಬಿಲಿಟಿ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದಾರೆ. ಉದ್ಯಮಪತಿಗಳಾದ ಮುಕೇಶ ಅಂಬಾನಿ ಮತ್ತು ಗೌತಮ ಅದಾನಿ ಅವರ ಸಂಸ್ಥೆಗಳು ರೈತರಿಂದ ಧಾನ್ಯಗಳನ್ನು ಖರೀದಿಸುತ್ತಿಲ್ಲವಾದರೂ ನೂತನ ಕೃಷಿಕಾನೂನುಗಳು ಅವರಿಗೆ ಲಾಭದಾಯಕವಾಗಲಿವೆ ಎಂದು ಭಾವಿಸಿರುವ ರೈತರು ಈ ಕಂಪನಿಗಳ ವಿರುದ್ಧ ಆಕ್ರೋಶಗೊಂಡಿದ್ದು,ಇದೇ ಕಾರಣದಿಂದ ಜಿಯೊದಿಂದ ಇತರ ನೆಟ್ವರ್ಕ್ಗಳಿಗೆ ಬದಲಾಗುತ್ತಿದ್ದಾರೆ.
ಸೆಪ್ಟೆಂಬರ್ನಲ್ಲಿ ಮೊದಲು ಪಂಜಾಬಿನಲ್ಲಿ ಆರಂಭಗೊಂಡಿದ್ದ ಜಿಯೊ ವಿರೋಧಿ ಅಭಿಯಾನವು ಈಗ ದಿಲ್ಲಿ,ಹರ್ಯಾಣ ಮತ್ತು ಉತ್ತರ ಪ್ರದೇಶಗಳಿಗೂ ವಿಸ್ತರಿಸಿದೆ. ಪಂಜಾಬಿನಲ್ಲಿಯೂ ಹಳ್ಳಿಹಳ್ಳಿಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸುತ್ತಿರುವ ಏರ್ಟೆಲ್,ವೊಡಾಫೋನ್-ಐಡಿಯಾದಂತಹ ಜಿಯೊದ ಎದುರಾಳಿ ಕಂಪನಿಗಳು ತಮ್ಮ ನೆಟ್ವರ್ಕ್ಗೆ ಬದಲಾಗಲು ಜನರಿಗೆ ವಿಶೇಷ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ನೀಡುತ್ತಿವೆ.
ನೂತನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ಆರಂಭಗೊಂಡಾಗಿನಿಂದಲೇ ರೈತರಲ್ಲಿ ಅಂಬಾನಿಯ ರಿಲಯನ್ಸ್ ಮತ್ತು ಅದಾನಿಯ ಅದಾನಿ ಗ್ರೂಪ್ ವಿರುದ್ಧ ಕ್ರೋಧದ ಹೊಗೆಯಾಡುತ್ತಿದೆ.
ನಮ್ಮ ಭೂಮಿಯ ಮೇಲೆ ಕಣ್ಣಿಟ್ಟಿರುವ ಈ ಕಾರ್ಪೊರೇಟ್ ಸಂಸ್ಥೆಗಳ ಜೊತೆಗೆ ನಾವೇಕೆ ಸಂಬಂಧವನ್ನು ಹೊಂದಿರಬೇಕು ಎಂದು ಓರ್ವ ರೈತ ಪ್ರಶ್ನಿಸಿದರೆ,ರಿಲಯನ್ಸ್ ಮತ್ತು ಅದಾನಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ನಾವು ಜನರನ್ನು ಕೋರಿಕೊಳ್ಳುತ್ತಿದ್ದೇವೆ ಎಂದು ಇನ್ನೋರ್ವ ರೈತ ತಿಳಿಸಿದ. ಎಷ್ಟೋ ಯುವಕರು ಪ್ರತಿಭಟನಾ ನಿರತ ರೈತರನ್ನು ಬೆಂಬಲಿಸಲು ಸಿಂಘು,ಟಿಕ್ರಿ ಮತ್ತು ಗಾಝಿಪುರ ಗಡಿ ಕೇಂದ್ರಗಳಿಗೆ ಬಂದು ತಮ್ಮ ಜಿಯೊ ನೆಟ್ವರ್ಕ್ನ್ನು ಇತರ ನೆಟ್ವರ್ಕ್ಗಳಿಗೆ ಬದಲಿಸಿಕೊಳ್ಳುತ್ತಿದ್ದಾರೆ.
ಪ್ರತಿದಿನ ಸರಾಸರಿ 500ರಿಂದ 600 ಜನರು ತಮ್ಮ ನೆಟ್ವರ್ಕ್ ಬದಲಿಸಿಕೊಳ್ಳುತ್ತಿದ್ದಾರೆ. ಪಂಜಾಬ್ ಮಾತ್ರವಲ್ಲ,ಹರ್ಯಾಣ ಮತ್ತು ಉತ್ತರ ಪ್ರದೇಶಗಳಿಂದ ಜನರು ಬಂದು ಜಿಯೊ ಸಿಮ್ ಬದಲಿಸಿಕೊಳ್ಳುತ್ತಿದ್ದಾರೆ ಎಂದು ಸಿಂಘುವಿನ ಪ್ರತಿಭಟನಾ ಸ್ಥಳದಲ್ಲಿದ್ದ ಏರ್ಟೆಲ್ ಅಧಿಕಾರಿಯೋರ್ವರು ತಿಳಿಸಿದರು.
ಈವರೆಗೆ ಪ್ರತಿಭಟನಾ ಸ್ಥಳದಲ್ಲಿ 1.5 ಲಕ್ಷಕ್ಕೂ ಅಧಿಕ ಜಿಯೊ ಸಂಪರ್ಕಗಳು ಇತರ ಮೊಬೈಲ್ ನೆಟ್ವರ್ಕ್ಗಳಿಗೆ ಪೋರ್ಟ್ ಆಗಿವೆ. ಅಭಿಯಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲ ಭಾರೀ ಸ್ಪಂದನೆ ದೊರೆಯುತ್ತಿದೆ ಎಂದು ರೈತರ ಪ್ರತಿಭಟನೆಯ ವಿರುದ್ಧ ಬಿಜೆಪಿಯ ಐಟಿ ಘಟಕದ ಅಪಪ್ರಚಾರವನ್ನು ಎದುರಿಸಲು ಕಿಸಾನ್ ಏಕತಾ ಮಂಚ್ನ ಐಟಿ ಘಟಕವನ್ನು ಹುಟ್ಟುಹಾಕಿರುವ ಬಲಜೀತ್ ಸಿಂಗ್ ತಿಳಿಸಿದರು. ಮಂಚ್ನ ಸ್ವಯಂಸೇವಕರು ರಿಲಯನ್ಸ್ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊಗಳನ್ನೂ ಪೋಸ್ಟ್ ಮಾಡುತ್ತಿದ್ದಾರೆ.
ಪಂಜಾಬಿನಲ್ಲಿ ಇನ್ನೂ 151 ಮೊಬೈಲ್ ಟವರ್ಗಳು ಧ್ವಂಸ
ದೂರಸಂಪರ್ಕ ಮೂಲಸೌಕರ್ಯಗಳಿಗೆ ಹಾನಿ ಮಾಡದಂತೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಮನವಿಗೆ ಸೊಪ್ಪು ಹಾಕದ ಪ್ರತಿಭಟನಾನಿರತ ರೈತರು ರಾಜ್ಯದ ವಿವಿಧೆಡೆಗಳಲ್ಲಿ ಶನಿವಾರ ರಾತ್ರಿ ಜಿಯೊ ಕಂಪನಿಯ 151 ಮೊಬೈಲ್ ಟವರ್ಗಳನ್ನು ಧ್ವಂಸಗೊಳಿಸಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಹಾನಿಗೀಡಾಗಿರುವ ಮೊಬೈಲ್ ಟವರ್ಗಳ ಸಂಖ್ಯೆ 1,338ಕ್ಕೇರಿದೆ.
ವಿವಿಧ ಸ್ಥಳಗಳಲ್ಲಿಯ ಟವರ್ಗಳಿಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿದ ಪ್ರತಿಭಟನಾಕಾರರು ತಮ್ಮನ್ನು ತಡೆಯಲೆತ್ನಿಸಿದ ಸಿಬ್ಬಂದಿಗಳ ಮೇಲೆ ಹಲ್ಲೆಗಳನ್ನು ನಡೆಸಿದ ಘಟನೆಗಳೂ ಸಂಭವಿಸಿವೆ.
ಕಾನೂನು ಜಾರಿ ಸಂಸ್ಥೆಗಳು ಯಾವುದೇ ಕ್ರಮವನ್ನು ಕೈಗೊಳ್ಳಲು ವಿಫಲಗೊಂಡಿದ್ದು, ಪ್ರತಿಭಟನಾನಿರತ ರೈತರ ದಾಳಿಗಳಿಂದ ದೂರಸಂಪರ್ಕ ಸೇವೆಗಳಿಗೆ ವ್ಯತ್ಯಯವುಂಟಾಗಿದೆ ಎಂದು ಉದ್ಯಮದ ಮೂಲಗಳು ತಿಳಿಸಿದವು.
ಇಂತಹ ಕೃತ್ಯಗಳಿಂದ ಜನರಿಗೆ ಅನಾನುಕೂಲವನ್ನುಂಟು ಮಾಡದಂತೆ ಮತ್ತು ಕಳೆದ ಹಲವಾರು ತಿಂಗಳುಗಳಿಂದ ತಮ್ಮ ಪ್ರತಿಭಟನೆ ಸಂದರ್ಭ ಪ್ರದರ್ಶಿಸಿರುವ ಸಂಯಮವನ್ನು ಮುಂದುವರಿಸುವಂತೆ ಸಿಂಗ್ ಶುಕ್ರವಾರ ಪ್ರತಿಭಟನಾನಿರತ ರೈತರಿಗೆ ಮನವಿ ಮಾಡಿಕೊಂಡಿದ್ದರು.