ಬಂಟ್ವಾಳ : ಮುಂಜಾನೆವರೆಗೂ ನಡೆದ ಮತ ಎಣಿಕೆ ಕಾರ್ಯ

Update: 2020-12-31 04:21 GMT

ಬಂಟ್ವಾಳ, ಡಿ.31: ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ಗಳ ಚುನಾವಣೆಯ ಮತ ಎಣಿಕೆ ಕಾರ್ಯ ಗುರುವಾರ ಮುಂಜಾನೆ 5 ಗಂಟೆಯ ವೇಳೆಗೆ ಮುಕ್ತಾಯಗೊಂಡಿದ್ದು, ಇದು ಮತ ಎಣಿಕೆ ಕೇಂದ್ರದ ಅವ್ಯವಸ್ಥೆಗೆ ಸಾಕ್ಷಿಯಾಗಿದೆ ಎಂದು ಹಲವರು ದೂರಿದ್ದಾರೆ.

ಬಂಟ್ವಾಳ ತಾಲೂಕಿನ ಮತ ಎಣಿಕೆ ಕಾರ್ಯ ಬಿ.ಸಿ.ರೋಡ್ ಕೈಕಂಬ ಸಮೀಪದ ಇನ್ಫೆಂಟ್ ಜೀಸಸ್ ಕಾಲೇಜಿನಲ್ಲಿ ನಡೆದಿದ್ದು ಅತೀ ಹೆಚ್ಚು ಗ್ರಾಮ ಪಂಚಾಯತ್ ಗಳನ್ನು ಹೊಂದಿರುವ ಬಂಟ್ವಾಳ ತಾಲೂಕಿನಲ್ಲಿ ಮತ ಎಣಿಕೆ ಕಾರ್ಯ ಬುಧವಾರ ಬೆಳಗ್ಗೆ 8 ಗಂಟೆಗೆ ಸರಿಯಾಗಿ ಆರಂಭಗೊಂಡಿತ್ತು. ಆದರೆ ನಿಧಾನಗತಿಯಲ್ಲಿ ಸಾಗಿದ ಮತ ಎಣಿಕೆ ಪ್ರಕ್ರಿಯೆ ಗುರುವಾರ ಮುಂಜಾನೆ 5 ಗಂಟೆಯ ವೇಳೆಗೆ ಮುಕ್ತಾಯಗೊಂಡಿತು.

ದಕ್ಷಿಣ ಕನ್ನಡ ಜಿಲ್ಲೆಯ ಉಳಿದ ತಾಲೂಕಿನಲ್ಲಿ ಬುಧವಾರ ರಾತ್ರಿಯ ವೇಳೆಗೆ ಮತ ಎಣಿಕೆ ಕಾರ್ಯಗಳು ಮುಗಿದಿವೆ‌. ಬಂಟ್ವಾಳ ಮತ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆಗೆ ಬಂಟ್ವಾಳ ಚುನಾವಣಾ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡದಿರುವುದು ಮತ್ತು ಭಾರೀ ಅವ್ಯವಸ್ಥೆಯಿಂದಾಗಿ ಮತ ಎಣಿಕೆ ಪ್ರಕ್ರಿಯೆ ಕುಂಟುತ್ತಾ ಸಾಗಿದೆ ಆರೋಪಗಳು ಕೇಳಿ ಬಂದಿವೆ.

ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಜೊತೆಗೆ ಏಜಂಟರುಗಳು, ಪೊಲೀಸರು, ಅಧಿಕಾರಿಗಳು, ಸಿಬ್ಬಂದಿ ವರ್ಗ, ಮಾಧ್ಯಮದವರು ರಾತ್ರಿ ಇಡೀ ನಿದ್ದೆ ಬಿಟ್ಟು ಗುರುವಾರ ಮುಂಜಾನೆವರೆಗೂ ಕೆಲಸ ಕಾರ್ಯದಲ್ಲಿ ತೊಡಗಿದ್ದರು.

ಒಟ್ಟು ಮೂರು ಸುತ್ತಿನಲ್ಲಿ ಮತ ಎಣಿಕೆ ಪ್ರಕ್ರಿಯೆಯನ್ನು ಮುಗಿಸುವ ಪಟ್ಟಿಯನ್ನು ಬಂಟ್ವಾಳ ಚುನಾವಣಾ ಅಧಿಕಾರಿಗಳು ಅಭ್ಯರ್ಥಿಗಳು ಮತ್ತು ಅವರ ಏಜೆಂಟರಿಗೆ ನೀಡಿದ್ದರು. ಅದರಂತೆ ಮೊದಲ ಸುತ್ತಿನ ಮತ ಎಣಿಕೆ ಸಮಯ ಬೆಳಗ್ಗೆ 8ರಿಂದ 10:15 ಎಂದು ತಿಳಿಸಲಾಗಿತ್ತು. ಆದರೆ ಮೊದಲ ಹಂತದ ಬಹುತೇಕ ಗ್ರಾಮ ಪಂಚಾಯತ್ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಅಪರಾಹ್ನ 3 ಗಂಟೆಯ ಬಳಿಕ. ಸಜಿಪನಡು ಸಹಿತ ಕೆಲವು ಗ್ರಾಮಗಳ ಮತ ಎಣಿಕೆ ಕಾರ್ಯ ಸಂಜೆ 6 ಗಂಟೆಯ ವರೆಗೂ ನಡೆದಿತ್ತು. ಬಳಿಕ ಆರಂಭವಾದ ಎರಡು ಮತ್ತು ಮೂರನೇ ಹಂತದ ಮತ ಎಣಿಕೆ ಪ್ರಕ್ರಿಯೆ ಮುಂಜಾನೆ ವೇಳೆ ಪೂರ್ಣಗೊಂಡಿದೆ. 

ಊಟ, ತಿಂಡಿ, ನೀರು ಇಲ್ಲದೆ ಪರದಾಟ

ಬುಧವಾರ ಮುಂಜಾನೆ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿ ವರ್ಗ, ಪೊಲೀಸರಿಗೆ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ ಸರಿಯಾಗಿ ದೊರಕ್ಕಿತ್ತು‌‌. ಆ ಬಳಿಕದ ಯಾವುದೇ ಊಟ, ತಿಂಡಿ ಸರಿಯಾಗಿ ಸಿಗದೆ ಸಂಕಷ್ಟ ಅನುಭವಿಸುವಂತಾಯಿತು. ಬುಧವಾರ ಸಂಜೆಯ ವೇಳೆಗೆ ಕುಡಿಯುವ ನೀರು ಖಾಲಿ ಆಗಿದ್ದು ಆ ಬಳಿಕ ನೀರಿಗಾಗಿ ಮತ ಎಣಿಕೆ ಪ್ರಕ್ರಿಯಲ್ಲಿ ತೊಡಗಿದ್ದ ಸಿಬ್ಬಂದಿ ವರ್ಗ, ಪೊಲೀಸರು ಹಾಗೂ ಅಭ್ಯರ್ಥಿಗಳು, ಏಜೆಂಟರು ಪರದಾಡುವ ಸ್ಥಿತಿಯೂ ನಿರ್ಮಾಣವಾಗಿತ್ತು ಎಂದು ತಿಳಿದುಬಂದಿದೆ.

ಬುಧವಾರ ಬೆಳಗ್ಗೆ ಮತ ಎಣಿಕೆ ಕೇಂದ್ರದ ಗೇಟ್ ಒಳಗೆ ಪ್ರವೇಶಿಸಿದ ಬಹುತೇಕ ಅಭ್ಯರ್ಥಿಗಳು, ಏಜೆಂಟರು ಸಂಜೆ 6 ಗಂಟೆಯ ಬಳಿಕ ಹೊರ ಹೋಗಿದ್ದು. ಮತ ಎಣಿಕೆ ಕೇಂದ್ರದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿಗಳು, ಸಿಬ್ಬಂದಿ, ಪೊಲೀಸರು, ಮಾಧ್ಯಮದವರಿಗೆ ಊಟ, ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅಭ್ಯರ್ಥಿಗಳು ಮತ್ತು ಏಜೆಂಟರಿಗೆ ಊಟ ತಿಂಡಿಯ ವ್ಯವಸ್ಥೆ ಇರಲಿಲ್ಲ‌. ಕೂಪನ್ ಇದ್ದವರಿಗೆ ಮಾತ್ರ ಊಟ, ತಿಂಡಿ ನೀಡಲಾಗುತ್ತಿತ್ತು. ಇದರಿಂದಾಗಿ ಅಭ್ಯರ್ಥಿಗಳು ಮತ್ತು ಏಜೆಂಟರು ಬೆಳಗ್ಗೆಯಿಂದ ರಾತ್ರಿ ವರೆಗೆ ಊಟ, ತಿಂಡಿ ಇಲ್ಲದೆ ತೀವ್ರ ಸಂಕಷ್ಟ ಪಡುವಂತಾಯಿತು.

ಬಂಟ್ವಾಳದಲ್ಲಿ ಮತ ಎಣಿಕೆ ಪ್ರಕ್ರಿಯೆಯ ಜವಾಬ್ದಾರಿ ವಹಿಸಿದ ಚುನಾವಣಾ ಅಧಿಕಾರಿಗಳ ಅನುಭವದ ಕೊರತೆ, ಕೆಲವರ ನಿರ್ಲಕ್ಷ್ಯತನ ಹಾಗೂ ಕೆಲವು ಅವ್ಯವಸ್ಥೆಗಳಿಂದಾಗಿ ಈ ರೀತಿ ಉಂಟಾಗಿದೆ. ಅತೀ ಹೆಚ್ಚು ಗ್ರಾಮಗಳು ಇರುವ ತಾಲೂಕು ಎಂದು ತಿಳಿದಿದ್ದರೂ ಮತ ಎಣಿಕೆಗೆ ಬೇಕಾದಷ್ಟು ಟೇಬಲ್ ಗಳನ್ನು ಹಾಕದಿರುವುದು, ಅಧಿಕಾರಿಗಳು, ಸಿಬ್ಬಂದಿಯನ್ನು ನೇಮಿಸದಿರುವುದು ಈ ರೀತಿ ವಿಳಂಬಕ್ಕೆ ಕಾರಣವಾಗಿದೆ ಎಂದು ಅಭ್ಯರ್ಥಿಗಳು, ಏಜೆಂಟರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News