ಐಸಿಎಂಆರ್ ನೇಮಕಾತಿಗಳಲ್ಲಿ ಒಬಿಸಿ, ಎಸ್‌ಸಿ/ಎಸ್‌ಟಿ ವಿಜ್ಞಾನಿಗಳಿಗೆ ಮೀಸಲಾತಿ ನೀಡಿಲ್ಲ: ಎನ್‌ಸಿಬಿಸಿಗೆ ದೂರು

Update: 2020-12-31 15:20 GMT

ಚೆನ್ನೈ,ಡಿ.31: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯು ಇತ್ತೀಚಿಗೆ ನಡೆಸಿರುವ ವಿಜ್ಞಾನಿಗಳ ನೇಮಕಾತಿಯಲ್ಲಿ ಇತರ ಹಿಂದುಳಿದ ವರ್ಗಗಳು (ಒಬಿಸಿ) ಹಾಗೂ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ನಿಡದೆ ಇರುವುದು ಈಗ ವಿವಾದವನ್ನು ಸೃಷ್ಟಿಸಿದೆ. ಈ ವರ್ಗಗಳನ್ನು ಮೀಸಲಾತಿಯಿಂದ ವಂಚಿಸಿದ್ದಕ್ಕಾಗಿ ಅಖಿಲ ಭಾರತ ಒಬಿಸಿ ಉದ್ಯೋಗಿಗಳ ಕಲ್ಯಾಣ ಸಂಘಗಳ ಒಕ್ಕೂಟ (ಎಐಒಬಿಸಿ)ವು ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ (ಎನ್‌ಸಿಬಿಸಿ)ಕ್ಕೆ ದೂರು ಸಲ್ಲಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಐಸಿಎಂಆರ್‌ನ ಸಹಾಯಕ ಮಹಾ ನಿರ್ದೇಶಕ (ಆಡಳಿತ) ಜಗದೀಶ ರಾಜೇಶ ಅವರು, ಸಿ, ಡಿ ಮತ್ತು ಇ ದರ್ಜೆಗಳ ವಿಜ್ಞಾನಿಗಳ ನೇರ ನೇಮಕಾತಿಗೆ ಮೀಸಲಾತಿ ನೀತಿಯು ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ. ವಿಜ್ಞಾನಿಗಳ ಕ್ರಮಾನುಶ್ರೇಣಿಯು ‘ಬಿ’ದಿಂದ ಆರಂಭಗೊಂಡು ‘ಎಚ್’ನಿಂದ ಕೊನೆಗೊಳ್ಳುತ್ತದೆ.

 ಡಿ.5ರಂದು ಪ್ರಕಟಗೊಂಡಿದ್ದ ಐಸಿಎಂಆರ್ ಜಾಹೀರಾತಿನಲ್ಲಿ ಪುಣೆಯ ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆ, ರಾಷ್ಟ್ರೀಯ ಮಲೇರಿಯಾ ಸಂಶೋಧನಾ ಸಂಸ್ಥೆ ಮತ್ತು ಐಸಿಎಂಆರ್ ಕೇಂದ್ರಕಚೇರಿಗಳಲ್ಲಿ ‘ಡಿ’ ಮತ್ತು ‘ಇ’ ದರ್ಜೆಗಳ 65 ಖಾಲಿ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ನೇಮಕಾತಿಯ ಬಳಿಕ ‘ಡಿ’ ದರ್ಜೆಯ ವಿಜ್ಞಾನಿಗಳಿಗೆ 78,800 ರೂ-2,09,200 ರೂ. ಮತ್ತು ‘ಇ’ ದರ್ಜೆಯ ವಿಜ್ಞಾನಿಗಳಿಗೆ 1,23,100 ರೂ-2,15,900 ರೂ.ಗಳ ವೇತನ ಶ್ರೇಣಿಯನ್ನು ನಿಗದಿಗೊಳಿಸಲಾಗಿತ್ತು. ಆದರೆ ಈ ಜಾಹೀರಾತಿನಲ್ಲಿ ಮೀಸಲಾತಿ ನೀತಿಯ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ.

ಕೇಂದ್ರ ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ಐಸಿಎಂಆರ್ ಎಲ್ಲ ನೇರ ನೇಮಕಾತಿಗಳಲ್ಲಿ ಮೀಸಲಾತಿ ನೀತಿಯನ್ನು ಜಾರಿಗೊಳಿಸಲು ಸಾಂವಿಧಾನಿಕ ಬದ್ಧತೆಯನ್ನು ಹೊಂದಿದೆ ಎಂದು ತಿಳಿಸಿದ ಎಐಒಬಿಸಿಯ ಮಹಾ ಕಾರ್ಯದರ್ಶಿ ಜಿ.ಕರುಣಾನಿಧಿ ಅವರು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಏಮ್ಸ್, ವೈದ್ಯಕೀಯ ಶಿಕ್ಞಣ ಮತ್ತು ಸಂಶೋಧನೆ ಸ್ನಾತಕೋತ್ತರ ಸಂಸ್ಥೆಯಂತಹ ಇತರ ಕೇಂದ್ರ ಸರಕಾರದ ಸಂಸ್ಥೆಗಳು ‘ಎಚ್’ ದರ್ಜೆಯ ವಿಜ್ಞಾನಿಗಳು ಮತ್ತು ಪ್ರೊಫೆಸರ್‌ಗಳವರೆಗಿನ ಉನ್ನತ ಮಟ್ಟದ ನೇಮಕಾತಿಗಳಲ್ಲಿಯೂ ಮೀಸಲಾತಿ ನೀತಿಯನ್ನು ಅನುಸರಿಸುತ್ತವೆ. ಆರೋಗ್ಯ ಸೇವೆಗಳ ಮಹಾನಿರ್ದೇಶಕರು ಈಗಾಗಲೇ ರಾಜ್ಯಗಳ ಪಾಲಿನ ಅಖಿಲ ಭಾರತ ಕೋಟಾದಲ್ಲಿ ಒಬಿಸಿಗಳಿಗೆ ಮೀಸಲಾತಿಯನ್ನು ನಿರಾಕರಿಸುತ್ತಿದ್ದಾರೆ ಮತ್ತು ಈಗ ಆರೋಗ್ಯ ಸಚಿವಾಲಯದ ಇನ್ನೊಂದು ಘಟಕವಾಗಿರುವ ಐಸಿಎಂಆರ್ ಮೀಸಲಾತಿಯನ್ನು ನಿರಾಕರಿಸುತ್ತಿದೆ ಎಂದು ಕಳವಳವನ್ನು ವ್ಯಕ್ತಪಡಿಸಿದರು.

ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದ್ದರೆ, ಒಬಿಸಿ ಅಭ್ಯರ್ಥಿಗಳಿಗೆ 1,500 ರೂ.ಗಳ ಅರ್ಜಿ ಶುಲ್ಕವನ್ನು ವಿಧಿಸಲಾಗಿತ್ತು ಎಂದೂ ಎಐಒಬಿಸಿ ದೂರಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಜಗದೀಶ್ ರಾಜೇಶ್ ಅವರು,ಒಬಿಸಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿಯ ನಿಯಮವಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News