ಅತ್ತಾವರ-ಕೊಟ್ಟಾರದ ದೈವಸ್ಥಾನ ಕಾಣಿಕೆ ಹುಂಡಿಯಲ್ಲಿ ನಕಲಿ ನೋಟು ಪತ್ತೆ
Update: 2021-01-02 21:53 IST
ಮಂಗಳೂರು, ಜ.2: ನಗರದ ಎರಡು ದೈವಸ್ಥಾನಗಳ ಕಾಣಿಕೆ ಹುಂಡಿಯಲ್ಲಿ ನಕಲಿ ನೋಟು ಪತ್ತೆಯಾಗಿದ್ದು, ಈ ನೋಟಿನಲ್ಲಿ ಹಿಂದೂ, ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಬರೆದು ನಿಂದಿಸಿರುವುದು ಪತ್ತೆಯಾಗಿದೆ.
ಅತ್ತಾವರ ಬಾಬುಗುಡ್ಡೆ ಬಬ್ಬುಸ್ವಾಮಿ ಮತ್ತು ಕೊಟ್ಟಾರ ಕಲ್ಲುರ್ಟಿ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕಿಡಿಗೇಡಿಗಳ ಈ ಕೃತ್ಯ ಬೆಳಕಿಗೆ ಬಂದಿದೆ. 200 ರೂ. ಮುಖಬೆಲೆಯ ಖೋಟಾನೋಟುಗಳಲ್ಲಿ ಅವಹೇಳನಕಾರಿ ಬರಹವಲ್ಲದೆ, ನೋಟನ್ನು ವಿರೂಪಗೊಳಿಸಲಾಗಿದೆ. ಅಲ್ಲದೆ ಬಳಕೆ ಮಾಡಲಾದ ಕಾಂಡೋಮ್ನ್ನು ಕೂಡ ಹುಂಡಿಗೆ ಹಾಕಲಾಗಿದೆ ಮತ್ತು ಕಾಗದದಲ್ಲಿ ಕ್ರೈಸ್ತ ಧರ್ಮದ ಪರವಾಗಿ ಬರೆಯಲಾಗಿದೆ.
ಗುರುವಾರ ಈ ದೈವಸ್ಥಾನಗಳ ಕಾಣಿಕೆ ಹುಂಡಿ ತೆರೆದಾಗ ಇದು ಬೆಳಕಿಗೆ ಬಂದಿದೆ. ಮಾಹಿತಿ ತಿಳಿದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಪಾಂಡೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
...