ಬಜಾಲ್: ಬಾವಿಗೆ ಬಿದ್ದು ಸ್ಕೂಟರ್ ಸವಾರ ಮೃತ್ಯು

Update: 2021-01-04 15:45 GMT

ಮಂಗಳೂರು, ಜ.4: ನಗರ ಹೊರವಲಯದ ಪಕ್ಕಲಡ್ಕ ಸಮೀಪದ ಬಜಾಲ್ ಎಂಬಲ್ಲಿ ಸ್ಕೂಟರ್ ಸವಾರ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ.

ಮೃತ ಸವಾರನನ್ನು ಎಮ್ಮೆಕೆರೆಯ ಅಜಿತ್ (22)ಎಂದು ಗುರುತಿಸಲಾಗಿದೆ. ವರ್ಷದ ಹಿಂದೆ ವಿವಾಹವಾಗಿದ್ದ ಈತ ಸೋಮವಾರ ಬಜಾಲ್‌ನ ಉಲ್ಲಾಸ್ ನಗರದ ಸಂಬಂಧಿಕರ ಮನೆಗೆ ಆಗಮಿಸಿದ್ದ ಎನ್ನಲಾಗಿದೆ.

ಸೋಮವಾರ ರಾತ್ರಿ ಸುಮಾರು 7:15ರ ವೇಳೆಗೆ ಬಜಾಲ್‌ನ ಜನನಿಬಿಡವಾದ ಎತ್ತರದ ಪ್ರದೇಶದಲ್ಲಿ ತನ್ನ ಸ್ಕೂಟರ್‌ನಲ್ಲಿ ಚಲಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಆಕಸ್ಮಿಕವಾಗಿ ರಸ್ತೆಯ ಪಕ್ಕದಲ್ಲೇ ಇದ್ದ ಆವರಣವಿರುವ ಬಾವಿಗೆ ಬಿದ್ದರು ಎನ್ನಲಾಗಿದೆ. ಅತೀ ವೇಗದಲ್ಲಿ ಚಲಿಸುತ್ತಿದ್ದ ಸ್ಕೂಟರ್ ಬಾವಿಯ ಆವರಣಕ್ಕೆ ಬಡಿದು ಅಲ್ಲೇ ಮಗುಚಿ ಬಿದ್ದರೆ, ಸವಾರ ಅಜಿತ್ ಬಾವಿಗೆ ಬಿದ್ದರೆನ್ನಲಾಗಿದೆ. ಬಿದ್ದ ರಭಸಕ್ಕೆ ದೊಡ್ಡದಾದ ಶಬ್ದ ಕೇಳಿದೊಡನೆ ಆಸುಪಾಸು ಇದ್ದ ಸ್ಥಳೀಯರು ತಕ್ಷಣ ಬಂದಿದ್ದು, ನಂತರ ಮೃತದೇಹವನ್ನು ಮೇಲಕ್ಕೆತ್ತಿದರು.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗ ಮತ್ತು ಕಂಕನಾಡಿ ನಗರ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News