ಉಡುಪಿ ಜಿಲ್ಲೆಯ ನಾಲ್ವರಲ್ಲಿ ಕೋವಿಡ್ ಸೋಂಕು ಪತ್ತೆ

Update: 2021-01-07 13:41 GMT

ಉಡುಪಿ, ಜ.6: ಜಿಲ್ಲೆಯಲ್ಲಿ ಗುರುವಾರ ಕೇವಲ ನಾಲ್ವರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ದಿನದಲ್ಲಿ 20 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ, ಸದ್ಯ 93 ಮಂದಿ ಸೋಂಕಿಗಾಗಿ ಚಿಕಿತ್ಸೆಯಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಪಾಸಿಟಿವ್ ಬಂದವರಲ್ಲಿ ತಲಾ ಒಬ್ಬ ಪುರುಷ ಮತ್ತು ಮೂವರು ಮಹಿಳೆಯರಿದ್ದಾರೆ. ಇವರಲ್ಲಿ ಮೂವರು ಉಡುಪಿ ತಾಲೂಕು ಒಬ್ಬರು ಕಾರ್ಕಳ ತಾಲೂಕಿನವರು. ಪಾಸಿಟಿವ್ ಬಂದ ನಾಲ್ಕೂ ಮಂದಿಯಲ್ಲಿ ರೋಗದ ಯಾವುದೇ ಲಕ್ಷಣ ಕಂಡುಬಂದಿಲ್ಲ. ಮೂವರು ಸೋಂಕಿತರಿಗೆ ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ಸೂಡ ತಿಳಿಸಿದರು.

20 ಮಂದಿ ಗುಣಮುಖ: ಬುಧವಾರ ಜಿಲ್ಲೆಯ 20 ಮಂದಿ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿನಿಂದ ಮುಕ್ತಿ ಪಡೆದವರ ಸಂಖ್ಯೆ ಈಗ 22,871ಕ್ಕೇರಿದೆ. ಸದ್ಯ 93 ಮಂದಿ ಕೆವಿಡ್‌ಗೆ ಸಕ್ರಿಯರಿದ್ದಾರೆ ಎಂದರು.

3411 ಮಂದಿಯ ಪರೀಕ್ಷೆ: ಬುಧವಾರ ಜಿಲ್ಲೆಯಲ್ಲಿ ಒಟ್ಟು 3411 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ 3408 ಮಂದಿಯ ಪರೀಕ್ಷೆ ನೆಗೆಟಿವ್ ಫಲಿತಾಂಶ ನೀಡಿದೆ. ಉಳಿದ ಮೂವರಲ್ಲಿ (ಐಸಿಎಂಆರ್ ವರದಿ) ಮಾತ್ರ ಸೋಂಕು ಪತ್ತೆಯಾಗಿದೆ. ಈ ಮೂಲಕ ಇದುವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 23,153 ಆಗಿದೆ ಎಂದವರು ತಿಳಿಸಿದರು.

ಜಿಲ್ಲೆಯಲ್ಲಿ ಬುಧವಾರದವರೆಗೆ ಒಟ್ಟು 3,05,148 ಮಂದಿ ಕೋವಿಡ್ ಪರೀಕ್ಷೆಗೊಳಗಾಗಿದ್ದಾರೆ. ಇವರಲ್ಲಿ 2,81,995 ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿವೆ. ಒಟ್ಟು 23,153 ಮಂದಿ ಈವರೆಗೆ ಪಾಸಿಟಿವ್ ಬಂದಿದ್ದರೆ, 22,871 ಮಂದಿ ಚೇತರಿಸಿಕೊಂಡಿದ್ದಾರೆ.

ಇಂದು ಸಹ ಕೋವಿಡ್‌ನಿಂದ ಯಾರೂ ಮೃತಪಟ್ಟಿಲ್ಲ. ಜಿಲ್ಲೆಯಲ್ಲಿ ಇಂದಿನವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 189 ಮಾತ್ರ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ದಿನದಲ್ಲಿ 33,100ರೂ. ದಂಡ ವಸೂಲಿ

ಕೋವಿಡ್-19ರ ಕುರಿತಂತೆ ಸರಕಾರಿ ಮಾರ್ಗಸೂಚಿಗಳನ್ನು ನಿರ್ಲಕ್ಷಿಸಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ಗಳನ್ನು ಧರಿಸದೇ, ಸುರಕ್ಷಿತಾ ಅಂತರವನ್ನು ಕಾಪಾಡದ ಜಿಲ್ಲೆಯ ಒಟ್ಟು 331 ಮಂದಿಯಿಂದ ಜ.6ರಂದು ವಿವಿಧ ಇಲಾಖೆಗಳು ಒಟ್ಟು 33,100ರೂ. ದಂಡವನ್ನು ವಸೂಲಿ ಮಾಡಿದೆ.

ತಾಲೂಕು ಮಟ್ಟದ ಗ್ರಾಪಂ ವ್ಯಾಪ್ತಿಯಲ್ಲಿ ನಿನ್ನೆ 21 ಮಂದಿಯಿಂದ 21,000ರೂ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಎಂಟು ಮಂದಿಯಿಂದ ಒಟ್ಟು 800ರೂ., ಅಬಕಾರಿ ಇಲಾಖೆಯಿಂದ 800ರೂ., ಪೊಲೀಸ್ ಇಲಾಖೆಯಿಂದ 294 ಮಂದಿಯಿಂದ 29,400ರೂ. ಸೇರಿದಂತೆ ಒಟ್ಟಾರೆ ಯಾಗಿ 331 ಮಂದಿಯಿಂದ 33,100ರೂ.ಗಳನ್ನು ದಂಡರೂಪದಲ್ಲಿ ವಸೂಲಿ ಮಾಡ ಲಾಗಿದೆ.

ಈ ಮೂಲಕ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 19,513 ಮಂದಿಯಿಂದ 21,09,900ರೂ.ಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News