ಬೀಫ್ ಸ್ಟಾಲ್‌ಗೆ ಬೆಂಕಿ ಹಚ್ಚಿದ ಪ್ರಕರಣ: ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಡಿವೈಎಫ್‌ಐ ಒತ್ತಾಯ

Update: 2021-01-09 15:08 GMT

ತೊಕ್ಕೊಟ್ಟು : ಉಳ್ಳಾಲ ನಗರಸಭೆಯ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆಯಲ್ಲಿ ಇತ್ತೀಚೆಗೆ ನಗರಸಭೆಯ ವತಿಯಿಂದ ಅಧಿಕೃತವಾಗಿ ನಿರ್ಮಿಸಿಕೊಟ್ಟಿದ್ದ ಬೀಫ್ ಸ್ಟಾಲ್‌ಗೆ ನಿನ್ನೆ ರಾತ್ರಿ ಬೆಂಕಿ ಹಚ್ಚಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಡಿವೈಎಫ್‌ಐ ಉಳ್ಳಾಲ ವಲಯ ಸಮಿತಿ ಒತ್ತಾಯಿಸಿದೆ.

ಆಹಾರದ ವಿಷಯವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವ ಬಿಜೆಪಿಯ ನೀತಿಯಿಂದ ಪ್ರೇರೇಪಿತರಾಗಿ ಕೆಲ ದುಷ್ಕರ್ಮಿಗಳು ಇಂತಹ ಕಿಡಿಗೇಡಿ ಕೆಲಸಗಳನ್ನು ಮಾಡುತ್ತಿದ್ದು ಪೊಲೀಸರು ಇಂತಹ ದುಷ್ಕರ್ಮಿಗಳನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕ್ರಮಕೈಗೊಂಡರೆ ಮಾತ್ರ ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕಬಹುದು . ಅದು ಬಿಟ್ಟು ಕಾಟಾಚಾರದ ಪ್ರಕರಣ ದಾಖಲಿಸಿದರೆ ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಸಮಾಜಘಾತಕ ಕೃತ್ಯಗಳನ್ನು ನಡೆಸಲು ದಾರಿ ಮಾಡಿಕೊಟ್ಟಂತಾಗುತ್ತದೆ. ಹಾಗಾಗದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕಿದೆ. ನಗರಸಭೆಯ ಅದೇ ಸ್ಥಳದಲ್ಲಿ ಈ ಮಾರಾಟಗಾರರಿಗೆ ಮತ್ತೆ ಸ್ಟಾಲ್ ನಿರ್ಮಿಸಿಕೊಟ್ಟು ಅಲ್ಲಿ ಸಿಸಿಟಿವಿ ಅಳವಡಿಸುವುದರ ಮೂಲಕ ಇವರ ಸೊತ್ತುಗಳಿಗೆ ರಕ್ಷಣೆ ಒದಗಿಸುವ ಕೆಲಸವನ್ನೂ ಮಾಡಲು ಮುಂದಾಗಬೇಕೆಂದು ಡಿವೈಎಫ್‌ಐ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ , ಕಾರ್ಯದರ್ಶಿ ಸುನಿಲ್ ತೇವುಲ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News