ಉಜಿರೆಯಲ್ಲಿ ಪಾಕ್ ಪರ ಘೋಷಣೆ: ನೈಜ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಎಸ್‌ಡಿಪಿಐ ಯಿಂದ ಎಸ್.ಪಿ ಕಚೇರಿ ಚಲೋ

Update: 2021-01-11 13:45 GMT

ಕಳೆದ ಡಿಸಂಬರ್ 30 ರಂದು ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕಾ ದಿನದಂದು ಉಜಿರೆಯ ಮತ ಎಣಿಕಾ ಕೇಂದ್ರದ ಹೊರಗೆ ಎಸ್‌ಡಿಪಿಐ ಕಾರ್ಯಕರ್ತರು ಜಯಶಾಲಿಯಾದ ತಮ್ಮ ಅಭ್ಯರ್ಥಿಗಳ ಪರ ಸಂಭ್ರಮಾಚರಣೆಯಲ್ಲಿ ತೊಡಗಿರುವಾಗ ನಮ್ಮ ಕಾಯಕರ್ತರು ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂಬ ಸುಳ್ಳು ವರದಿಯೊಂದನ್ನು ದಿಗ್ವಿಜಯ ನ್ಯೂಸ್ ಎಂಬ ಕನ್ನಡ ಟಿವಿ ಚಾನೆಲೊಂದು ಪ್ರಸಾರ ಮಾಡಿತ್ತು. ಆ ಕೂಡಲೇ ನಮ್ಮ ಪಕ್ಷದ ಸ್ಥಳೀಯ ನಾಯಕರು ಈ ಬಗ್ಗೆ ದಿಗ್ವಿಜಯ ನ್ಯೂಸ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದೂರನ್ನು ನೀಡಿದರೂ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದರು.

ಆ ನಂತರ ಪೊಲೀಸರು ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಅಂದು ರಾತ್ರಿ 12 ಮಂದಿ ಎಸ್‌ಡಿಪಿಐ ಕಾರ್ಯಕರ್ತರನ್ನು ಅವರ ಮನೆಗಳಿಗೆ ನುಗ್ಗಿ ಅಮಾನುಷವಾಗಿ ಬಂದಿಸಿ ಅವರಲ್ಲಿ 3 ಮಂದಿಯ ವಿರುದ್ದ ದೇಶದ್ರೋಹದ ಕೇಸು ದಾಖಲಿಸಿದ್ದಾರೆ. ಈ ಬಗ್ಗೆ ನಾವು ಎಸ್‌ಡಿಪಿಯ ಪಕ್ಷದ ವತಿಯಿಂದ ಜಿಲ್ಲಾಧ್ಯಂತ ಪತ್ರಿಕಾಗೋಷ್ಠಿ ಹಾಗೂ ಪ್ರತಿಭಟನೆ ಮಾಡಿ ಪೊಲೀಸರ ಪಕ್ಷಪಾತ ದೋರಣೆಯನ್ನು ಖಂಡಿಸಿದೆವು. ಹಾಗೂ ಇದರ ಹಿಂದೆ ಸಂಘಪರಿವಾರ ಹಾಗೂ ದಿಗ್ವಿಜಯ ಚಾನೆಲ್‌ನ ವ್ಯವಸ್ಥಿತ ಷಡ್ಯಂತ್ರ ಅಡಗಿದೆ ಎಂಬ ಸಂಶಯಗಳು ಗಾಡವಾಗಿ ಕಾಡತೊಡಗಿದವು. ಇದೇ ಸಂದರ್ಭದಲ್ಲಿ ಉಜಿರೆಯ ಎಣಿಕಾ ಕೇಂದ್ರದ ಹೊರಗಡೆ ಕೇಸರಿ ಧ್ವಜವನ್ನು ಹಿಡಿದಿದ್ದ ಬಿಜೆಪಿ ಸಂಘಪರಿವಾರದ ಕಾರ್ಯಕರ್ತರು ಪಾಕ್ ಪರವಾಗಿ ಘೋಷಣೆ ಕೂಗುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದವು.
 ಈ ಬಗ್ಗೆ ನಾವು ಜಿಲ್ಲಾಧ್ಯಂತ ಇನ್ನಷ್ಟು ಪ್ರತಿಭಟನೆಗಳನ್ನು ನಡೆಸಿ ನೈಜ ಆರೋಪಿಗಳಾದ ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಲು ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಿದೆವು. ಆದರೆ ಪೊಲೀಸರು ಆರೋಪಿಗಳು ಬಿಜೆಪಿ ಕಾರ್ಯಕರ್ತರೆನ್ನುವ ನೆಲೆಯಲ್ಲಿ ದೂರು ದಾಖಲಿಸಲು ನಿರಾಕರಿಸಿದರು. ಅದರ ವಿರುದ್ಧ ಜನವರಿ 7 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯ ಮುಂದೆ ಮುಷ್ಕರವನ್ನು ಹಮ್ಮಿಕೊಂಡಿದ್ದ ಸಂಧರ್ಭದಲ್ಲಿ ಅಲ್ಲಿಗೆ ಬಂದ ಉನ್ನತ ಪೊಲೀಸ್ ಅಧಿಕಾರಿಗಳು ನಮ್ಮ ನಾಯಕರೊಂದಿಗೆ ಮಾತುಕತೆ ನಡೆಸಿ ನಮ್ಮಿಂದ ತಪ್ಪಾಗಿದೆ, ನಮಗೆ ನಾಲ್ಕು ದಿವಸದ ಕಾಲಾವಕಾಶ ಕೊಡಿ ಖಂಡಿತ ನಾವು ನೈಜ ಆರೋಪಿಗಳನ್ನು ಬಂದಿಸುತ್ತೇವೆ ಎಂದು ಮನವಿ ಮಾಡಿದರು. ಪೊಲೀಸ್ ಅಧಿಕಾರಿಗಳ ವಿನಂತಿಗೆ ಗೌರವ ಕೊಟ್ಟು ಅಂದಿನ ಪ್ರತಿಭಟನೆಯನ್ನು ಕೈ ಬಿಟ್ಟಿದ್ದೇವೆ. ಇದೀಗ ಅಧಿಕಾರಿಗಳು ಕೊಟ್ಟ ನಾಲ್ಕು ದಿನಗಳ ಕಾಲಾವಕಾಶ ಮುಗಿದಿದ್ದು ಇನ್ನೂ ಕೂಡಾ ಯಾವುದೇ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ.

ಇದರ ವಿರುದ್ಧ ಪ್ರಮುಖ ಬೇಡಿಕೆಗಳಾದ ಅಮಾಯಕರಾದ ಮೂರು ಮಂದಿಯನ್ನು ಕೂಡಲೇ ಬಿಡುಗಡೆಗೊಳಿಸಬೇಕು, ನೈಜ ಆರೋಪಿಗಳಾದ ಬಿಜೆಪಿ ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಬೇಕು ಹಾಗೂ ಸುಳ್ಳು ಮೋಕದ್ದಮೆ ದಾಖಲಿಸಿ ಅಮಾಯಕ ಯುವಕರನ್ನು ಜೈಲಿಗಟ್ಟಿದ ಬೆಳ್ತಂಗಡಿ ಪೊಲೀಸ್ ಉಪ ನಿರೀಕ್ಷಕರಾದ ನಂದಕುಮಾರ್ ರವರನ್ನು ಕೂಡಲೇ ಸೇವೆಯಿಂದ ಅಮಾನತು ಗೊಳಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇದೇ ಬರುವ 15ನೇ ತಾರೀಕು ಶುಕ್ರವಾರದಂದು ಅಪರಾಹ್ನ 2:30 ಗಂಟೆಗೆ ಮಂಗಳೂರಿನ ಕ್ಲಾಕ್ ಟವರ್ ನಿಂದ ಎಸ್.ಪಿ ಕಚೇರಿ ಚಲೋ ಎಂಬ ಜನಾಂದೋಲನವನ್ನು ನಡೆಸಲು ತೀರ್ಮಾನಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಪ್ರಜ್ನಾವಂತ ನಾಗರಿಕರೆಲ್ಲರೂ ಭಾಗವಹಿಸುವ ಮೂಲಕ ಪೊಲೀಸ್ ಇಲಾಖೆಯ ಧ್ವಿಮುಖ ದೋರಣೆಯನ್ನು ಖಂಡಿಸಿ ಅಮಾಯಕ ಯುವಕರಿಗೆ ನ್ಯಾಯ ಒದಗಿಸಲು ಸಹಕರಿಸಬೇಕೆಂದು ಈ ಮೂಲಕ ಎಸ್‌ಡಿಪಿಐ ಜಿಲ್ಲಾದ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News