ಶೀಘ್ರದಲ್ಲಿ ದೇಶದ ಆರ್ಥಿಕ ವ್ಯವಸ್ಥೆ ಚೇತರಿಕೆಯಾಗಲಿದೆ: ಸತೀಶ್ ಕಾಶಿನಾಥ್ ಮರಾಠೆ
ಮಂಗಳೂರು,ಜ.11,ದೇಶದ ಅರ್ಥವ್ಯವಸ್ಥೆ ,ಕೆಲವು ತಿಂಗಳ ಬಳಿಕ ಸುಧಾರಣೆ ಯಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕ ಸತೀಶ್ ಕಾಶೀನಾಥ್ ಮರಾಠೆ ತಿಳಿಸಿದ್ದಾರೆ.
‘ಕೋವಿಡ್ ಲಾಕ್ಡೌನ್ ಕಾರಣ ಬ್ಯಾಂಕಿಂಗ್ ವ್ಯವಹಾರ ಹಿನ್ನಡೆ ಅನುಭವಿಸಿತು. ಲಾಕ್ಡೌನ್ ತೆರವು ಬಳಿಕ ದೇಶದ ಆರ್ಥಿಕತೆ ನಿಧಾನಕ್ಕೆ ಚೇತರಿಕೆ ಕಾಣುತ್ತಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಸಹಜ ಸ್ಥಿತಿಗೆ ಮರಳಲಿದೆ’ ಎಂದು ಅವರು ಸೋಮವಾರ ನಗರದಲ್ಲಿ ಹಮ್ಮಿಕೊಂಡ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಲಾಕ್ಡೌನ್ ಬಳಿಕ ದೇಶದ ಪಟ್ಟಣ ಸಹಕಾರಿ ಬ್ಯಾಂಕ್ಗಳು ಉತ್ತಮ ನಿರ್ವಹಣೆ ತೋರಿದ್ದು, ಸುಭದ್ರ ಸ್ಥಿತಿಯಲ್ಲಿವೆ. ಶೇ74.5 ಪಟ್ಟಣ ಸಹಕಾರಿ ಬ್ಯಾಂಕ್ಗಳು ಎ, ಎ ಪ್ಲಸ್, ಬಿ ರೇಟಿಂಗ್ ಹೊಂದಿವೆ. ಪಟ್ಟಣ ಸಹಕಾರ ಬ್ಯಾಂಕ್ಗಳ ಒಟ್ಟು ಎನ್ಪಿಎ ಶೇ 10.8 ಹಾಗೂ ನಿವ್ವಳ ಎನ್ಪಿಎ ಶೇ 5.1 ಆಗಿದೆ. ಇದು ಆರ್ಬಿಐ ಮಾನದಂಡಕ್ಕಿಂತ ಕಡಿಮೆ ಇದೆ. ಆರ್ಬಿಐ ನಿವ್ವಳ ಮಾನದಂಡ ಶೇ 6 ಆಗಿರುತ್ತದೆ’ ಎಂದರು.‘ತಂತ್ರಜ್ಞಾನ ಅಳವಡಿಕೆಯಲ್ಲೂ ಪಟ್ಟಣ ಸಹಕಾರಿ ಬ್ಯಾಂಕ್ಗಳು ಹಿಂದೆ ಬಿದ್ದಿಲ್ಲ. ನೆಫ್ಟ್, ಆರ್ಟಿಜಿಎಸ್ ಸೇರಿದಂತೆ ಅತ್ಯಾಧುನಿಕ ಬ್ಯಾಂಕಿಂಗ್ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿವೆ. ಸಹಕಾರಿ ಕ್ಷೇತ್ರ ಇಂದು ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಿಗೆ ಪರ್ಯಾಯ ಶಕ್ತಿಯಾಗಿ ಮೂಡಿಬರುತ್ತಿದೆ’ ಎಂದು ಹೇಳಿದರು.‘ಸಹಕಾರ ಭಾರತಿ ಸ್ಥಾಪನೆಗೊಂಡು 40 ವರ್ಷಗಳಾಯಿತು. ಇಂದು ಮೇಘಾಲಯ, ಅರುಣಾಚಲ ಪ್ರದೇಶ ಹೊರತುಪಡಿಸಿ ದೇಶದ 450 ಜಿಲ್ಲೆಗಳಲ್ಲಿ ಸಹಕಾರ ಭಾರತಿ ಸದಸ್ಯರಿದ್ದಾರೆ. 20 ಸಾವಿರಕ್ಕೂ ಅಧಿಕ ಸಹಕಾರಿ ಸಂಘಗಳು ಸಹಕಾರ ಭಾರತಿ ತಂಡದಲ್ಲಿವೆ’ಎಂದರು.