ಪ್ರವರ್ಗ 2ಎಯಲ್ಲಿ ಒಳಮೀಸಲಾತಿಗೆ ಕುಲಾಲ ಸಮುದಾಯ ಮನವಿ

Update: 2021-01-12 14:51 GMT

ಉಡುಪಿ, ಜ. 12: ರಾಜ್ಯದಲ್ಲಿರುವ ವಿವಿಧ ಜಾತಿ/ಜನಾಂಗಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಹೊಸದಾಗಿ ಸೇರಿಸಲು, ಪ್ರವರ್ಗ ಬದಲಾವಣೆಗೆ, ಪರ್ಯಾಯ ಪದ ಸೇರ್ಪಡೆಗೆ, ಕಾಗುಣಿತ ದೋಷ ತಿದ್ದುಪಡಿ ಹಾಗೂ ಇತರೆ ವಿಷಯಗಳಿಗೆ ಸಂಬಂಧಿ ಸಿದಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಲ್ಲಿ ಈಗಾಗಲೇ ಸ್ವೀಕೃತಗೊಂಡಿರುವ ಮನವಿಗಳ ಬಹಿರಂಗ ವಿಚಾ ರಣೆ ಕಾರ್ಯಕ್ರಮ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಯಿತು.

ಮೊದಲಿಗೆ ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ, ಮಂಗಳೂರು ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಸಂಘಟನೆಗಳ ಒಕ್ಕೂಟ, ಉಡುಪಿ ಜಿಲ್ಲಾ ಕುಲಾಲ ಕುಂಬಾರ ಮಾತೃ ಸಂಘದ ಪರವಾಗಿ ಮನವಿ ಅರ್ಪಿಸಿದ ಉಡುಪಿ ಕುಂಬಾರರ ಸಂಘದ ಜಿಲ್ಲಾಧ್ಯಕ್ಷ ಸುನಿಲ್ ಎಸ್.ಮೂಲ್ಯ, ರಾಜ್ಯದಲ್ಲೀಗ ಸುಮಾರು 15 ಲಕ್ಷದಷ್ಟು ಕುಂಬಾರ ಸಮುದಾಯ ದವರಿದ್ದು, ಈ ಸಮುದಾಯವನ್ನು ‘ಪ್ರವರ್ಗ-2ಎ’ ಯಲ್ಲಿ ಸೇರಿಸಲಾಗಿದೆ. ಇದರಿಂದ ತೀರಾ ಹಿಂದುಳಿದ ನಮ್ಮ ಸಮುದಾಯಕ್ಕೆ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಹೀಗಾಗಿ ರಾಜ್ಯದ ಕುಂಬಾರ ಸಮುದಾಯಕ್ಕೆ ಒಳಮೀಸಲಾತಿಯನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಇದರೊಂದಿಗೆ ಕುಂಬಾರಿಕಾ ಗುಡಿಕೈಗಾರಿಕೆಯನ್ನು ಕೌಶಲ್ಯಾಭಿವೃದ್ದಿ ಯೋಜನೆ ಯಡಿ ಸೇರ್ಪಡೆಗೊಳಿಬೇಕು. ಕುಂಬಾರ ಯುವಕರಿಗೆ ಹೆಚ್ಚಿನ ಉದ್ಯೋಗಾ ವಕಾಶ ಮತ್ತು ತರಬೇತಿಗೆ ವ್ಯವಸ್ಥೆ ಕಲ್ಪಿಸಬೇಕು. ಸದ್ಯ ದೇವರಾಜು ಅರಸು ನಿಗಮದಲ್ಲಿರುವ ಕುಂಬಾರ ಅಭಿವೃಧ್ದಿ ಮಂಡಳಿಯನ್ನು ಅಲ್ಲಿಂದ ಪ್ರತ್ಯೇಕಿಸಿ, ಕುಂಬಕಲಾ ಅಭಿವೃಧ್ದಿ ಮಂಡಳಿ ಮಾಡಬೇಕು ಎಂದು ಸುನೀಲ್ ಮೂಲ್ಯ ಹಾಗೂ ಇತರ ಮುಖಂಡರು ತಮ್ಮ ಸಮುದಾಯದ ಪರವಾಗಿ ಮನವಿ ಮಾಡಿದರು.

ಒಳಮೀಸಲಾತಿಗೆ ಒತ್ತು ನೀಡುವ ದಾಖಲಾತಿಯನ್ನು ಕೊಡಿ. ನಿಮ್ಮ ದಾಖಲೆ ಹಾಗೂ ಮನವಿಗಳನ್ನು ಆಯೋಗದ ಶಿಫಾರಸ್ಸಿ ನೊಂದಿಗೆ ಸರಕಾರಕ್ಕೆ ಕಳುಹಿಸಿ ಕೊಡುವುದಾಗಿ ಜಯಪ್ರಕಾಶ್ ಹೆಗ್ಡೆ ಭರವಸೆ ನೀಡಿದರು.

ಮಲಯಾಳಂ ಮಾತೃಭಾಷೆಯ ಕೇರಳ ಮೂಲದ ಈಗ ಗಡಿಭಾಗವಾದ ಪುತ್ತೂರು, ಸುಳ್ಯ, ಮಡಿಕೇರಿಗಳಲ್ಲಿ ಹೆಚ್ಚಾಗಿ ವಾಸ್ತವ್ಯ ಹೂಡಿರುವ ಮುಖಾರಿ/ ಮುವಾರಿ ಸಮುದಾಯ ರಾಜ್ಯದಲ್ಲಿ ಇದುವರೆಗೆ ಯಾವುದೇ ಪ್ರವರ್ಗಕ್ಕೆ ಸೇರ್ಪಡೆಗೊಂಡಿಲ್ಲ. ಇದರಿಂದ ಸಮುದಾಯ ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮೀಸಲಾತಿಯಿಂದ ವಂಚಿತರಾಗಿದೆ ಎಂದು ಪುತ್ತೂರು ಈಶ್ವರಮಂಗಲ ಮುಖಾರಿ/ಮುವಾರಿ ಸಮುದಾಯ ಸಂಘದ ಸಲಹೆಗಾರ ಬಾಲಕೃಷ್ಣ ಎ. ಆಯೋಗದ ಗಮನ ಸೆಳೆದರು.

ಕೇರಳ ರಾಜ್ಯದಲ್ಲಿ ಹಾಗೂ ಕೇಂದ್ರ ಮೀಸಲಾತಿ ಪಟ್ಟಿಯಲ್ಲಿ ಸಮುದಾಯ ಈಗಾಗಲೇ ಓಬಿಸಿ ವರ್ಗದಲ್ಲಿ ಸೇರ್ಪಡೆಯಾಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಮಾತ್ರ ನಾವು ಅತಂತ್ರರಾಗಿದ್ದೇವೆ. ಆದುದರಿಂದ ರಾಜ್ಯದಲ್ಲಿಯೂ ನಮ್ಮನ್ನು ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡುವಂತೆ ಬಾಲಕೃಷ್ಣ ಎ. ಹಾಗೂ ಮುಖಾರಿ ಸಮಾಜದ ಸಂಘದ ಅಧ್ಯಕ್ಷ ಶಂಕರ ಮುಖಾರಿ ಮನವಿ ಮಾಡಿದರು.

ಕೇರಳ ರಾಜ್ಯದಲ್ಲಿ ಓಬಿಸಿ ಸೇರ್ಪಡೆ ಮಾಡಿರುವ ಕುರಿತ ಆದೇಶದ ಪ್ರತಿ ಮತ್ತಿತರ ದಾಖಲೆಗಳನ್ನು ನೀಡುವಂತೆ ತಿಳಿಸಿದ ಆಯೋಗದ ಅಧ್ಯಕ್ಷರು, ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕೇರಳ ಮೂಲದ ನಾಯರ್ ಜಾತಿಯವರು ರಾಜ್ಯದಲ್ಲಿ 15 ಲಕ್ಷಕ್ಕೂ ಅಧಿಕ ಮಂದಿ ಇದ್ದು, ಈ ಜಾತಿಯವರು ಕರ್ನಾಟಕದ ಒಕ್ಕಲಿಗ, ಬಂಟ ಜಾತಿಗೆ ಸಾಮ್ಯತೆ ಹೊಂದಿದ್ದು, ಇವರನ್ನು ಇದುವರೆಗೂ ರಾಜ್ಯದ ಯಾವುದೇ ವರ್ಗದಲ್ಲಿ ಗುರುತಿಸಿಲ್ಲ. ಆದ್ದರಿಂದ ಅವರನ್ನು ಹಿಂದುಳಿದ ಪಟ್ಟಿಗೆ ಸೇರ್ಪಡೆ ಮಾಡಿ, ಸೂಕ್ತ ಮೀಸಲಾತಿ ಸೌಲ್ಯ ಒದಗಿಸುವಂತೆ ಮತ್ತು ನಾಯರ್ ಹೆಸರನ್ನು ಆಂಗ್ಲಬಾಷೆ ಯಲ್ಲಿ ಬರೆಯುವಾಗ ಕಂಡುಬರುವ ಕಾಗುಣಿತ ದೋಷವನ್ನು ಸರಿಪಡಿಸುವಂತೆ ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಅಧ್ಯಕ್ಷ ಮುರುಳಿ ಹೆಚ್. ಹಾಗೂ ಸಮುದಾಯದ ಮುಖಂಡರು ಕೋರಿದರು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಆಯೋಗದ ಅಧ್ಯಕ್ಷರು ಭರವಸೆ ನೀಡಿದರು.

ಕೇರಳ ಮೂಲದ ಮಲಯಾಳ ಮಾತೃಭಾಷೆಯ ಬನ್ನರ್ ಜಾತಿಯನ್ನು ಪರಿಶಿಷ್ಟ ವರ್ಗಕ್ಕೆ ಸೇರ್ಪಡೆ ಮಾಡುವ ಕುರಿತಂತೆ ಸಲ್ಲಿಕೆಯಾದ ಮನವಿಗೆ ಸಂಬಂದಿಸಿದಂತೆ, ಸಮಾಜ ಕಲ್ಯಾಣ ಇಲಾಖೆಗೆ ಸೂಕ್ತ ದಾಖಲೆಗಳೊಂದಿಗೆ ಮನವಿ ಸಲ್ಲಿಸುವಂತೆ ಸುಳ್ಯ ಕಸಬಾದ ಸರಸ್ವತಿ ಕೆ. ಅವರಿಗೆ ಅಧ್ಯಕ್ಷರು ತಿಳಿಸಿದರು. ಇದೇ ಸಲಹೆಯನ್ನು ಅವರು ಕಲ್ಲರ್ ಜಾತಿಯನ್ನು ಪ.ಜಾತಿ ಮೀಸಲಾತಿಗೆ ಸೇರಿಸಲು ಮನವಿ ಮಾಡಿದ ಪುತ್ತೂರು ಕೆಯ್ಯೂರು ಗ್ರಾಮದ ವಿ.ಮಾರಿಮುತ್ತು ಅವರಿಗೂ ನೀಡಿದರು.

ಬಹಿರಂಗ ವಿಚಾರಣೆಯ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಕಲ್ಯಾಣ್‌ಕುಮಾರ್ ಎಚ್.ಎಸ್., ಬಿ.ಎಸ್. ರಾಜಶೇಖರ್, ಕೆ.ಟಿ.ಸುವರ್ಣ, ಅರುಣ್ ‌ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News