ಬಾರ್ ಗೆ ನುಗ್ಗಿ ಲಕ್ಷಾಂತರ ರೂ. ನಗದು ಕಳವು

Update: 2021-01-14 15:20 GMT

ಬಂಟ್ವಾಳ, ಜ.14: ತಾಲೂಕಿನ ಸಜಿಪ ಮುನ್ನೂರು ಗ್ರಾಮದ ಮಾರ್ನಬೈಲ್ ಸಮೀಪದ ಕಂದೂರಿನಲ್ಲಿರುವ ಸುರಭಿ ಬಾರ್ ಆ್ಯಂಡ್ ಫ್ಯಾಮಿಲಿ ರೆಸ್ಟೋರೆಂಟಿಗೆ ಕಳ್ಳರು ನುಗ್ಗಿ ನಗದು, ಮದ್ಯದ ಬಾಟ್ಲಿಯನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. 

ಬಾರಿನ ಮುಂಭಾಗದ ಶಟರ್ ಬೀಗ ಮುರಿದು ಒಳಗೆ ನುಗ್ಗಿರುವ ಕಳ್ಳರು ಕೌಂಟರಿನ ಡ್ರಾವರ್ ಬೀಗ ಮುರಿದು ಅದರಲ್ಲಿ ಈ ಹಿಂದಿನ ವ್ಯಾಪಾರದ ನಗದು 2,30,200 ಲಕ್ಷ ರೂ. ಹಣ, ಸಿಸಿ ಕ್ಯಾಮಾರ ಡಿವಿಆರ್ ಹಾಗೂ ಮೂರು ಬಿಯರ್ ಬಾಟಲಿಗಳನ್ನು ಕಳವುಗೈದಿದ್ದಾರೆ.

ಗುರುವಾರ ಬೆಳಗ್ಗೆ ಬಾರ್ ನ ಮೆನೇಜರ್ ಪ್ರವೀಣ್ ಎಂಬವರು ಬಾಗಿಲು ತೆರೆಯಲು ಬಂದಾಗ ಕಳವು ಕೃತ್ಯ ಬಯಲಿಗೆ ಬಂದಿದೆ. ಸುದ್ದಿ ತಿಳಿದ ಸಿಐ ನಾಗರಾಜ್, ಬಂಟ್ವಾಳ ನಗರ ಠಾಣೆಯ ಎಸ್ಸೈ ಅವಿನಾಶ್, ಅಪರಾಧ ವಿಭಾಗದ ಎಸ್ಸೈ ಕಲೈಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಶ್ವಾನದಳ, ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಲಾಗಿದೆ. ಬಂಟ್ವಾಳ ನಗರ  ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News