ಟಿಆರ್ಪಿ ಹಗರಣದ ಕುರಿತ ಸ್ಫೋಟಕ ಮಾಹಿತಿಯಿರುವ ಅರ್ನಬ್‌ ಗೋಸ್ವಾಮಿಯ 500 ಪುಟಗಳ ವಾಟ್ಸಾಪ್‌ ಚಾಟ್ ಬಹಿರಂಗ!

Update: 2021-01-15 11:08 GMT

ಹೊಸದಿಲ್ಲಿ,ಜ.15: ರಿಪಬ್ಲಿಕ್‌ ಟಿವಿ ಮುಖ್ಯಸ್ಥ ಅರ್ನಬ್‌ ಗೋಸ್ವಾಮಿಯದ್ದು ಎನ್ನಲಾದ ವಾಟ್ಸಾಪ್‌ ಚಾಟ್‌ ಅನ್ನು ಮುಂಬೈ ಪೊಲೀಸರು ಬಹಿರಂಗಗೊಳಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಈ ಕುರಿತು ಟ್ವಿಟರ್‌ ನಾದ್ಯಂತ ಇಂದು ಅರ್ನಬ್‌ ಗೋಸ್ವಾಮಿ ಟ್ರೆಂಡಿಂಗ್‌ ಆಗಿದ್ದು, ಈ ಚಾಟ್‌ ನಲ್ಲಿ ಟಿಆರ್ಪಿ ಹಗರಣಕ್ಕೆ ಸಂಬಂಧಿಸಿದ ವಿಚಾರಗಳು ಬಹಿರಂಗಗೊಂಡಿದೆ ಎಂದು ತಿಳಿದು ಬಂದಿದೆ.

ಅರ್ನಬ್‌ ಗೋಸ್ವಾಮಿ ಮತ್ತು ಇತ್ತೀಚೆಗಷ್ಟೇ ಬಂಧನಕ್ಕೊಳಗಾಗಿರುವ ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ನ ಮುಖ್ಯಸ್ಥರೊಂದಿಗಿನ ಮಾತುಕತೆಯ ಎನ್ನಲಾದ ಸ್ಕ್ರೀನ್ ಶಾಟ್ ಗಳು ಕೂಡಾ ಸದ್ಯ ವೈರಲ್ ಆಗಿದೆ. ಈ ಚಾಟ್ ಗಳಲ್ಲಿ ಕಂಗಣಾ ರಣಾವತ್ ಕುರಿತೂ ಉಲ್ಲೇಖಿಸಲಾಗಿದೆ. ಪ್ರಧಾನ ಮಂತ್ರಿ ಕಚೇರಿಯೊಂದಿಗಿನ ನಿಕಟ ಸಂಬಂಧವನ್ನೂ ಕೂಡಾ ಈ ಚಾಟ್ ನಲ್ಲಿ ಉಲ್ಲೇಖಿಸಲಾಗಿದೆ.

ಪ್ರಮುಖವಾಗಿ, ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿಯ ಸಾವಿನ ಕುರಿತು ಅರ್ನಬ್ ಕೀಳು ಅಭಿರುಚಿಯ ಸಂದೇಶ ಕಳುಹಿಸಿದ್ದಾರೆ ಎನ್ನಲಾದ ಸ್ಕ್ರೀನ್ ಶಾಟ್ ಕೂಡಾ ಇದರಲ್ಲಿ ಒಳಗೊಂಡಿದೆ. “ನನಗೆ ದಿಲ್ಲಿಯಲ್ಲಿ ತುರ್ತು ಮೀಟಿಂಗ್ ಇದ್ದು, ಜೇಟ್ಲಿ ಸಾಯದ ಕಾರಣ ಅದನ್ನು ನಾನು ಮುಂದೂಡುತ್ತಲೇ ಇದ್ದೇನೆ” ಎಂದಿದ್ದೂ ದಾಖಲಾಗಿದೆ. ಈ ಕುರಿತು ಯೂಟ್ಯೂಬರ್ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿರುವ ದ್ರುವ್ ರಾಠೀ ಟ್ವೀಟ್ ಮೂಲಕ ಉಲ್ಲೇಖಿಸಿದ್ದಾರೆ. ಪ್ರಶಾಂತ್ ಭೂಷಣ್ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಕರ್ತರು ಈ ಕುರಿತಾದಂತೆ ಟ್ವಿಟರ್ ನಾದ್ಯಂತ ವ್ಯಂಗ್ಯ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ಈ ವಿಚಾರದ ಕುರಿತಾದಂತೆ ಮುಂಬೈ ಪೊಲೀಸ್‌ ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ ಎಂದು ತಿಳಿದು ಬಂದಿದೆ.

ಈ ಕುರಿತಾದ ಕೆಲವು ಟ್ವೀಟ್ ಗಳು ಇಲ್ಲಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News