ಮಾನಹಾನಿ ಪ್ರಕರಣ: ಕಂಗನಾ ರಣಾವತ್‌ಗೆ ಸಮನ್ಸ್

Update: 2021-01-21 14:30 GMT

ಮುಂಬೈ, ಜ.21: ಸಾಹಿತಿ ಮತ್ತು ಗೀತರಚನೆಗಾರ ಜಾವೇದ್ ಅಖ್ತರ್ ದಾಖಲಿಸಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಹುವಿನ ಪೊಲೀಸ್ ಠಾಣೆಯಲ್ಲಿ ಹಾಜರಾಗುವಂತೆ ಮುಂಬೈ ಪೊಲೀಸರು ನಟಿ ಕಂಗನಾ ರಣಾವತ್‌ಗೆ ಸಮನ್ಸ್ ಜಾರಿಗೊಳಿಸಿದ್ದಾರೆ.

ತನ್ನ ಘನತೆಗೆ ಕುಂದುಂಟು ಮಾಡಲು ನಟಿ ಕಂಗನಾ ಪ್ರಯತ್ನಿಸಿದ್ದಾರೆ ಎಂದು ಅಖ್ತರ್ ನವೆಂಬರ್‌ನಲ್ಲಿ ದೂರು ದಾಖಲಿಸಿದ್ದರು. ಅಖ್ತರ್ ದಾಖಲಿಸಿರುವ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಕಳೆದ ಡಿಸೆಂಬರ್‌ನಲ್ಲಿ ಮುಂಬೈಯ ನ್ಯಾಯಾಲಯ ಪೊಲೀಸರಿಗೆ ಸೂಚಿಸಿತ್ತು. ಡಿಸೆಂಬರ್ 19ರಂದು ನಡೆದ ವಿಚಾರಣೆ ಸಂದರ್ಭ ವಾದ ಮಂಡಿಸಿದ್ದ ಅಖ್ತರ್ ಪರ ವಕೀಲರು ‘ ಜುಲೈಯಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಗೆ ನೀಡಿದ ಸಂದರ್ಶನದಲ್ಲಿ, ನಟ ಸುಷಾಂತ್ ಸಿಂಗ್ ರಜಪೂತ್ ಸಾವಿನ ಕುರಿತ ಪ್ರಶ್ನೆಗೆ ಉತ್ತರಿಸುವಾಗ ಕಂಗನಾ ಅನವಶ್ಯಕವಾಗಿ ಅಖ್ತರ್ ಹೆಸರನ್ನು ಪ್ರಸ್ತಾವಿಸಿದ್ದರು.

ಆ ಬಳಿಕ ಅಖ್ತರ್‌ಗೆ ಹಲವು ದ್ವೇಷ ಸಂದೇಶ ಬಂದಿದೆ’ ಎಂದು ಹೇಳಿದ್ದರು. ವಾದವನ್ನು ಆಲಿಸಿದ ನ್ಯಾಯಾಲಯ, ಜನವರಿ 16ರ ಒಳಗೆ ತನಿಖಾ ವರದಿ ಸಲ್ಲಿಸುವಂತೆ ಜುಹು ಪೊಲೀಸರಿಗೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News