ಉಡುಪಿಯಲ್ಲಿ 5 ಕೋ.ರೂ. ವೆಚ್ಚದಲ್ಲಿ ಕರಕುಶಲ ವಸ್ತುಗಳ ಶೋರೂಮ್ ನಿರ್ಮಾಣ: ಡಾ.ಬೇಳೂರು ರಾಘವೇಂದ್ರ

Update: 2021-01-22 14:48 GMT

ಉಡುಪಿ, ಜ.22: ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಿಂದ ಐದು ಕೋಟಿ ರೂ. ವೆಚ್ಚದಲ್ಲಿ ಉಡುಪಿಯಲ್ಲಿ ಕರಕುಶಲ ವಸ್ತುಗಳ ಶೋರೂಮ್ ಹಾಗೂ ಕುಂದಾಪುರದಲ್ಲಿ ಉತ್ಪಾದನಾ ಘಟಕ ನಿರ್ಮಾಣ ಕಾರ್ಯವು ಮೂರು ತಿಂಗಳಲ್ಲಿ ಆರಂಭ ಗೊಳ್ಳಲಿದೆ ಎಂದು ನಿಗಮದ ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ ತಿಳಿಸಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾದ ಆರು ದಿನಗಳ ಕರಕುಶಲ ಮೇಳದಲ್ಲಿ ಶುಕ್ರವಾರ ಭಾಗವಹಿಸಿ ಅವರು ಮಾತನಾಡು ತಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದು, ಅದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ. ಈ ಭಾಗದ ಕರಕುಶಲ ಕರ್ಮಿಗಳಿಗೆ ಉತ್ತಮವಾದ ಕಟ್ಟಡ ನಿರ್ಮಾಣ ಮಾಡಿ, ಅವರಿಗೆ ಅಗತ್ಯ ವಾಗುವ ಎಲ್ಲಾ ಸೌಲಭ್ಯಗಳ್ನು ಒದಗಿಸಲಾಗುವುದು ಎಂದರು.

ಸ್ಥಳೀಯವಾಗಿ ಉತ್ಪಾದನೆಯಾಗುವ ವಸ್ತುಗಳಿಗೆ ಹೆಚ್ಚಿನ ಒತ್ತು ನೀಡುವ ಕಾರ್ಯ ಮಾಡಲಾಗುವುದು. ಸ್ವಾವಲಂಬಿ ಬದುಕು ನಡೆಸುತ್ತಿರುವ ಕರಕುಶಲ ಕರ್ಮಿಗಳು, ಉತ್ಪಾದಿಸುವ ವಸ್ತುಗಳನ್ನ್ನು ಖರೀದಿಸುವ ಮೂಲಕ ಅವರಿಗೆ ಹೆಚ್ಚಿನ ಬೆಂಬಲ ನೀಡ ಬೇಕು. ವಿದೇಶಿ ವಸ್ತುಗಳಿಗೆ ಪ್ರೋತ್ಸಾಹ ನೀಡುವ ಬದಲು, ದೇಶೀಯ ವಸ್ತುಗಳನ್ನ ಖರೀದಿ ಮಾಡಬೇಕಾದ ಅವಶ್ಯಕತೆ ಇದೆ ಎಂದು ಅವರು ಹೇಳಿದರು.

ಕರಕುಶಲ ವಸ್ತುಗಳನ್ನು ತಯಾರಿಸಲು ಕುಶಲಕರ್ಮಿಗಳಿಗೆ, ಸಬ್ಸಿಡಿ ದರದಲ್ಲಿ ಗಂಧದ ಪರಿಕರ ನೀಡಲಾಗುವುದು. ಇಡೀ ರಾಜ್ಯದಲ್ಲಿ ಹೊಸದಾಗಿ 12 ಶೋ ರೂಮ್ಗಳನ್ನು ಸ್ಥಾಪಿಸುವ ಉದ್ದೇಶವಿದ್ದು, ಕರ್ನಾಟಕ ಪರಂಪರೆ ಸೂಚಿಸುವ, ಹಂಪಿ, ಮೈಸೂರು ಅರಮನೆ ಬೇಲೂರು ಹಳೇಬೀಡು ಮಾದರಿಯ ವಸ್ತು ಗಳನ್ನು ತಯಾರಿಸುವಂತೆ ಕರಕುಶಲ ಕರ್ಮಿಗಳಿಗೆ ಮನವಿ ವಾಡಿದ್ದೇನೆ ಎಂದು ಅವರು ತಿಳಿಸಿದರು.

ಮೇಳದಲ್ಲಿ ಪರ್ಯಾಯ ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹಾಗೂ ಸೋದೆ ವಾದಿರಾಜ ಮಠಾಧೀಶ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಈ ವೇಳೆ ಗುಡಿಕೈಗಾರಿಕೆಯ ಮಡಿಕೆ ಹಾಗೂ ಬಿದಿರಿನ ಕರಕುಶಲ ವಸ್ತು ಗಳ ಪ್ರದರ್ಶನ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News