ನಾನೂ ದಿಲ್ಲಿ ಸಿಎಂ ಕೇಜ್ರಿವಾಲ್ ಅವರ ದೊಡ್ಡ ಅಭಿಮಾನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್

Update: 2021-01-25 17:29 GMT

ಬೆಂಗಳೂರು, ಜ. 25: ನಾನು ಆರೋಗ್ಯ ಸಚಿವನಾಗಿದ್ದಾಗ ಹೊಸದಿಲ್ಲಿಗೆ ಭೇಟಿಕೊಟ್ಟು ಅಲ್ಲಿನ ಮೊಹಲ್ಲಾ ಕ್ಲಿನಿಕ್, ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಆಶ್ಚರ್ಯಗೊಂಡಿದ್ದೆ. ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಕ್ರಾಂತಿಕಾರಕ ಬದಲಾವಣೆಗಳನ್ನು ನೋಡಿ ಅವರ ದೊಡ್ಡ ಅಭಿಮಾನಿಯಾದೆ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ತಿಳಿಸಿದ್ದಾರೆ.

ಸೋಮವಾರ ಶಾಂತಿನಗರದ ಬಸಪ್ಪ ರಸ್ತೆಯಲ್ಲಿ ಇರುವ ಆಮ್ ಆದ್ಮಿ ಕ್ಲಿನಿಕ್ ಕಾರ್ಯವೈಖರಿ ವೀಕ್ಷಣೆಯ ನಂತರ ಮಾತನಾಡಿದ ಅವರು, ಕೇಜ್ರಿವಾಲ್ ಅವರಿಗೆ ದಿಲ್ಲಿ ಜನತೆ ಒಂದೇ ಒಂದು ಬಾರೀ ಅವಕಾಶ ಕೊಟ್ಟರು. ಈ ಅವಕಾಶವನ್ನು ಬಳಸಿಕೊಂಡ ಅವರು ಜನಪರ ಸೇವೆ ಮಾಡುವುದಕ್ಕೆ ಬಳಸಿಕೊಂಡರು. ಕೇಜ್ರಿವಾಲ್ ಬದಲಾವಣೆ ತಂದಿರುವ ಆರೋಗ್ಯ, ಶಿಕ್ಷಣ, ಉಚಿತ ನೀರು, ವಿದ್ಯುತ್, ಅಗತ್ಯ ಮೂಲಸೌಕರ್ಯಗಳನ್ನು ಎಲ್ಲ ರಾಜ್ಯಗಳಲ್ಲೂ ಆಗಬೇಕು ಎಂದರು.

ಆಮ್ ಆದ್ಮಿ ಪಕ್ಷ ಸೇರುತ್ತೀರ ಎನ್ನುವ ಪತ್ರಕರ್ತರ ಪ್ರಶ್ನೆಗೆ ‘ನಾನೂ ಒಬ್ಬ ಆಮ್ ಆದ್ಮಿ, ಅಂದರೆ ಜನಸಾಮಾನ್ಯ. ಜನಸಾಮಾನ್ಯರಿಗೆ ಯಾರು ಒಳ್ಳೆಯದನ್ನು ಮಾಡುತ್ತಾರೋ ಅವರ ಜೊತೆ ನಾನು ಸದಾ ಇರುತ್ತೇನೆ' ಎಂದ ಅವರು, ಬೆಂಗಳೂರಿನ ಶಾಂತಿನಗರದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸೇರಿ ಪ್ರಾರಂಭಿಸಿರುವ ಈ ದಿಲ್ಲಿ ಮಾದರಿಯ ಮೊಹಲ್ಲಾ ಕ್ಲಿನಿಕ್ ನೋಡಿ ನನಗೆ ಸಂತೋಷವನ್ನುಂಟು ಮಾಡಿದೆ. ಯಾವುದೇ ರೀತಿಯ ಅಂತಸ್ತು, ಆದಾಯ, ಜಾತಿ ಕೇಳದೆ ಎಲ್ಲರಿಗೂ ಈ ಸೌಲಭ್ಯ ವಿಸ್ತರಿಸಿರುವುದು ನನಗೆ ಮೆಚ್ಚುಗೆಯಾದ ಅಂಶಗಳಲ್ಲಿ ಒಂದು ಎಂದರು.

ಕೊರೋನ ಸಂಕಷ್ಟದ ನಂತರ ಸಣ್ಣಪುಟ್ಟ ಖಾಯಿಲೆಗಳಿಗೂ ಮಾತ್ರೆ ತೆಗೆದುಕೊಳ್ಳಲು ಜನ ಕಷ್ಟಪಡುತ್ತಿದ್ದಾನೆ. ಆಮ್ ಆದ್ಮಿ ಕ್ಲಿನಿಕ್ ಒಳಗೆ ಬಂದರೆ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳೇ ಇದ್ದಾರೆ, ಇವರೆಲ್ಲ ಮನೆಗೆಲಸಕ್ಕೆ ಹೋಗುವಂತಹ ಹೆಣ್ಣುಮಕ್ಕಳು ಇಂತಹ ಕಟ್ಟ ಕಡೆಯ ಜನರ ಸೇವೆಗೆ ನಿಂತಿರುವ ಆಮ್ ಆದ್ಮಿಗಳಿಗೆ ವಂದನೆಗಳು ಎಂದು ಅವರು ತಿಳಿಸಿದರು.

ಅನಂತರ ಆಮ್ ಆದ್ಮಿ ಕ್ಲಿನಿಕ್‍ಗೆ ಬಂದಂತಹ ರೋಗಿಗಳ ಕುಶಲೋಪರಿ ವಿಚಾರಿಸಿದರು. ಈ ವೇಳೆ ಪಕ್ಷದ ಸಂಚಾಲಕ ಪೃಥ್ವಿ ರೆಡ್ಡಿ, ಕಾರ್ಯದರ್ಶಿ ಸಂಚಿತ್ ಸಹಾನಿ, ಹಿರಿಯ ಮುಖಂಡರಾದ ಗೋಪಾಲ್ ರೆಡ್ಡಿ, ಹರಿಹರನ್, ರೇಣುಕಾ ವಿಶ್ವನಾಥನ್, ಜಂಟಿ ಕಾರ್ಯದರ್ಶಿ ದರ್ಶನ್, ಮುಖ್ಯ ವಕ್ತಾರ ಶರತ್ ಖಾದ್ರಿ, ಉಪಾಧ್ಯಕ್ಷ ಸುರೇಶ್ ರಾಥೋಡ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News