ಉಡುಪಿ: ಜಿಲ್ಲಾಧಿಕಾರಿಗಳ ನಡೆ ಗ್ರಾಮದೆಡೆಗೆ ಕಾರ್ಯಕ್ರಮ

Update: 2021-01-25 17:17 GMT

ಕಾಪು : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ನಡೆ ಗ್ರಾಮದೆಡೆಗೆ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಶನಿವಾರದಿಂದ ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದೆ ಎಂದು  ಕಂದಾಯ ಇಲಾಖೆಯ ಸಚಿವ ಆರ್. ಅಶೋಕ್ ಹೇಳಿದರು.

ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಕಾಪು ಮಿನಿ ವಿಧಾನಸೌಧ ಕಟ್ಟಡಕ್ಕೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಕಂದಾಯ ಇಲಾಖೆಗಳ ಸಮಸ್ಯೆಯಿಂದ ಜನ ಬೇಸತ್ತಿದ್ದು, ಜನರ ಮನೆ ಬಾಗಿಲಿಗೆ ಕಂದಾಯ ಇಲಾಖೆ ತಲುಪಿಸ ಬೇಕು ಹಾಗೂ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಿ ಜನರಿಗೆ ಆಗುವ ತೊಂದರೆಯನ್ನು ತಪ್ಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆರಂಭಿಸಲಾಗುವುದು.  ಪ್ರತಿ ತಿಂಗಳ ಮೂರನೇ ಶನಿವಾರದಂದು ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ಗ್ರಾಮದಲ್ಲಿ ಬೆಳಗ್ಗೆ ಯಿಂದ ಸಂಜೆವರೆಗೆ ಇದ್ದು, ಜನರ ಸಮಸ್ಯೆಗಳಿಗೆ ಸ್ಥಳದಲಲೇ ಪರಿಹಾರ ನೀಡಲು ತೀರ್ಮಾಣಿಸಲಾಗಿದೆ. 

ಕಾರ್ಯಕ್ರಮದಲ್ಲಿ ಏನೇನು ಜೋಡಿಸಬೇಕು ಎಂಬುವುದರ ಬಗ್ಗೆ ಈಗಾಗಲೇ ಸುತ್ತೋಲೆಯನ್ನು ಹೊರಡಿಸಲಾಗಿದೆ ಎಂದ ಅವರು, ಕಂದಾಯ ಸಚಿವನಾಗಿ ನಾನೂ ಕೂಡಾ ಗ್ರಾಮಗಳಲ್ಲಿ ವಾಸ್ತವ್ಯ ಹೂಡುತ್ತೇನೆ. ಗ್ರಾಮ ವಾಸ್ತವ್ಯದಲ್ಲಿ ಅಧಿಕಾರಿಗಳು ಅಲ್ಲಿನ ಅಂಗನವಾಡಿ, ಶಾಲೆ ಅಥವಾ ವಿದ್ಯಾರ್ಥಿ ನಿಲಯಗಳಲ್ಲಿಯೇ ತಯಾರಿಸಿದ ಆಹಾರವನ್ನೇ ಸೇವಿಸಿ ಅದರ ಗುಣಮಟ್ಟವನ್ನು ಪರೀಕ್ಷಿಸಿದಂತಾಗುತ್ತದೆ. ಇದರಿಂದ ಜನರಿಗೆ ಇಲಾಖೆಯ ಮೇಲೆ ವಿಶ್ವಾಸ ಮೂಡಲು ಸಹಕಾರಿಯಾಗುತ್ತದೆ ಎಂದರು. 

ವೃದ್ಧಾಪ್ಯ ವೇತನಕ್ಕಾಗಿ ಜನರು ಅಲೆದಾಟವನ್ನು ತಪ್ಪಿಸುವ ಸಲುವಾಗಿ ಎರಡು ತಿಂಗಳ ಹಿಂದೆ ಉಡುಪಿಗೆ ಆಗಮಿಸಿದ ಸಂದರ್ಭ ದಲ್ಲಿ ಜ್ಞಾನೋದಯವಾಗಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಆ ಯೋಜನೆಯನ್ನು ಪ್ರಾಯೋಗಿಕವಾಗಿ ಉಡುಪಿ ಜಿಲ್ಲೆಯಲ್ಲಿಯೇ ಆರಂಭಿಸಲಾಗಿದ್ದು, ಅದು ಯಶಸ್ವಿಯೂ ಆಗಿದೆ. ಈಗಾಗಲೇ ಜಿಲ್ಲೆಯಲ್ಲಿ ಆರು ಸಾವಿರ ಜನರಿಗೆ ವೃದ್ದಾಪ್ಯ ವೇತನ ದೊರೆತಿದೆ. 
ನಮ್ಮಲ್ಲಿರುವ ದಾಖಲಾತಿ ಮೂಲಕ ಅವರ ವಯಸನ್ನು ಖಚಿತಪಡಿಸಿ ಅವರ ಮನೆ ಬಾಗಿಲಿಗೆ ತೆರಳಿ ವೃದ್ಧಾಪ್ಯ ವೇತನ ನೀಡಲು ಯಾವುದೇ ದಾಖಲಾತಿ ಪಡೆದುಕೊಳ್ಳದೆ ತಹಶೀಲ್ದಾರ್ ಸಹಿ ಮಾಡಿದ ಅರ್ಹತಾ ಪತ್ರವನ್ನು ಗ್ರಾಮ ಲೆಕ್ಕಿಗರು ನೀಡಲಿದ್ದಾರೆ. ಫಲಾನುಭವಿಯು ಕೇವಲ ಬ್ಯಾಂಕ್ ಪಾಸ್‍ಪುಸ್ತಕ ನೀಡಬೇಕಾಗುತ್ತದೆ. ರಾಜ್ಯಮಟ್ಟದಲ್ಲಿ ಈ ಯೋಜನೆಗೆ ಜನವರಿ 27ರಂದು ಮುಖ್ಯಮಂತ್ರಿ ವಿಧಾನಸೌಧದಲ್ಲಿ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲು ಉಡುಪಿ ಜಿಲ್ಲಾಧಿಕಾರಿ  ಆಹ್ವಾನಿಸಲಾಗಿದೆ ಎಂದರು.

ರಾಜ್ಯದ ಖಜಾನೆ ಖಾಲಿಯಾಗಿಲ್ಲ: ಸರ್ಕಾರ ಅಧಿಕಾರಕ್ಕೆ ವಹಿಸಿಕೊಂಡ ಸಮಯದಲ್ಲೇ ನೆರೆ, ಕೋವಿಡ್, ಅಕಾಲಿಕ ಮಳೆಯಿಂದ ಮಳೆಯ ಸಂಕಷ್ಟಕ್ಕೆ ಸರ್ಕಾರ ಸ್ಪಂಧಿಸಿದೆ. ಇಷ್ಟೆಲ್ಲಾ ಸಮಸ್ಯೆಗಳು ಇದ್ದರೂ ಸರ್ಕಾರ ಉಡುಪಿ ಜಿಲ್ಲೆಯೊಂದರಲ್ಲಿಯೇ ಜಿಲ್ಲಾಧಿಕಾರಿ ಗಳ ಪ್ರಾಕ್ರೋತಿಕ ವಿಕೋಪ ನಿಧಿಯಲ್ಲಿ 27.28 ಕೋಟಿ ರೂ. ಇರಿಸಲಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ಸಂಬಳ ನೀಡಿರಲಿಲ್ಲ. ಆದರೆ ರಾಜ್ಯದಲ್ಲಿ ಯಾವುದೇ ಕಡಿತ ಮಾಡದೆ ನೌಕರರಿಗೆ ವೇತನವನ್ನು ಪಾವತಿ ಮಾಡಲಾಗಿದೆ ಎಂದ ಅವರು, ವಿರೋಧ ಪಕ್ಷಗಳು ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ಆರೋಪ ನಿರಾಧಾರವಾಗಿದೆ. 
ಉಡುಪಿ ಜಿಲ್ಲೆಯ ಹೊಸ ತಾಲೂಕುಗಳಾದ  ಹೆಬ್ರಿ, ಬೈಂದೂರು, ಬ್ರಹ್ಮಾವರ, ಕಾಪುವಿನಲ್ಲಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ತಲಾ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಾಪುವಿನ ಮಿನಿ ವಿಧಾನಸೌಧಕ್ಕೆ 3.3 ಕೋಟಿ ರೂ. ಪ್ರಥಮ ಕಂತಿನ ಅನುದಾನ ಬಿಡುಗಡೆ ಮಾಡಲಾಗಿದೆ. ಒಂದು ವರ್ಷದೊಳಗೆ ಈ ಕಟ್ಟಡ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕ್ಷೇತ್ರದ ಅಭಿವೃದ್ಧಿ ಬೇಡಿಕೆಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂಧಿಸಲಿದೆ ಎಂದು ಭರವಸೆ ನೀಡಿದರು. 

ಅಧ್ಯಕ್ಷತೆ ವಹಿಸಿದ್ದ ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ, ಮಿನಿ ವಿಧಾನಸೌಧಕ್ಕೆ ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ €ಬೇಡಿಕೆ ಸಲ್ಲಿಸಲಾಗಿತ್ತು. ಯಡಿಯೂರಪ್ಪ ಮುಖ್ಯಮಂತ್ರಿ ಆದ ಬಳಿಕ 10 ಕೋಟಿ ಅನುದಾನ ಮಂಜೂರಾಗಿತ್ತು. ಕಾಪುವಿನಲ್ಲಿ ಸುಸಜ್ಜಿತ 4.75 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಶೀರ್ಘರದಲ್ಲಿಯೇ ಶಿಲಾನ್ಯಾಸ ನೆರವೇರಿಸಲಾಗುವುದು. ಪ್ರವಾಸಿ ಬಂಗ್ಲೆ, ಕೆಎಸ್‍ಆರ್‍ಟಿಸಿ ಡಿಪೋ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಿದರು. 

10 ಜನ ಮಾಜಿ ಸೈನಿಕರಿಗೆ ನಿವೇಶನ ಹಕ್ಕು ಪತ್ರ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಐಎಸ್‍ಪಿಆರ್‍ಎಲ್ ಯೋಜನೆಯ ಬಂಡೆ ಸ್ಪೋಟದಿಂದ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡುವಂತೆ ಗ್ರಾಮಸ್ಥರು ಸಚಿವರಿಗೆ ಮನವಿ ಸಲ್ಲಿಸಿದರು. 

ಉಡುಪಿ ಶಾಸಕ ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷ ಶಿಲಾ ಶೆಟ್ಟಿ, ಸದಸ್ಯರಾದ ಗೀತಾಂಜಲಿ ಎಂ ಸುವರ್ಣ, ಶಿಲ್ಪಾ ಜಿ. ಸುವರ್ಣ, ಶಶಿಕಾಂತ್ ಪಡುಬಿದ್ರಿ, ಕಾಪು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ, ಉಡುಪಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ ಕಾಮತ್, ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್, ಕಾಪು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಜಿಲ್ಲಾಧಿಕಾರಿ ಜಿ ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗ ಅಧಿಕಾರಿ ಕೆ.ರಾಜು, ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕ ಮುಹಮ್ಮದ್ ಇಸಾಖ್, ಪುರಸಭೆ ಮುಖ್ಯಧಿಕಾರಿ ವೆಂಕಟೇಶ ನಾವಡ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣ ಅಧಿಕಾರಿ ವಿವೇಕಾನಂದ ಗಾವ್ಕರ್, ಗುತ್ತಿಗೆದಾರ ವಾಸುದೇವ ಶೆಟ್ಟಿ ಮೊದಲಾದವರು  ಉಪಸ್ಥಿತರಿದ್ದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು ಕಾಂಗ್ರೆಸ್ ಕಾರ್ಯಕರ್ತರು ಸುಮಾರು 200ಕ್ಕೂ ಅಧಿಕ ಮಂದಿ ಕಾಪು ರಾಜೀವ ಭವನದಿಂದ ಸಮಾರಂಭದ ಕಡೆಗೆ ಶಾಂತಿಯುತವಾಗಿ ಮೆರವಣಿಗೆಯಲ್ಲಿ ಆಗಮಿಸಿದರು. ಕಾರ್ಯಕ್ರಮದಲ್ಲಿ ಸಭಿಕರ ಸಾಲಿನಲ್ಲಿ ಕುಳಿತಿದ್ದ ಸೊರಕೆ ಅವರನ್ನು ವೇದಿಕೆಗೆ ಕರೆಯಲಾಗಿತ್ತು. ಆದರೆ ವೇದಿಕೆಗೆ ಬರಲಿಲ್ಲ. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಯು. ಶೇಖಬ್ಬ ಹಾಗೂ ಪುರಸಭಾ ಉಪಾಧ್ಯಕ್ಷೆ ಮಾಲಿನಿ ಅವರು ವೇದಿಕೆಗೆ ಆಗಮಿಸಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News