ಉಪ್ಪಿನಂಗಡಿ: ನಕಲಿ ಚಿನ್ನ ಅಡವಿಟ್ಟು ವಂಚನೆ ಪ್ರಕರಣ; ಆರೋಪಿ ಸೆರೆ

Update: 2021-01-27 17:53 GMT

ಉಪ್ಪಿನಂಗಡಿ: ಗ್ರಾಹಕರ ಸೋಗಿನಲ್ಲಿ ಸಹಕಾರಿ ಸಂಸ್ಥೆಗಳಿಗೆ ಭೇಟಿ ನೀಡಿ ನಕಲಿ ಚಿನ್ನವನ್ನು ಅಡವಿರಿಸಿ, ಲಕ್ಷಾಂತರ ರೂ.  ದೋಚಿದ ಪ್ರಕರಣದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ತಾಲೂಕಿನ ಬೇರಿಕೆ ಕಾಯಕ್ಕಾಡ್ ನಿವಾಸಿ ಗಿರೀಶ್ ಕುಮಾರ್ (32) ಬಂಧಿತ ಆರೋಪಿ.

ಕಳೆದೆರಡು ದಿನಗಳ ಹಿಂದೆ ಕೇರಳ ನೋಂದಣಿ ಸಂಖ್ಯೆಯನ್ನು ಹೊಂದಿದ್ದ ಕಾರೊಂದರಲ್ಲಿ ಆಗಮಿಸಿದ್ದ ಈತ ಉಪ್ಪಿನಂಗಡಿ ಯಲ್ಲಿನ ಸಹಕಾರಿ ಹಣಕಾಸು ಸಂಸ್ಥೆಯಲ್ಲಿ  ನಕಲಿ ಚಿನ್ನಾಭರಣವನ್ನು ಅಡಮಾನವಿರಿಸಿ ಸಾಲವನ್ನು ಕೇಳಿದ್ದ. ಈತನಲ್ಲಿದ್ದ ವಸ್ತು ನೈಜ ಚಿನ್ನಾಭರಣ ಎಂದು ತಪ್ಪಾಗಿ ತಿಳಿದ ಸಂಸ್ಥೆಯ ಸಿಬ್ಬಂದಿ ಈತನಿಗೆ ಹಣ ನೀಡಿದ್ದರು. ಆತ ನೀಡಿದ ಸೊತ್ತು ಅಸಲಿ ಚಿನ್ನಾಭರಣ ಅಲ್ಲ ಎಂದು ಅರಿವಾದ ಸಂದರ್ಭ ಗಿರೀಶ್ ಪರಾರಿಯಾಗಿದ್ದ ಎಂದು ದೂರಲಾಗಿತ್ತು. 

ಆತನಿಂದ ವಂಚನೆಯಾಗಿರುವ ಬಗ್ಗೆ ಎರಡು ಸಹಕಾರಿ ಸಂಸ್ಥೆಗಳು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಉಪ್ಪಿನಂಗಡಿ ಪೊಲೀಸ್ ಉಪ ನಿರೀಕ್ಷಕ ಈರಯ್ಯ ಡಿ.ಎನ್. ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನ್ಯಾಯಾಲಯವು ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News