ಮನಪಾ ಆಡಳಿತದಿಂದ ಜನವಿರೋಧಿ ಬಜೆಟ್ : ವಿಪಕ್ಷ ನಾಯಕ ಅಬ್ದುಲ್ ರವೂಫ್
ಮಂಗಳೂರು, ಜ.29: ಕೋವಿಡ್ನಿಂದಾಗಿ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಡಳಿತವು ಮಂಡಿಸಿರುವ 2021-22ನೆ ಸಾಲಿನ ಬಜೆಟ್ ಜನವಿರೋಧಿಯಾಗಿದೆ ಎಂದು ವಿಪಕ್ಷ ನಾಯಕ ಅಬ್ದುಲ್ ರವೂಫ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ತಿ ತೆರಿಗೆ, ನೀರಿನ ದರ ಹೆಚ್ಚಳ, ಘನತ್ಯಾಜ್ಯ ಶುಲ್ಕ, ಉದ್ದಿಮೆ ಪರವಾನಿಗೆ ಶುಲ್ಕ ಹೆಚ್ಚಳದ ಮೂಲಕ ಮನಪಾ ಬಜೆಟ್ ಜನಸಾಮಾನ್ಯರ ಮೇಲೆ ಮತ್ತಷ್ಟು ಆರ್ಥಿಕ ಹೊರೆಯನ್ನು ಹೊರಿಸಿದೆ ಎಂದರು.
ಲಾಕ್ಡೌನ್ ಅವಧಿಯ ಮೂರು ತಿಂಗಳ ನೀರಿನ ಬಿಲ್ ಮನ್ನಾ ಮಾಡುವಂತೆ ವಿಪಕ್ಷ ಮನಪಾ ಆಡಳಿತವನ್ನು ಮನವಿ ಮಾಡಿತ್ತು. ಅದು ಮಾಡಿಲ್ಲ, ಬದಲಿಗೆ ಹಿಂದೆ 65 ರೂ.ಗಳಿಗೆ ಸಿಗುತ್ತಿದ್ದ ಗರಿಷ್ಠ 24000 ಲೀಟರ್ ನೀರಿನ ಪ್ರಮಾಣ ಕಡಿತಗೊಳಿಸಿ ಆಡಳಿತಾಧಿಕಾರಿ ಅವಧಿಯಲ್ಲಿ 8000 ಲೀಟರ್ಗೆ ಇಳಿಕೆ ಮಾಡಲಾಗಿತ್ತು. ಬಳಿಕ ಮನಪಾ ಆಡಳಿತ ಆ ಪ್ರಮಾಣವನ್ನು 10,000 ಲೀಟರ್ಗೆ ಏರಿಕೆ ಮಾಡಿತ್ತು. ಆದರೆ ಅದನ್ನೂ ಇನ್ನೂ ಅನುಷ್ಠಾನ ಮಾಡದೆ ಜನರನ್ನು ಸತಾಯಿಸಲಾಗುತ್ತಿದೆ. ಆಸ್ತಿ ತೆರಿಗೆ ಶೇ. 15ರಷ್ಟು ಹೆಚ್ಚಳ ಮಾಡುವ ಮೂಲಕ ಎಲ್ಲಾ ರೀತಿಯಲ್ಲೂ ಮನಪಾ ಆಡಳಿತ ಪಕ್ಷವು ಆದಾಯಕ್ಕಾಗಿ ಜನರಿಗೆ ತೆರಿಗೆ ಭಾರವನ್ನೇ ಹೊರಿಸಿದೆ. ಇದು ಜನರ ಬಗ್ಗೆ ಕನಿಕರ ಇಲ್ಲದ ಬಜೆಟ್ ಎಂದು ಅಬ್ದುಲ್ ರವೂಫ್ ಆರೋಪಿಸಿದರು.
ಬಜೆಟ್ನಲ್ಲಿ ತಪ್ಪು ಮಾಹಿತಿ
ಕುಟೀರ ಭಾಗ್ಯ ಯೋಜನೆಯಡಿ ಮನೆ ದುರಸ್ತಿಗಾಗಿ ಈಗಾಗಲೇ 25,000 ರೂ.ಗಳನ್ನು ನೀಡಲಾಗುತ್ತಿದೆ. ಆದರೆ ಬಜೆಟ್ನಲ್ಲಿ 20,000 ರೂ.ಗಳಿದ್ದ ಮನೆ ದುರಸ್ತಿ ಅನುದಾನವನ್ನು 25000 ರೂ. ಮಾಡುವುದಾಗಿ ಹೇಳುವ ಮೂಲಕ ಮನಪಾ ಆಡಳಿತ ತಪ್ಪು ಮಾಹಿತಿಯನ್ನು ನೀಡಿದೆ ಎಂದು ಅಬ್ದುಲ್ ರವೂಫ್ ಹೇಳಿದರು.
ಮನಪಾ ವ್ಯಾಪಾರ ಸಂಸ್ಥೆಯಲ್ಲ!
ಸ್ಥಳೀಯಾಡಳಿತ ಸಂಸ್ಥೆಗಳು ಜನರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಜನಪರ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸಬೇಕು. ಸ್ವಾವಲಂಬಿಯಾಗಿದ್ದುಕೊಂಡು ಆದಾಯ ಕ್ರೋಢೀಕರಣದ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಜನರಿಗೆ ತೆರಿಗೆಯ ಭಾರ ಹೊರಿಸಿ ಆದಾಯ ಸಂಗ್ರಹ ಮಾಡಲು ಮನಪಾ ವ್ಯಾಪಾರ ಸಂಸ್ಥೆ ಅಲ್ಲ ಎಂದು ಮಾಜಿ ಮೇಯರ್ ಶಶಿಧರ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದರು.
ನೀರಿನ ಅದಾಲತ್ ಅರ್ಜಿ ಪರಿಹಾರವಾಗದೆ ಸಂಪರ್ಕ ಕಡಿತ ಬೇಡ
ಪಾಲಿಕೆ ವ್ಯಾಪ್ತಿಯಲ್ಲಿ ನೀರು ಪೂರೈಕೆ ಹಾಗೂ ದರದಲ್ಲಿನ ಸಮಸ್ಯೆ ಕುರಿತು ನೀರಿನ ಅದಾಲತ್ಗಳನ್ನು ಹಿಂದೆಯೂ ನಡೆಸಿ ಸಾವಿರಾರು ಅರ್ಜಿಗಳನ್ನು ಪೂರೈಸಲಾಗುತ್ತಿತ್ತು.ಕಳೆದ ಒಂದು ವರ್ಷದಲ್ಲಿ ಎರಡು ಬಾರಿ ನೀರಿನ ಅದಲಾತ್ ನಡೆಸಿ ಸಾಕಷ್ಟು ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಆದರೆ ಈ ನಡುವೆ ಹಲವು ಅರ್ಜಿಗಳು ಇನ್ನೂ ಇತ್ಯರ್ಥಕ್ಕೆ ಬಾಕಿ ಇರುವಾಗಲೇ ಕಳೆದ ಕೆಲ ದಿನಗಳಿಂದ ಮನೆಗಳ ನೀರಿನ ಸಂಪರ್ಕವನ್ನು ಕಡಿತಗೊಳಿಸುತ್ತಿರುವುದು ಬೇಸರದ ಸಂಗತಿ. ಇದು ಸರಿಯಲ್ಲ ಎಂದು ಮನಪಾ ಹಿರಿಯ ಸದಸ್ಯ ಲ್ಯಾನ್ಸಿಲೋಟ್ ಪಿಂಟೋ ಹೇಳಿದರು.
ಮನಪಾ ತೆರಿಗೆ ಹೊರೆಯ ಜತೆಗೆ ಮೂಡಾದ ತೆರಿಗೆ ಹೊರೆಯನ್ನೂ ದುಪ್ಪಟ್ಟುಗೊಳಿಸಿ ಬಡವರ್ಗದವರು ಮನೆ ನಿರ್ಮಾಣಕ್ಕೆ ಮುಂದಾಗದ ಪರಿಸ್ಥಿತಿಯನ್ನು ನಿರ್ಮಿಸಲಾಗಿದೆ. ಬಜೆಟ್ನಲ್ಲಿ ಆರೋಗ್ಯಕ್ಕೆ ಒತ್ತು ನೀಡಲಾಗಿಲ್ಲ ಎಂದು ನವೀನ್ ಡಿಸೋಜಾ ಆಕ್ಷೇಪಿಸಿದರು.
ಗೋಷ್ಠಿಯಲ್ಲಿ ಮಾಜಿ ಮೇಯರ್ ಭಾಸ್ಕರ ಕೆ., ಪ್ರವೀಣ್ ಚಂದ್ರ ಆಳ್ವ, ವಿನಯ್ರಾಜ್, ಅನಿಲ್ ಕುಮಾರ್, ಅಬ್ದುಲ್ ಲತೀಫ್, ಕೇಶವ ಮರೋಳಿ, ಅಶ್ರಫ್ ಉಪಸ್ಥಿತರಿದ್ದರು.
ಮನಪಾ ಬಜೆಟ್ ಸಾರ್ವಜನಿಕರಿಗೆ ಹೊರೆ
2021-22ನೆ ಸಾಲಿನ ಮನಪಾ ಬಜೆಟ್ ಸಾರ್ವಜನಿಕರಿಗೆ ಹೊರೆ ಹಾಗೂ ಹರಕೆಯನ್ನು ಸಂದಾಯ ಮಾಡುವಂತದ್ದಾಗಿದೆ. ಇದನ್ನು ಪುನರ್ ಪರಿಶೀಲಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಿರಿಸಿದ ಆರು ಕೋಟಿ ರೂ. ಅದನ್ನು 10 ಕೋಟಿ ರೂ.ಗಳಿಗೆ ಏರಿಕೆ ಮಾಡಬೇಕು. ಆರ್ಥಿಕವಾಗಿ ಹಿಂದುಳಿದ ವರ್ಗದ ಅಭಿವೃದ್ಧಿಗೆ 80 ಲಕ್ಷ ರೂ. ಮೀಸಲಿರಿಸಲಾಗಿದ್ದು ಅದನ್ನು 5 ಕೋಟಿ ರೂ.ಗಳಿಗೆ ಏರಿಕೆ ಮಾಡಬೇಕು ಎಂದು ಮನಪಾ ಸದಸ್ಯ ಮುನೀರ್ ಬೆಂಗ್ರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.