ಅಜಿಲಮೊಗರು ಮಾಲಿದಾ ಉರೂಸ್ ಸಮಾರೋಪ
ಬಂಟ್ವಾಳ, ಜ. 29: ಅಜಿಲಮೊಗರು ಹಝ್ರತ್ ಸೈಯದ್ ಬಾಬಾ ಫಕ್ರುದ್ದೀನ್ ಔಲಿಯಾ (ರ.ಅ) ಇವರ ಹೆಸರಿನಲ್ಲಿ ವರ್ಷಂ ಪ್ರತಿ ಆಚರಿಸಿಕೊಂಡು ಬರುವ ಇತಿಹಾಸ ಪ್ರಸಿದ್ಧವಾದ 748ನೇ ಮಾಲಿದಾ ಉರೂಸ್ ಗುರುವಾರ ರಾತ್ರಿ ಸಮಾರೋಪಗೊಂಡಿತು.
ಜ.24ರಂದು ಮಗ್ರೀಬ್ ನಮಾಝ್ ನ ಬಳಿಕ ಜಲಾಲಿಯಾ ರಾತೀಬ್ ನಡೆಯಿತು. ಅಸೈಯದ್ ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್ ದುಅ ಹಾಗೂ ನೇತೃತ್ವ ವಹಿಸಿದರು. ಎಚ್.ಎಸ್.ಬಿ.ಎಫ್. ಜೆ.ಎಂ., ಸಾವಿರ ಜಮಾಅತ್ ಅಜಿಲಮೊಗರು ಇದರ ಅಧ್ಯಕ್ಷರಾದ ಹಾಜಿ ಪಿ.ಬಿ.ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು.
ಜ.25ರಂದು ಮಗ್ರಿಬ್ ನಮಾಝ್ ನ ಬಳಿಕ ಧಾರ್ಮಿಕ ಪ್ರವಚನ ನಡೆಯಿತು. ಅಸೈಯದ್ ಹಂಝ ತಂಙಳ್ ಝುಹ್ರಿ ಅಜಿಲ ಮೊಗರು ದುಅ ನೆರವೇರಿಸಿದರು. ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್, ಪೇರೋಡ್ ಮುಹಮ್ಮದ್ ಅಝ್ಹರಿ ಧಾರ್ಮಿಕ ಸಂದೇಶ ನೀಡಿದರು.
ಜ.26ರಂದು ಮಗ್ರೀಬ್ ನಮಾಝ್ ನ ಬಳಿಕ ಭಂಡಾರದ ಹರಕೆ ಪ್ರಾರಂಭ ಹಾಗೂ ಸೈಯದುಲ್ ಬಶರ್ ಬುರ್ದಾ ಸಂಘದಿಂದ ನಹ್ತೇ ಶರೀಫ್ ಖವಾಲಿ ಹಾಗೂ ಬುರ್ದಾ ಮಜ್ಲಿಸ್ ನಡೆಯಿತು. ಕಾರ್ಯಕ್ರಮದಲ್ಲಿ ಅಸೈಯದ್ ಮುಖ್ತಾರ್ ತಂಙಳ್ ಕುಂಬೋಳ್ ದುಅ ನೆರವೇರಿಸಿದರು.
ಜ.27ರಂದು ಮಗ್ರೀಬ್ ನಮಾಝ್ ಬಳಿಕ ಸರ್ವ ಮಹನೀಯರ ಕೊಡುವಿಕೆಯಿಂದ ಮಾಲಿದಾ ಹರಕೆ ಹಾಗೂ ಮತಪ್ರಭಾಷಣ ಕಾರ್ಯಕ್ರಮ ನಡೆಯಿತು. ಅಜಿಲಮೊಗರು ಮುದರ್ರಿಸ್ ಪಿ.ಎಸ್.ತ್ವಾಹ ಸಹದಿ ಅಲ್ ಅಫ್ಲಲಿ ಉದ್ಘಾಟಿಸಿದರು. ಖ್ಯಾತ ವಾಗ್ಮಿ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಮತ ಪ್ರಭಾಷಣ ನೀಡಿದರು.
ಜ.28ರಂದು ಮಗ್ರಿಬ್ ನಮಾಝ್ ನ ಬಳಿಕ ಮತ ಪ್ರಭಾಷಣ, ಸಾಮೂಹಿಕ ಪ್ರಾರ್ಥನೆ ಹಾಗೂ ಕಂದೂರಿ ಊಟ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ ಅಜಿಲಮೊಗರು ಮಾಜಿ ಖತೀಬರಾದ ಹಾಜಿ ಅಬ್ದುಲ್ ಹಮೀದ್ ಮದನಿ ದುಅ ನೆರವೇರಿಸಿದರು. ಎಚ್.ಎಸ್.ಬಿ.ಎಫ್.ಜೆ.ಎಂ. ಮುದರ್ರಿಸ್ ಪಿ.ಎಸ್.ಮುಝಮ್ಮಿಲ್ ಸಖಾಫಿ ಅಲ್ ಕಾಮಿಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಿ.ಎಸ್.ತ್ವಾಹ ಸಹದಿ ಅಲ್ ಅಫ್ಲಲಿ ಪ್ರಭಾಷಣ ಗೈದರು.
ಮುಖ್ಯ ಅತಿಥಿಗಳಾಗಿ ಜೆ.ಎಂ.ಬಾಜಾರ ಖತೀಬ್ ಮುಈನುದ್ದೀನ್ ಮದನಿ ಅಲ್ ಹುಮೈದಿ, ಸದರ್ ಮುಅಲ್ಲಿಮ್ ಗಳಾದ ಅಹ್ಮದ್ ಖಬೀರ್ ಅಹ್ಸನಿ, ಬಶೀರ್ ಬಹಸನಿ, ರಫೀಕ್ ಮದನಿ, ಅಬ್ದುರ್ರಹೀಮ್ ಮಿಸ್ಬಾಹಿ, ಮದ್ರಸ ಅಧ್ಯಾಪಕರಾದ ಎ.ಕೆ.ಅಬ್ದುಲ್ ಹಮೀದ್ ಮದನಿ, ಹನೀಫ್ ಮುಸ್ಲಿಯಾರ್ ಉಪಸ್ಥಿತರಿದ್ದರು.
ಉರೂಸಿನ ವಿವಿಧ ಕಾರ್ಯಗಳಿಗೆ ಅಜಿಲಮೊಗರು ಬಿಲ್ಲವ ಸಂಘ, ದೇವಿ ಮಂದಿರದ ಬೊಳ್ಳುಕಲ್ಲು ನಾರಾಯಣ ಪೂಜಾರಿ, ಅಗರಗಂಡಿಯ ವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಮಂಡಳಿಯವರು ಸಹಕರಿಸಿದರು. ಸಿನಾನ್ ಸಖಾಫಿ ಅಜಿಲಮೊಗರು ಸ್ವಾಗತಿಸಿದರು.