ಸಿಸಿಬಿಯ ಎಂಟು ಸಿಬ್ಬಂದಿ ತಕ್ಷಣದಿಂದಲೇ ವರ್ಗಾವಣೆ, ಶಿಸ್ತುಕ್ರಮ: ಕಮಿಷನರ್
Update: 2021-01-30 16:11 GMT
ಮಂಗಳೂರು, ಜ.30: ಕರ್ತವ್ಯದ ವೇಳೆ ಮಂಗಳೂರು ಹೊರವಲಯದ ಕುತ್ತಾರು ಬಳಿ ಬಾರ್ವೊಂದರಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಪಾರ್ಟಿ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಎಲ್ಲ ಎಂಟು ಮಂದಿ ಸಿಸಿಬಿ ಸಿಬ್ಬಂದಿ ವಿರುದ್ಧ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಪೊಲೀಸರು ಪಾರ್ಟಿಯಲ್ಲಿ ಭಾಗವಹಿಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡಿದ ಬೆನ್ನಲ್ಲೇ ಪೊಲೀಸ್ ಆಯುಕ್ತರು ಶಿಸ್ತುಕ್ರಮ ಕೈಗೊಂಡಿದ್ದಾರೆ. ಅಲ್ಲದೆ, ಘಟನೆಯಲ್ಲಿ ಭಾಗಿಯಾದ ಸಿಸಿಬಿ ಘಟಕದ ಎಂಟು ಸಿಬ್ಬಂದಿಯನ್ನು ತಕ್ಷಣದಿಂದ ಸಿಸಿಬಿಯಿಂದ ನಗರ ಪೊಲೀಸ್ ಕಮಿಷನರೇಟ್ನ ಬೇರೆ ಬೇರೆ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಸಿಬ್ಬಂದಿ ವಿರುದ್ಧ ಹೆಚ್ಚುವರಿ ಇಲಾಖೆ ವಿಚಾರಣೆಯನ್ನು ಕೈಗೊಂಡು ಕೂಲಂಕಷ ವಿಚಾರಣಾ ವರದಿ ಸಲ್ಲಿಕೆಗೆ ಡಿಸಿಪಿಗಳಿಗೆ ಸೂಚಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.