×
Ad

ಸಿಗದ ಡೀಸೆಲ್ ಸಬ್ಸಿಡಿ, ಲಂಗರು ಹಾಕಿದ ದೋಣಿಗಳು: ಸಂಕಷ್ಟದಲ್ಲಿ ಮೀನುಗಾರರು

Update: 2021-02-04 21:03 IST

ಮಂಗಳೂರು, ಫೆ. 4: ಮೀನುಗಾರಿಕೆ ಪ್ರಮುಖ ಉದ್ಯಮವಾಗಿರುವ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದೀಚೆಗೆ ಮತ್ಸೋದ್ಯಮ ನೆಲಕಚ್ಚಿದೆ. ರಾಜ್ಯ ಸರಕಾರದಿಂದ ಸಿಗುವ ಡೀಸೆಲ್ ಸಬ್ಸಿಡಿ ಕಳೆದ ಸುಮಾರು ನಾಲ್ಕು ತಿಂಗಳಿನಿಂದೀಚೆಗೆ ಸಿಗದಿರುವುದು, ಕಾರ್ಮಿಕರ ಕೊರತೆ, ಅದಕ್ಕಿಂತಲೂ ಮುಖ್ಯವಾಗಿ ಸಮುದ್ರದಲ್ಲಿ ಮೀನಿನ ಕೊರತೆಯೂ ಮೀನುಗಾರರನ್ನು ಕಂಗೆಡಿಸಿ, ಆರ್ಥಿಕವಾಗಿ ಸಂಕಷ್ಟಕ್ಕೆ ತಳ್ಳಿದೆ.

ಕೋವಿಡ್, ಹವಾಮಾನ ವೈಪರೀತ್ಯದಿಂದಾಗಿ 2020 ಕರಾವಳಿಯ ಮೀನುಗಾರರನ್ನು ನಷ್ಟಕ್ಕೆ ತಳ್ಳಿತ್ತು. ಇದೀಗ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಶೇ. 60ರಷ್ಟು ಮತ್ಸೋದ್ಯಮ ಸ್ಥಗಿತವಾಗಿದೆ. ಕಳೆದ ಡಿಸೆಂಬರ್ ಅಂತ್ಯದಿಂದ ಶೇ. 60ಕ್ಕೂ ಅಧಿಕ ಮೀನುಗಾರಿಕಾ ದೋಣಿಗಳು ಧಕ್ಕೆಯಲ್ಲಿ ದಡ ಸೇರಿವೆ.

ಆಳ ಸಮುದ್ರ ಮೀನುಗಾರರು ತಿಂಗಳಿಗೆ ಎರಡು ಅಥವಾ ಮೂರು ಟ್ರಿಪ್ ಮೀನುಗಾರಿಕೆಗೆ ತೆರಳುತ್ತಾರೆ. ಪ್ರತಿ ಟ್ರಿಪ್‌ಗೆ ಸುಮಾರು 6 ಸಾವಿರ ಲೀ. ಡೀಸೆಲ್ ಖರ್ಚಾಗುತ್ತದೆ. ಮೂರು ಟ್ರಿಪ್‌ಗೆ 18 ಸಾವಿರ ಲೀ. ಡೀಸೆಲ್ ಅವಶ್ಯವಿದ್ದು, ಸರ್ಕಾರ 9 ಸಾವಿರ ಲೀ. ಸಬ್ಸಿಡಿ ನೀಡುತ್ತದೆ. ಆದರೆ ಸರಕಾರದಿಂದ ಸಿಗುವ ಡೀಸೆಲ್ ತೆರಿಗೆ ವಿನಾಯಿತಿ ಕಳೆದ ಅಕ್ಟೋಬರ್‌ನಿಂದ ಮೀನುಗಾರರ ಕೈ ಸೇರಿಲ್ಲ. ಆಳ ಸಮುದ್ರದ ಮೀನುಗಾರಿಕೆಗೆ ತೆರಳುವ ದೋಣಿಗಳಲ್ಲಿ ಸಿಗುವ ಮೀನಿನಿಂದ ಸಿಗುವ ಆದಾಯ ಕಾರ್ಮಿಕರ ವೇತನಕ್ಕೂ ಸಾಕಾಗದ ಪರಿಸ್ಥಿತಿ ಉಂಟಾಗಿದೆ ಎಂದು ದೂರಿಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 55 ಸಾವಿರ ಮೀನುಗಾರರಿದ್ದು, ಈ ಪೈಕಿ 30 ಸಾವಿರ ಮಂದಿ ವೃತ್ತಿ ನಿರತರು. 1134 ಪರ್ಸೀನ್ ಮತ್ತು ಟ್ರಾಲ್ ಬೋಟ್, 1396 ಗಿಲ್‌ನೆಟ್ ಬೋಟ್, 531 ಸಾಂಪ್ರದಾಯಿಕ ಬೋಟ್‌ಗಳಿವೆ. ಆದರೆ ಸಮುದ್ರದಲ್ಲಿ ಮೀನಿನ ಕೊರತೆ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಳದಿಂದ ಮೀನುಗಾರಿಕೆ ಪ್ರಸ್ತುತ ಲಾಭದಾಯಕವಾಗಿಲ್ಲ. ಒಂದು ಟ್ರಿಪ್‌ನಲ್ಲಿ 7 ಲಕ್ಷ ರೂ. ಮೌಲ್ಯದ ಮೀನು ಲಭಿಸಬೇಕು. ಆಗ ಖರ್ಚು ವೆಚ್ಚಗಳನ್ನು ಅಲ್ಲಿಂದಲ್ಲಿಗೆ ನಿಭಾಯಿಸಲು ಸಾಧ್ಯವಾಗುತ್ತದೆ. ಎಲ್ಲ ಯಾಂತ್ರಿಕ ಮೀನುಗಾರಿಕಾ ದೋಣಿಗಳಿಗೆ (150ರಿಂದ 350 ಎಚ್‌ಪಿ) ಇಂಜಿನ್‌ನ ಅಶ್ವಶಕ್ತಿಗೆ ಅನುಗುಣವಾಗಿ ಸರ್ಕಾರ ಡೀಸೆಲ್ ತೆರಿಗೆ ವಿನಾಯಿತಿಯಲ್ಲಿ 3 ಸಾವಿರದಿಂದ 9 ಸಾವಿರ ಲೀ. ತನಕ ನೀಡುತ್ತಿದೆ. ಸಕಾಲದಲ್ಲಿ ಇದು ಸಿಗದೇ ಇದ್ದರೆ ಮೀನುಗಾರಿಕೆ ಸ್ಥಗಿತ ಮಾಡುವುದೇ ಪರಿಹಾರ ಎನ್ನುವುದು ಆ ಸಮುದ್ರ ಮೀನುಗಾರರ ಅಳಲು.

ಮೀನಿನ ಕೊರತೆ: ಹೆಚ್ಚಿದ ದರ

ಮೀನುಗಾರಿಕಾ ದೋಣಿಗಳು ಬಹುತೇಕ ದಡ ಸೇರಿರುವುದರಿಂದ ಸದ್ಯ ಸಿಗುವ ಮೀನಿನ ದರ ದುಪ್ಪಟ್ಟುಗೊಂಡಿದೆ. ದಕ್ಕೆಯಲ್ಲೇ ಅಂಜಲ್, ಮಾಂಜಿ, ಸಿಗಡಿ, ಬಂಗುಡೆ ದರ ದುಪ್ಪಟ್ಟುಗೊಂಡಿದೆ. ಮೀನುಗಾರರಿಂದ ಏಲಂನಲ್ಲಿ ಪಡೆದ ಮೀನನ್ನು ಮತ್ತೆ ಚಿಲ್ಲರೆ ಮಾರಾಟಗಾರರು ಅಥವಾ ಮಾರುಕಟ್ಟೆಯಲ್ಲಿ ಮಾರುವವರು ಮತ್ತಷ್ಟು ದರ ಏರಿಕೆ ಮಾಡಿ ಮಾರಾಟ ಮಾಡಬೇಕಾಗಿರುವುದರಿಂದ ಮೀನು ಪ್ರಿಯರಿಗೆ ದರ ಏರಿಕೆಯ ಬಿಸಿ ಕಾಡುತ್ತಿದೆ. ಸಮರ್ಪಕವಾಗಿ ಮೀನು ಸಿಗದೆ ಮೀನು ವ್ಯಾಪಾರಸ್ಥರು ಕೂಡಾ ಕಂಗಾಲಾಗಿದ್ದಾರೆ.

ಮುಖ್ಯಮಂತ್ರಿಯನ್ನು ಭೇಟಿಯಾದ ಮೀನುಗಾರರ ನಿಯೋಗ

ಮಂಗಳೂರು ಹಾಗೂ ಉಡುಪಿಯ ಪರ್ಸಿನ್ ಹಾಗೂ ಟ್ರಾಲ್ ಬೋಟ್ ಮೀನುಗಾರರ ನಿಯೋಗ ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದೆ.

ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಮೀನುಗಾರ ಮುಖಂಡರಾದ ನಿತಿನ್ ಕುಮಾರ್, ಮೋಹನ್ ಬೆಂಗ್ರೆ, ನವೀನ್ ಬಂಗೇರ, ಮನೋಹರ್ ಬೋಳೂರು, ರಾಜೇಶ್ ಪುತ್ರನ್, ಶಶಿಕುಮಾರ್ ಮೊದಲಾದವರ ನಿಯೋಗ ಭೇಟಿ ಮಾಡಿ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದೆ.
ಬಾಕಿಯಾಗಿರುವ ಡೀಸೆಲ್ ಸಬ್ಸಿಡಿ ಹಣ ಪಾವತಿ, ಮೂರನೆ ಹಂತದ ಬಂದರು ವಿಸ್ತರಣೆ, ಡ್ರೆಜ್ಜಿಂಗ್ ಸೇರಿದಂತೆ ಮುಂಬರುವ ಬಜೆಟ್‌ನಲ್ಲಿ ಮೀನುಗಾರರಿಗೆ ಆದ್ಯತೆ ನೀಡುವಂತೆ ನಿಯೋಗ ಮುಖ್ಯಮಂತ್ರಿಯನ್ನು ಒತ್ತಾಯಿಸಿದೆ.

ಮೀನಿನ ಅಲಭ್ಯತೆ: ಬೇಡಿಕೆಯ ಕೊರತೆಯಿಂದ ರಫ್ತು ಶೇ. 80ರಷ್ಟು ಸ್ಥಗಿತ!

ಸದ್ಯ ಮಂಗಳೂರು ಹಾಗೂ ಮಲ್ಪೆಯಲ್ಲಿ ಮೀನುಗಾರಿಕೆ ಭಾಗಶಃ ಸ್ಥಗಿತಗೊಂಡ ಕಾರಣ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳ ರಾಜ್ಯ ಗಳಿಂದ ಕರಾವಳಿಗೆ ಮೀನು ಪೂರೈಕೆಯಾಗುತ್ತದೆ. ಸಾಗಾಟ ವೆಚ್ಚ ಹೆಚ್ಚಾಗುವುದರಿಂದ ಸಹಜವಾಗಿ ಮೀನು ದರ ಹೆಚ್ಚಾಗಿದೆ. ಕರಾವಳಿಯಿಂದ ವಿದೇಶಗಳಿಗೆ ಮೀನಿನ ರಫ್ತು ಕೂಡಾ ಶೇ.80ರಷ್ಟು ಸ್ಥಗಿತಗೊಂಡಿದೆ. 2019ರಲ್ಲಿ ಮಂಗಳೂರು 12, ಉಡುಪಿ 10, ಉತ್ತರ ಕನ್ನಡ 3 ಸೇರಿ ದಂತೆ ಒಟ್ಟು 25 ಕಾರ್ಖಾನೆಗಳಿಂದ 1600 ಕೋ.ರೂ. ವೌಲ್ಯದ ಮೀನು ರಫ್ತಾಗಿದೆ. ಕೋವಿಡ್ ಬಳಿಕ 15ಕ್ಕೂ ಅಧಿಕ ಕಾರ್ಖಾನೆಗಳು ಸ್ಥಗಿತ ಗೊಂಡಿವೆ. ಕಪ್ಪೆ ಬೊಂಡಾಸ್, ಬೊಂಡಾಸ್, ಅಂಜಲ್, ಬಂಗುಡೆ ಮೊದಲಾದ ರಫ್ತಾಗುತ್ತಿದ್ದ ಮೀನುಗಳಿಗೆ ಕರೊನಾ ಬಳಿಕ ವಿದೇಶದಲ್ಲಿ ಬೇಡಿಕೆಯ ಕೊರತೆ ಮತ್ತು ಇಲ್ಲಿ ಮೀನಿನ ಅಲಭ್ಯತೆ ಇದಕ್ಕೆ ಕಾರಣ.

ಸಮುದ್ರದಲ್ಲಿ ಮೀನಿನ ಕೊರತೆ ಹಾಗೂ ಸರ್ಕಾರದಿಂದ ಸಿಗುವ ರಿಯಾಯಿತಿ ದರದ ಡೀಸೆಲ್ ಹಣ ಪಾವತಿಯಾಗದೆ ಇರುವುದರಿಂದ ಮೀನು ಗಾರಿಕೆ ತೊಂದರೆಯಾಗಿದೆ. ಮಂಗಳೂರಿನಲ್ಲಿ ಶೇ.60ರಷ್ಟು ಆಳಸಮುದ್ರ ಹಾಗೂ ಪರ್ಸೀನ್ ಬೋಟ್‌ಗಳು ಮೀನುಗಾರಿಕೆ ಸ್ಥಗಿತಗೊಳಿಸಿವೆ. ಇಂದು ಮುಖ್ಯಮಂತ್ರಿ ಯಡಿಯೂರಪ್ಪನರನ್ನು ಭೇಟಿಯಾಗಿ ನಮ್ಮ ಬೇಡಿಕೆಗಳ ಮನವಿ ಸಲ್ಲಿಸಲಾಗಿದೆ.
ಮೋಹನ್ ಬೆಂಗ್ರೆ, ಮೀನುಗಾರರ ಮುಖಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News