ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಗೆ ಮಾ.7ರವರೆಗೆ ಅವಕಾಶ
ಉಡುಪಿ : 2020-21ನೇ ಸಾಲಿನಲ್ಲಿ ರೈತರಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸಲು ರೈತರ ನೊಂದಣಿ ಪ್ರಕ್ರಿಯೆಯ ಅವಧಿಯನ್ನು ಮಾರ್ಚ್ 7ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮಾನ್ಯ ಭತ್ತವನ್ನು ಕ್ವಿಂಟಾಲ್ಗೆ 1868ರೂ. ಹಾಗೂ ಗ್ರೇಡ್ ಎ ಭತ್ತವನ್ನು ಕ್ವಿಂಟಾಲ್ಗೆ 1888ರೂ. ದರದಲ್ಲಿ ಪ್ರತಿ ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಾಲ್ನಂತೆ ಗರಿಷ್ಠ 75 ಕ್ವಿಂಟಾಲ್ ಭತ್ತವನ್ನು ಖರೀದಿಸಲು ಹಾಗೂ ರೈತರ ನೊಂದಣಿಯೊಂದಿಗೆ ಭತ್ತದ ಖರೀದಿಯನ್ನು ತಕ್ಷಣದಿಂದಲೇ ಪ್ರಾರಂಭಿಸಿ ಮಾ.7ರವರೆಗೆ ಖರೀದಿ ಪ್ರಕ್ರಿಯೆಗೆ ನೊಂದಣಿ ಮುಂದುವರಿಸಲು ಆದೇಶದಲ್ಲಿ ತಿಳಿಸಲಾಗಿದೆ.
ಭತ್ತ ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾದು ನಿಗಮ ನಿಯಮಿತ ಮಂಗಳೂರು ಇವರನ್ನು ಸಂಗ್ರಹಣಾ ಏಜೆನ್ಸಿಯಾಗಿ ನೇಮಿಸಿ ಖರೀದಿ ಪ್ರಕ್ರಿಯೆಯನ್ನು ನಡೆಸಲು ಆದೇಶದಲ್ಲಿ ತಿಳಿಸಲಾಗಿದೆ.
ಭತ್ತ ನೀಡಲು ಇಚ್ಛಿಸುವ ರೈತರು ಸಮೀಪದ ತಾಲೂಕಿನ ಭತ್ತ ಖರೀದಿ ಕೇಂದ್ರದಲ್ಲಿ (ಎಪಿಎಂಸಿ ಯಾರ್ಡ್) ತಮ್ಮ ಹೆಸರು ನೋಂದಣಿ ಮಾಡ ಬೇಕಿದೆ. ನೋಂದಣಿ ಸಂದರ್ಭದಲ್ಲಿ ಕೃಷಿ ಇಲಾಖೆಯಿಂದ ಪಡೆದಿರುವ ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ ಯಡಿ (ಫ್ರುಟ್ಸ್ ಗುರುತಿಸಿ ಚೀಟಿ) ನೋಂದಣಿಯಾಗಿರುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹಾಜರು ಪಡಿಸಬೇಕಾಗುತ್ತದೆ ಎಂದು ಜಿಲ್ಲಾಧಿಾರಿಗಳ ಪ್ರಕಟಣೆ ಯಲ್ಲಿ ತಿಳಿಸಲಾಗಿದೆ.