ಪಡಿತರ ಚೀಟಿದಾರರ ಇ-ಕೆವೈಸಿ ಮರುಸಂಗ್ರಹಣೆ
ಮಂಗಳೂರು, ಫೆ.9: ರಾಜ್ಯ ಸರಕಾರದ ಸೂಚನೆಯಂತೆ ಮೊದಲ ಹಂತದಲ್ಲಿ ಇ-ಕೆವೈಸಿ ಮಾಡಲಾದ ಪಡಿತರ ಚೀಟಿ ಫಲಾನುಭವಿಗಳನ್ನು ಹೊರತು ಪಡಿಸಿ ಉಳಿದಿರುವ ಫಲಾನುಭವಿಗಳು ಇ-ಕೆವೈಸಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಪ್ರತಿ ತಿಂಗಳ 1ರಿಂದ 10ರವರೆಗೆ ನೀಡಬಹುದಾಗಿದೆ.
ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲ ಸದಸ್ಯರ ಇ-ಕೆವೈಸಿ ನೀಡಬೇಕಾಗಿದ್ದು, ಪಡಿತರ ಚೀಟಿಗಳಲ್ಲಿನ ಕುಟುಂಬದ ಮುಖ್ಯಸ್ಥ, ಸಂಬಂಧ, ಲಿಂಗ, ಜಾತಿ, ಎಲ್ಪಿಜಿ ವಿವರ, ಮೊಬೈಲ್ ಸಂಖ್ಯೆ ನೀಡಬೇಕು.
ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿಗಳ ಇ-ಕೆವೈಸಿ ನೀಡಲು ಆಧಾರ್ ಕಾರ್ಡ್, ಎಲ್ಪಿಜಿ ದಾಖಲೆ, ಜಾತಿ ಪ್ರಮಾಣಪತ್ರ (ಇದ್ದಲ್ಲಿ), ಆದಾಯ ಪ್ರಮಾಣ ಪತ್ರ ಮುಂತಾದ ದಾಖಲೆಗಳೊಂದಿಗೆ ತಮಗೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ ಮಾಡಲು ತಿಳಿಸಿದೆ.
ಹೊಸ ಹಾಗೂ ಜಿಎಸ್ಸಿ (ತಿದ್ದುಪಡಿ) ಮಾಡಲಾದ ಪಡಿತರ ಚೀಟಿಗಳನ್ನು ಬಿಟ್ಟು ಮೊದಲ ಹಂತದಲ್ಲಿ ಇ-ಕೆವೈಸಿ ಮಾಡದಿರುವ ಅಂತ್ಯೋದಯ ಹಾಗೂ ಆದ್ಯತಾ (ಬಿಪಿಎಲ್) ಪಡಿತರ ಚೀಟಿಗಳಿಗೆ ಇ-ಕೆವೈಸಿ ಮಾಡುವ ಅಗತ್ಯವಿದೆ. ಇ-ಕೆವೈಸಿ ನೀಡಲು ಯಾವುದೇ ಶುಲ್ಕವಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕು ತಹಶೀಲ್ದಾರ್ರು ಮತ್ತು ಸಹಾಯಕ ನಿರ್ದೇಶಕರು, ಅನೌಪಚಾರಿಕ ಪಡಿತರ ಪ್ರದೇಶ, ಮಂಗಳೂರು ಇವರ ಕಚೇರಿಯನ್ನು ಸಂಪರ್ಕಿಸಲು ದ.ಕ. ಜಿಲ್ಲಾಧಿಕಾರಿ ಕಚೇರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.