ಸುರತ್ಕಲ್ ಟೋಲ್‌ನಲ್ಲಿ ಸ್ಥಳೀಯರಿಗೆ ರಿಯಾಯಿತಿ ಮುಂದುವರಿಕೆ

Update: 2021-02-15 14:05 GMT

ಮಂಗಳೂರು, ಫೆ.15: ಸುರತ್ಕಲ್ ಟೋಲ್ ಕೇಂದ್ರದಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ ಸಂದರ್ಭ ಸ್ಥಳೀಯ ಖಾಸಗಿ ವಾಹನಗಳ ಉಚಿತ ಪ್ರಯಾಣ ರದ್ದುಗೊಳಿಸುವ ಸೂಚನೆಯ ಹಿನ್ನೆಲೆಯಲ್ಲಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್ ಹಾಗೂ ಮುಲ್ಕಿ ನಾಗರಿಕ ಅಭಿವೃದ್ಧಿ ಸಮಿತಿಯ ಮುಖಂಡರು ಸುರತ್ಕಲ್ ಟೋಲ್ ಕೇಂದ್ರದ ಮುಂಭಾಗ ಸೋಮವಾರ ಬೆಳಗ್ಗೆ ಜಮಾಯಿಸಿ ಬೆಳವಣಿಗೆಗಳನ್ನು ಪರಿಶೀಲಿಸಿದರು.

ಈ ಬೆಳವಣಿಗೆಗಳ ಆಧಾರದಲ್ಲಿ ಸಭೆ ನಡೆಸಿದ ಸಂಘಟನೆಗಳ ಪ್ರಮುಖರು, ಸ್ಥಳೀಯ ವಾಹನಗಳ ಉಚಿತ ಪ್ರಯಾಣ ವ್ಯವಸ್ಥೆ ಮುಂದುವರಿಸುವ ಭರವಸೆ ನೀಡಿರುವುದರಿಂದ ಸದ್ಯ ಪ್ರತಿಭಟನೆ ನಡೆಸದಿರುವುದು, ದಿನಗಳ ನಂತರ ಭರವಸೆಯ ಹೊರತಾಗಿ ಶುಲ್ಕ ಕಡ್ಡಾಯಗೊಳಿಸಿದರೆ ಸ್ಥಳದಲ್ಲಿ ಜಮಾಯಿಸಿ ಟೋಲ್ ಸಂಗ್ರಹ ಪ್ರತಿಭಟನೆ ನಡೆಸುವುದಾಗಿ ತೀರ್ಮಾನಿಸಿದರು.

ಹೋರಾಟ ಸಮಿತಿಯ ಪ್ರಧಾನ ಅಜೆಂಡಾ ಆಗಿರುವ ತಾತ್ಕಾಲಿಕ ನೆಲೆಯಲ್ಲಿರುವ ಸುರತ್ಕಲ್ ಟೋಲ್ ಕೇಂದ್ರವನ್ನು ಅಲ್ಲಿಂದ ತೆರವುಗೊಳಿಸುವ ಹೋರಾಟವನ್ನು ತೀವ್ರಗೊಳಿಸುವುದು, ಅದರ ಭಾಗವಾಗಿ ಸಹಭಾಗಿ ಸಂಘಟನೆಗಳೊಂದಿಗೆ ಸಮಾಲೋಚಿಸಿ ಸದ್ಯದಲ್ಲೇ ಸಾಮೂಹಿಕ ಧರಣಿಯನ್ನು ನಡೆಸುವುದೆಂದು ತೀರ್ಮಾನಿಸಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ಸಚಿವರ ಜೊತೆ ಟೋಲ್ ಕೇಂದ್ರ ತೆರವುಗೊಳಿಸುವ ಕುರಿತು ನಡೆಸಿದ ಮಾತುಕತೆಗಳಿಂದ ಯಾವುದೇ ಪ್ರಯೋಜನ ಆಗಲಾರದು. ಈವರೆಗೆ ತಾತ್ಕಾಲಿಕ ನೆಲೆಯಲ್ಲಿ ಮೂರು ತಿಂಗಳ ಕಾಲಾವಧಿಗಷ್ಟೇ ಟೋಲ್ ಸಂಗ್ರಹ ಗುತ್ತಿಗೆ ನೀಡಲಾಗುತ್ತಿದ್ದರೆ, ಈ ಬಾರಿ ಕೇವಲ ವಾರಗಳ ಹಿಂದೆ ಒಂದು ವರ್ಷದ ಅವಧಿಗೆ ಟೋಲ್ ಸಂಗ್ರಹ ಗುತ್ತಿಗೆ ನೀಡಲಾಗಿದೆ. ಈ ಗುತ್ತಿಗೆ ನವೀಕರಣ, ಟೆಂಡರ್ ಪ್ರಕ್ರಿಯೆ ಜನವರಿ ತಿಂಗಳಲ್ಲಿ ನಡೆಯುತ್ತಿರುವಾಗ, ಈ ಕುರಿತು ಎಲ್ಲ ಮಾಹಿತಿ ಇದ್ದ ಸಂಸದರು ಗುತ್ತಿಗೆ ನವೀಕರಣ, ಟೆಂಡರ್ ಪ್ರಕ್ರಿಯೆ ತಡೆಹಿಡಿಯಲು ಅಥವಾ ಕನಿಷ್ಠ ಈ ಹಿಂದಿನಂತೆ ಮೂರು ತಿಂಗಳ ಅವಧಿಗೆ ಗುತ್ತಿಗೆ ನವೀಕರಿಸಲು ಪ್ರಯತ್ನ ಪಡದೆ ಒಂದು ವರ್ಷಗಳ ದೀರ್ಘ ಅವಧಿಗೆ ಟೋಲ್ ಗುತ್ತಿಗೆ ನೀಡಲು ಅವಕಾಶ ಕಲ್ಪಿಸಿರುವುದು ಜಿಲ್ಲೆಯ ಜನತೆಗೆ ಮಾಡಿರುವ ಘೋರ ಅನ್ಯಾಯ ಎಂದು ಸಮಿತಿಯ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಸಂಸದರ ನಿಯೋಗದ ಜೊತೆಗೆ ಭೇಟಿ ಮಾಡಿರುವುದು, ತಾತ್ಕಾಲಿಕ ಟೋಲ್ ಗೇಟ್ ತೆರವಿನ ಕುರಿತು ಸಚಿವರ ಜೊತೆ ಚರ್ಚಿಸಿರುವುದಾಗಿ ಹೇಳಿಕೆ ನೀಡಿರುವುದು ಜನತೆಯನ್ನು ದಿಕ್ಕು ತಪ್ಪಿಸುವ ಯತ್ನ ಹೊರತು, ಇದರಿಂದ ಯಾವುದೇ ಪ್ರಯೋಜನವೂ ಇಲ್ಲ. ಸಂಸದರ ಹೇಳಿಕೆಗಳ ಸರಣಿಗೆ ತೃಪ್ತರಾಗದೆ ತೀವ್ರ ರೀತಿಯ ಹೋರಾಟಗಳಿಂದಷ್ಟೇ ಸುರತ್ಕಲ್ ಟೋಲ್ ಗೇಟ್ ತೆರವು ತೀರ್ಮಾನ ಜಾರಿಯಾಗಲು ಸಾಧ್ಯ. ಆ ನಿಟ್ಟಿನಲ್ಲಿ ಸಾರ್ವಜನಿಕರು, ಸ್ಥಳೀಯ ಸಂಘ-ಸಂಸ್ಥೆಗಳು ಒಗ್ಗಟ್ಟಿನಿಂದ ಮುಂದಿನ ದಿನಗಳ ಹೋರಾಟಗಳಲ್ಲಿ ಭಾಗಿಯಾಗಬೇಕು ಎಂದು ಸಮಿತಿಯು ಸಾರ್ವಜನಿಕರಲ್ಲಿ ಮನವಿ ಮಾಡಿತು.

ಮುಖಂಡರ ಸಭೆಗೂ ಮೊದಲು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಟೋಲ್‌ಬಳಿ ಸಮಾವಣೆಗೊಂಡಿತು. ಟೋಲ್ ಸಂಗ್ರಹ ಗುತ್ತಿಗೆದಾರರ ಪ್ರತಿನಿಧಿಗಳು ಈ ಸಂದರ್ಭ ಹಾಜರಿದ್ದು, ಸ್ಥಳೀಯರ ಖಾಸಗಿ ವಾಹನಗಳ ಉಚಿತ ಪ್ರಯಾಣ ವ್ಯವಸ್ಥೆಯನ್ನು ರದ್ದುಗೊಳಿಸುವ ಯಾವುದೇ ನಿರ್ಧಾರವನ್ನು ಈವರಗೆ ತೆಗೆದುಕೊಂಡಿಲ್ಲ. ಅಂತಹ ಯಾವುದೇ ಸೂಚನೆ ಸಂಬಂಧಪಟ್ಟವರಿಂದ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯ ವಾಹನಗಳು, ಪಾಸ್ ಹೊಂದಿರುವ ವಾಹನಗಳು ಸಂಚರಿಸುವ ಪಥವನ್ನು ಫಾಸ್ಟ್ ಟ್ಯಾಗ್ ಮುಕ್ತವನ್ನಾಗಿಯೇ ಸದ್ಯಕ್ಕೆ ಮುಂದುವರಿಸುವುದು ಹಾಗೂ ಆ ಪಥದಲ್ಲಿ ಸಂಚರಿಸುವ ಸ್ಥಳೀಯ ವಾಹನಗಳಿಗಷ್ಟೇ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ, ಉಳಿದ ಪಥದಲ್ಲಿ ಪ್ರವೇಶಿಸಿದರೆ ಫಾಸ್ಟ್ ಟ್ಯಾಗ್ ನಿಯಮದಂತೆ ಶುಲ್ಕ ಸಂಗ್ರಹಿಸಲಾಗುವುದಾಗಿ ತಿಳಿಸಿದರು.

ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಮುಲ್ಕಿ ಅಭಿವೃದ್ಧಿ ನಾಗರಿಕ ಸಮಿತಿಯ ಅಧ್ಯಕ್ಷ ಹರೀಶ್ ಪುತ್ರನ್, ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ವಿವಿಧ ಸಂಘಟನೆಗಳ ಮುಖಂಡರಾದ ವಸಂತ ಬರ್ನಾಡ್, ಧನಂಜಯ ಮಟ್ಟು, ಶ್ರೀನಾಥ್ ಕುಲಾಲ್, ಅಶ್ರಫ್ ಸಫಾ, ಅದ್ದಿ ಬೊಳ್ಳೂರು, ಗ್ರಾಪಂ ಸದಸ್ಯರಾದ ಅಬ್ದುಲ್ ಖಾದರ್ ಹಳೆಯಂಗಡಿ, ಧನರಾಜ್ ಸಸಿಹಿತ್ಲು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News