×
Ad

ತೈಲ ಬೆಲೆ ಏರಿಕೆ: ಕಾಂಗ್ರೆಸ್ ಖಂಡನೆ

Update: 2021-02-15 21:50 IST

ಉಡುಪಿ, ಫೆ.15: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಬ್ಯಾರೆಲ್‌ಗೆ 50 ಡಾಲರ್ ಇದ್ದರೂ ಕೇಂದ್ರ ಸರಕಾರ ಅತೀ ಹೆಚ್ಚು ತೆರಿಗೆಗಳನ್ನು ಹೇರುವ ಮೂಲಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ವಿಪರೀತವಾಗಿ ಏರಿಸಿರುವುದನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸಿದೆ.
ಈ ಹಿಂದೆ ಮನಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್‌ಗೆ 127 ಡಾಲರ್ ಇದ್ದರೂ, ಜನಸಾಮಾನ್ಯರ ಹಿತದೃಷ್ಟಿಯಿಂದ ತೆರಿಗೆಯನ್ನು ಕಡಿತಗೊಳಿಸಿ ಪ್ರಸ್ತುತ ಇರುವ ದರಕ್ಕಿಂತ ಕಡಿಮೆ ಬೆಲೆಗೆ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆ ಮಾಡಿತ್ತು. ಆದರೂ ಅದನ್ನು ನೆಪವಾಗಿರಿಸಿಕೊಂಡು ಆಗ ವಿರೋಧ ಪಕ್ಷವಾಗಿದ್ದ ಬಿಜೆಪಿ ಬೀದಿಗಿಳಿದು ಪ್ರತಿಭಟಿಸುವುದು ಸಾಮಾನ್ಯವಾಗಿತ್ತು. ಬಿಜೆಪಿಗೆ ಬೆಲೆ ಏರಿಕೆ ಬಗ್ಗೆ ಆಗ ಇದ್ದ ಕಾಳಜಿ ಈಗ ಏಕೆ ಕಾಣಿಸುತ್ತಿಲ್ಲ. ದಿನಂಪ್ರತಿ ಬೆಲೆ ಏರಿಕೆಗೊಂಡರೂ ಬಿಜೆಪಿ ನಾಯಕರು ತಮಗೆ ಸಂಬಂಧವಿಲ್ಲದಂತೆ ನಟಿಸುತ್ತಿರುವುದು ವಿಪರ್ಯಾಸ. ಎಂದು ಜಿಲ್ಲಾ ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ.

2014ರಲ್ಲಿ ಪೆಟ್ರೋಲಿಗೆ ಇದ್ದ ಅಬಕಾರಿ ಸುಂಕ ರೂ. 9.48 ಆದರೆ ಈಗ ರೂ.32.98 ಅಬಕಾರಿ ಸುಂಕವನ್ನು ಸರಕಾರ ಹೇರಿದೆ. ಹಾಗೆಯೇ ಡೀಸೆಲ್‌ಗೆ ರೂ. 31.20 ಹೇರಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಪ್ರಥಮ ಬಾರಿಗೆ ಡೀಸೆಲ್ ಬೆಲೆಯನ್ನು ಪೆಟ್ರೋಲ್ ಬೆಲೆಗೆ ಸಮನಾಗಿ ಮಾರುಕಟ್ಟೆಗೆ ಬರುವಂತೆ ಮಾಡಿದೆ. ಇದರಿಂದ ಸರಕು ಸಾಗಣೆಯ ಮೇಲೆ ಪರಿಣಾಮ ಬೀರಿ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಬಿಜೆಪಿ ಆಡಳಿತದಲ್ಲಿ ಸಾಮಾನ್ಯ ಜನರು ವಿಕಾಸವಾಗದೆ ವಿನಾಶದತ್ತ ಾಗುತ್ತಿದ್ದಾರೆ ಎಂದು ಪಕ್ಷ ಟೀಕಿಸಿದೆ.

ಅಡುಗೆ ಅನಿಲ ಬೆಲೆ ಏರಿಕೆ : ಪೆಟ್ರೋಲ್ ದರ ಏರಿಕೆಯಿಂದ ಸಾಮಾನ್ಯ ಜನರು ತತ್ತರಿಸಿ ಹೋಗಿರುವಾಗಲೇ ಕಳೆದ ಜನವರಿ ತಿಂಗಳಲ್ಲಿಯೇ ಪ್ರತೀ ಸಿಲಿಂಡರಿಗೆ 100 ರೂಪಾಯಿ ಹೆಚ್ಚಳಗೊಳಿಸಿದ್ದ ಕೇಂದ್ರ ಸರಕಾರವು ಪ್ರಸ್ತುತ ಪ್ರತೀ ಸಿಲಿಂಡರ್ ಬೆಲೆಯನ್ನು 50 ರೂ. ಹೆಚ್ಚಳಗೊಳಿಸಿದೆ. ಇದರಿಂದ 14.2 ಕೆ.ಜಿ. ಗ್ಯಾಸ್ ಸಿಲಿಂಡರ್ ಬೆಲೆ 719 ರೂಪಾಯಿಂದ 769 ರೂಪಾಯಿಗೆ ಏರಿಕೆಗೊಂಡಿದೆ. ಕೇಂದ್ರ ಸರಕಾರವು ಗ್ರಾಹಕರಿಗೆ ಸಬ್ಸಿಡಿ ಹಣದ ನೇರ ವರ್ಗಾವಣೆಯನ್ನು ಸ್ಥಗಿತಗೊಳಿಸಿದ ಹಿನ್ನಲೆಯಲ್ಲಿ ಗ್ರಾಹಕರಿಗೆ ಹೆಚ್ಚಿನ ಹೊರೆ ಬಿದ್ದಂತಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರ ಇರುವುದು ಜನರ ಅನುಕೂಲಕ್ಕಾಗಿಯೇ ಹೊರತು ಜನರ ಸುಲಿಗೆ ಮಾಡಲು ಅಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News