×
Ad

ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನ : ನಿರುದ್ಯೋಗ ಅವಧಿಗೆ ನಗದು ಪರಿಹಾರ

Update: 2021-02-18 19:27 IST

ಉಡುಪಿ, ಫೆ.18: ಕೇಂದ್ರ ಸರಕಾರವು ಕಾರ್ಮಿಕರ ರಾಜ್ಯ ವಿಮಾ ನಿಗಮದ ಮೂಲಕ ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದೆ. ವಿಮಾದಾರರಾಗಿ ನೋಂದಾಯಿತ ಕಾರ್ಮಿಕರು ಹಲವಾರು ಕಾರಣಗಳಿಂದ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾದಾಗ ಅವರಿಗೆ ನಿರುದ್ಯೋಗ ಅವಧಿಗೆ ನಗದು ಪರಿಹಾರ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯು ಜೂನ್ ಅಂತ್ಯದವರೆಗೆ ಚಾಲ್ತಿಯಲ್ಲಿರುತ್ತದೆ.

ಕಾರ್ಮಿಕರ ರಾಜ್ಯ ವಿಮಾ ನಿಗಮದಲ್ಲಿ ನೊಂದಣಿಯಾದ ಕನಿಷ್ಟ 2 ವರ್ಷಗಳ ಅವಧಿಯಲ್ಲಿ ವಂತಿಗೆಯನ್ನು ಪಾವತಿಸಿ ನಿರುದ್ಯೋಗಿಯಾದ ವಿಮಾದಾರನಿಗೆ, 2020 ರ ಮಾರ್ಚ್ 23ರ ಪೂರ್ವದಲ್ಲಿ ದಿನಗಳಿಕೆಯ ಶೇ.25ರಂತೆ ಗರಿಷ್ಟ 90 ದಿನಗಳ ನಿರುದ್ಯೋಗ ಪರಿಹಾರ ನೀಡಲಾಗು ವುದು ಮತ್ತು 2020ರ ಮಾರ್ಚ್ 24ರಿಂದ ಡಿಸೆಂಬರ್ 31ರ ಅವಧಿಯಲ್ಲಿ ನಿರುದ್ಯೋಗಿಯಾಗಿದ್ದಲ್ಲಿ ಶೇ. 50ರಂತೆ ಗರಿಷ್ಟ 90 ದಿನಗಳ ನಿರುದ್ಯೋಗ ಪರಿಹಾರ ನೀಡಲಾಗುವುದು.

ವಿಮಾದಾರರು www.esic.nic.in- ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ವಿಮಾದಾರರು ಸಲ್ಲಿಸಿದ ಅರ್ಜಿಯನ್ನು ಸ್ಥಳೀಯ ಇ.ಎಸ್.ಐ ಕಚೇರಿಯವರು ಸ್ವೀಕರಿಸಿ, ವಿಮಾದಾರ ನಿರುದ್ಯೋಗಿ ಎಂಬುದನ್ನು ಖಚಿತಪಡಿಸಿಕೊಂಡ ನಂತರದಲ್ಲಿ ಪರಿಹಾರ ವಿಮಾದಾರನ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಉಡುಪಿ ಉಪವಿಭಾಗದ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News