ಟೂಲ್ ಕಿಟ್ ಪ್ರಕರಣ: ಅಧಿಕೃತ ಮೂಲಗಳಿಂದ ದೊರಕಿದ ಮಾಹಿತಿಗಳನ್ನು ಮಾತ್ರ ಮಾಧ್ಯಮಗಳು ಪ್ರಸಾರ ಮಾಡಬಹುದು; ಹೈಕೋರ್ಟ್
ಹೊಸದಿಲ್ಲಿ: ರೈತರ ಪ್ರತಿಭಟನೆ ಕುರಿತಾದ ಟೂಲ್ ಕಿಟ್ ಪ್ರಕರಣದಲ್ಲಿ ಬಂಧಿತ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರ ಅರ್ಜಿಯ ಮೇಲಿನ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡ ದಿಲ್ಲಿ ಹೈಕೋರ್ಟ್, ಅಪೀಲುದಾರೆಯ ಹಕ್ಕುಗಳು ಉಲ್ಲಂಘನೆಯಾಗದೇ ಇರುವ ರೀತಿಯಲ್ಲಿ ದಿಲ್ಲಿ ಪೊಲೀಸರು ಮಾಧ್ಯಮಗಳಿಗೆ ಪ್ರಕರಣದ ಕುರಿತಂತೆ ಮಾಹಿತಿ ನೀಡಲು ಸುದ್ದಿಗೋಷ್ಠಿ ನಡೆಸಬಹುದಾಗಿದೆ ಎಂದು ಹೇಳಿದೆ.
ತಮ್ಮ ವಿರುದ್ಧದ ಎಫ್ಐಆರ್ ನಲ್ಲಿರುವ ಯಾವುದೇ ತನಿಖೆ ಸಂಬಂಧಿ ವಿಚಾರಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡದಂತೆ ಪೊಲೀಸರಿಗೆ ಸೂಚನೆ ನೀಡಬೇಕೆಂದು ದಿಶಾ ಅವರು ಅಪೀಲು ಸಲ್ಲಿಸಿದ್ದರು.
ತನಿಖೆಗೆ ಯಾವುದೇ ರೀತಿಯಲ್ಲಿ ಅಡ್ಡಿಯುಂಟಾಗದಂತೆ ಸುದ್ದಿ ವಾಹಿನಿಗಳ ಸಂಪಾದಕರು ತಮ್ಮ ವಿವೇಚನೆ ಬಳಸಿ ಸುದ್ದಿ ಪ್ರಸಾರವಾಗುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.
"ಅಧಿಕೃತ ಮೂಲಗಳಿಂದ ದೊರಕಿದ ಮಾಹಿತಿಗಳನ್ನು ಮಾತ್ರ ಪ್ರಸಾರ ಮಾಡಬಹುದು" ಎಂದು ನ್ಯಾಯಾಲಯ ಹೇಳಿದೆ. ಸದ್ಯ ಈ ಪ್ರಕರಣ ಕುರಿತಂತೆ ಮಾಧ್ಯಮಗಳು ಪ್ರಸಾರ ಮಾಡುತ್ತಿರುವ ರೀತಿಯ ಕುರಿತಂತೆಯೂ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಇಂದು ವಿಚಾರಣೆ ಸಂದರ್ಭ ದಿಲ್ಲಿ ಪೊಲೀಸರ ಪರ ವಾದಿಸಿದ ಸಹಾಯಕ ಸಾಲಿಸಿಟರ್ ಜನರಲ್ ಎಸ್ ವಿ ರಾಜು, "ಪೊಲೀಸರಿಗೆ ಕೆಟ್ಟ ಹೆಸರು ತರಲು ಹಾಗೂ ತನಿಖೆಗೆ ಅಡ್ಡಿಯುಂಟು ಮಾಡಲು ಅಪೀಲು ಸಲ್ಲಿಸಲಾಗಿದೆ" ಎಂದು ಆರೋಪಿಸಿದರು.