ಉದ್ಯಾವರ ಗ್ರಾಪಂ ಕಚೇರಿಗೆ ಬೀಗ ಜಡಿದು ಗ್ರಾಮಸ್ಥರ ಪ್ರತಿಭಟನೆ
ಉಡುಪಿ, ಫೆ.19: ಉದ್ಯಾವರ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ, ಸಾರ್ವಜನಿಕರ ವಿರೋಧದ ಮಧ್ಯೆ ಪರಿಸರ ಮಾರಕ ಉದ್ಯಮಗಳಿಗೆ ಪರವಾನಿಗೆ ನೀಡಿರುವುದಾಗಿ ಆರೋಪಿಸಿ ಗ್ರಾಮಸ್ಥರು ಇಂದು ಗ್ರಾಪಂ ಕಚೇರಿಗೆ ಬೀಗ ಜಡಿದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಗ್ರಾಪಂ ವ್ಯಾಪ್ತಿಯಲ್ಲಿ ಪರಿಸರಕ್ಕೆ ಮಾರಕವಾದ ಉದ್ಯಮಗಳಿಗೆ ಆಡಳಿತಾ ಧಿಕಾರಿ ಪಂಚಾಯತ್ ಸದಸ್ಯರ ಗಮನಕ್ಕೆ ತಾರದೆ ಮತ್ತು ಗ್ರಾಮಸಭೆಯ ನಿರ್ಣಯಕ್ಕೆ ವಿರುದ್ಧವಾಗಿ ಏಕಾಏಕಿ ಮತ್ತು ತರಾತುರಿಯಲ್ಲಿ ಪರವಾನಿಗೆಯನ್ನು ನೀಡಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಸಂಬಂಧ ಉಡುಪಿ ತಾಪಂ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಇತರ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಇದಕ್ಕೆ ಯಾವುದೇ ಅಧಿಕಾರಿ ಗಳು ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಆಕ್ರೋಶಿತ ಸಾರ್ವಜನಿಕರು ಕಚೇರಿಗೆ ಬೀಗ ಜಡಿದಿದ್ದಾರೆ. ಈ ಹೋರಾಟಕ್ಕೆ ಗ್ರಾಪಂ ಸದಸ್ಯರೂ ಕೂಡಾ ಬೆಂಬಲ ವನ್ನು ನೀಡಿದ್ದಾರೆ.
ಸಮಸ್ಯೆಯು ಇತ್ಯರ್ಥವಾಗುವವರೆಗೆ ಕಚೇರಿ ತೆರೆಯಲು ಅವಕಾಶ ನೀಡು ವುದಿಲ್ಲ ಎಂದು ಪಟ್ಟು ಹಿಡಿದಿರುವ ಗ್ರಾಮಸ್ಥರು, ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು. ಉದ್ಯಮಕ್ಕೆ ನೀಡಿರುವ ಪರವಾನಿಗೆಯನ್ನು ರದ್ದು ಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.