ಗೋಕರ್ಣ: ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆ
Update: 2021-02-19 15:26 GMT
ಗೋಕರ್ಣ: ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಿದೆ. ಅದರಲ್ಲಿದ್ದ 14 ಮೀನುಗಾರರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.
ದೋಣಿಯು ಕುಮಟಾ ತಾಲ್ಲೂಕಿನ ಮಿರ್ಜಾನ್ನ ವೆಂಕಟ್ರಮಣ ಹೊಸಬು ಅಂಬಿಗ ಎಂಬವರಿಗೆ ಸೇರಿದ್ದು, ಅವರು ಹಾಗೂ ಇತರ 13 ಮಂದಿ ತದಡಿ ಬಂದರಿನಿಂದ ಬುಧವಾರ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದರು. ಶುಕ್ರವಾರ ತಿರುಗಿ ಬರುತ್ತಿದ್ದಾಗ ದೋಣಿಯು ಮುಳುಗಲಾರಂಭಿಸಿತು. ಸಮೀಪದಲ್ಲಿದ್ದ ‘ಸರ್ವಲಕ್ಷ್ಮಿ’ ಎಂಬ ದೋಣಿಯಲ್ಲಿದ್ದವರಿಗೆ ವೈರ್ಲೆಸ್ ಮುಖಾಂತರ ವಿಷಯ ತಿಳಿಸಿದರು. ಕೂಡಲೇ ಸ್ಥಳಕ್ಕೆ ಬಂದ ಅವರು ಮುಳುಗುತ್ತಿದ್ದ ದೋಣಿಯಲ್ಲಿದ್ದ ಎಲ್ಲರನ್ನೂ ರಕ್ಷಿಸಿದರು. ಮುಳುಗಿದ ‘ದುರ್ಗಾಭೈರವಿ’ ದೋಣಿಯಲ್ಲಿ ಮಿರ್ಜಾನ್, ಶಿರಗುಂಜಿ, ಉಳುವರೆ, ಸಗಡಗೇರಿ ಹಾಗೂ ಗಂಗಾವಳಿಯ ಮೀನುಗಾರರಿದ್ದರು ಎಂದು ತಿಳಿದುಬಂದಿದೆ.