ಶ್ರೀನಗರ: ಶಂಕಿತ ಭಯೋತ್ಪಾದಕರಿಂದ ಇಬ್ಬರು ಪೊಲೀಸರ ಹತ್ಯೆ

Update: 2021-02-19 16:59 GMT

ಶ್ರೀನಗರ, ಫೆ. 19: ಶ್ರೀನಗರದಲ್ಲಿ ಶುಕ್ರವಾರ ಶಂಕಿತ ಭಯೋತ್ಪಾದಕರು ತೀರಾ ಸಮೀಪದಿಂದ ಗುಂಡಿ ಹಾರಿಸಿದ ಪರಿಣಾಮ ಇಬ್ಬರು ಪೊಲೀಸರು ಮೃತಪಟ್ಟಿದ್ದಾರೆ. ಘಟನೆ ಈ ಪ್ರದೇಶದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಭಯೋತ್ಪಾದಕರು ಗುಂಡಿನ ದಾಳಿ ನಡೆಸುವ ಸಂದರ್ಭ ಜಮ್ಮು ಹಾಗೂ ಕಾಶ್ಮೀರ ಪೊಲೀಸ್‌ನ ಕಾನ್ಸ್‌ಟೆಬಲ್ ಸೊಹೈಲ್ ಹಾಗೂ ಮುಹಮ್ಮದ್ ಯೂಸುಫ್ ನಗರದ ಭಗತ್ ಬರ್ಝುಲ್ಲಾ ಪ್ರದೇಶದಲ್ಲಿರುವ ಟಿ ಅಂಗಡಿಯೊಂದರಲ್ಲಿ ಇದ್ದರು ಎಂದು ವರದಿ ಹೇಳಿದೆ. ಶಂಕಿತ ಭಯೋತ್ಪಾದಕರ ಗುಂಡಿನಿಂದ ಗಂಭೀರ ಗಾಯಗೊಂಡಿದ್ದ ಸುಹೈಲ್ ಹಾಗೂ ಮುಹಮ್ಮದ್ ಯೂಸುಫ್ ಅವರನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಅವರಿಬ್ಬರೂ ಸಾವನ್ನಪ್ಪಿದರು.

ಭಯೋತ್ಪಾದಕರನ್ನು ಶೋಧಿಸಲು ಭದ್ರತಾ ಪಡೆ ಕಾರ್ಯಾಚರಣೆ ಆರಂಭಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಮೂರು ದಿನಗಳಲ್ಲಿ ಶ್ರೀನಗರದಲ್ಲಿ ನಡೆಯುತ್ತಿರುವ ಎರಡನೇ ಘಟನೆ ಇದಾಗಿದೆ. ನಗರದ ಅತಿ ಭದ್ರತೆಯ ದುರ್ಗಾನಾಗ್ ಪ್ರದೇಶದಲ್ಲಿ ಬುಧವಾರ ಭಯೋತ್ಪಾದಕರು ಗುಂಡು ಹಾರಿಸಿದ ಪರಿಣಾಮ ರೆಸ್ಟಾರೆಂಟ್‌ನ ಮಾಲಿಕನ ಪುತ್ರ ಗಾಯಗೊಂಡಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News