ಸಾಸ್ತಾನ ಟೋಲ್ನಲ್ಲಿ ಸ್ಥಳೀಯರಿಗೆ ವಿನಾಯಿತಿ: ಕರಂದ್ಲಾಜೆ ಸೂಚನೆ
ಉಡುಪಿ, ಫೆ.22: ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ಸಮಸ್ಯೆ ಕುರಿತು ಚರ್ಚಿಸಲು ಇಂದು ಉಡುಪಿ ಜಿಪಂ ಸಭಾಂಗಣದಲ್ಲಿ ಕರೆಯಲಾದ ಸಭೆಯಲ್ಲಿ ಸಾಸ್ತಾನ ಟೋಲ್ಗೇಟ್ನ ಐದು ಕಿ.ಮೀ. ವ್ಯಾಪ್ತಿಯ ಸ್ಥಳೀಯರ ವಾಹನಗಳಿಗೆ ಟೋಲ್ನಲ್ಲಿ ವಿನಾಯಿತಿ ನೀಡಬೇಕು ಎಂದು ಸಂಸದರು, ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಆದರೆ ಇದಕ್ಕೆ ನವಯುಗ ಕಂಪೆನಿಯ ಅಧಿಕಾರಿಗಳು ಒಪ್ಪದಿದ್ದರೂ ಸರಿಯಾದ ನಿರ್ಧಾರ ತೆಗೆದುಕೊಳ್ಳದೆ ಭೆಯನ್ನು ಅಂತ್ಯಗೊಳಿಸಲಾಯಿತು.
ಸಂಸದೆ ಶೋಭಾ ಕರಂದ್ಲಾಜೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಟೋಲ್ ಗೇಟ್ ವ್ಯಾಪ್ತಿಯ ಐದು ಗ್ರಾಪಂಗಳ ಗ್ರಾಮಸ್ಥರ ವಾಹನಗಳ ದಾಖಲೆಗಳನ್ನು ಸಂಗ್ರಹಿಸಿ, ಆ ವಾಹನಗಳಿಗೆ ಟೋಲ್ನಲ್ಲಿ ವಿನಾಯಿತಿ ನೀಡಬೇಕು ಎಂದು ಸೂಚನೆ ನೀಡಿದರು. ಇದಕ್ಕೆ ಜಿಲ್ಲಾಡಳಿತ ಸಹಕಾರ ನೀಡಿ ವಾಹನಗಳ ದಾಖಲೆ ಸಂಗ್ರಹಿಸಿ ನೀಡಲಾಗುವುದು. ಇದರಿಂದ ನಕಲಿ ವಾಹನಗಳಿಗೆ ವಿನಾಯಿತಿ ನೀಡುವುದನ್ನು ತಪ್ಪಿಸಬಹುದೆಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಆದರೆ ಇದಕ್ಕೆ ಒಪ್ಪದ ನವಯುಗ ಕಂಪೆನಿಯ ಟೋಲ್ ಉಸ್ತುವಾರಿ ರಾಮಕೃಷ್ಣ, ಈ ರೀತಿ ಮಾಡಲು ಆಗುವುದಿಲ್ಲ. ಈಗಾಗಲೇ ಮೂರು ವರ್ಷ ಗಳ ಕಾಲ ಟೋಲ್ ವಿನಾಯಿತಿ ನೀಡಲಾಗಿದೆ. ಪ್ರತಿದಿನ ಶೇ.40ರಷ್ಟಡು ವಾಹನಗಳು ಉಚಿತವಾಗಿ ಸಂಚಾರ ಮಾಡುತ್ತಿದೆ. ಈಗಾಗಲೇ ಕಂಪೆನಿ ಸಾಕಷ್ಟು ನಷ್ಟದಲ್ಲಿದೆ. ಈ ಮಧ್ಯೆ ಇಂತಹ ನಿರ್ಧಾರ ಮಾಡುವುದು ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರದ ಈ ಹಿಂದಿನ ತೀರ್ಮಾನಕ್ಕೆ ವಿರುದ್ಧವಾಗಿದೆ. ನಮಗೆ ತುಂಬಾ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಭದ್ರತೆ ಹಿಂತೆಗೆತದ ಎಚ್ಚರಿಕೆ:ಸಭೆಯ ತೀರ್ಮಾನಕ್ಕೆ ಕಂಪೆನಿಯವರು ಒಪ್ಪದಿದ್ದರೆ ಟೋಲ್ಗೇಟ್ಗೆ ನೀಡಿರುವ ಪೊಲೀಸ್ ಭದ್ರತೆಯನ್ನು ವಾಪಾಸ್ಸು ತೆಗೆದುಕೊಳ್ಳಬೇಕಾದೀತು ಎಂದು ಸಂಸದೆ ಕರಂದ್ಲಾಜೆ ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಪದಾಧಿಕಾರಿಗಳು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಸಾಸ್ತಾನ ಟೋಲ್ಗೇಟ್ನಲ್ಲಿ ಸ್ಥಳೀಯರಿಗೆ ಪಾಸ್ ವ್ಯವಸ್ಥೆ ಮಾಡದೆ ವಿನಾಯಿತಿಯನ್ನು ಮುಂದುವರೆಸಬೇಕು. ಯಾವುದೇ ಕಾರಣಕ್ಕೂ ಇದನ್ನು ರದ್ದುಗೊಳಿಸಬಾರದು ಒತ್ತಾಯಿಸಿದರು.
ನಗರ ಸ್ಥಳೀಯಾಡಳಿತ ವ್ಯಾಪ್ತಿಯಲ್ಲಿ ಟೋಲ್ಗೇಟ್ ನಿರ್ಮಿಸಲು ಕಾನೂನಿ ನಲ್ಲಿ ಅವಕಾಶ ಇಲ್ಲ. ಆದರೂ ಇಲ್ಲಿ ನಿರ್ಮಿಸಿರುವ ಈ ಟೋಲ್ ಗೇಟ್ನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು. ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಯಿಂದ ಈವರೆಗೆ 650 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದುದರಿಂದ ಈ ಕಂಪೆನಿ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಅವರು ಆಗ್ರಹಿಸಿದರು.
ಶೇ.75ರಷ್ಟು ಬಸ್ ಸಂಚಾರ ಸ್ಥಗಿತ: ಹೆಜಮಾಡಿಯ ಒಳರಸ್ತೆಯಲ್ಲಿ ನಿರ್ಮಿಸಲಾದ ಟೋಲ್ಗೇಟ್ನಲ್ಲಿ ಸರ್ವಿಸ್ ಬಸ್ಗಳು ದಿನಕ್ಕೆ 600- 900ರೂ. ಹಣ ಪಾವತಿಸಿ ಸಂಚರಿಸುತ್ತಿದ್ದು ಇದರಿಂದ ನಷ್ಟ ಅನುಭವಿಸುತ್ತಿರುವ ಮಾಲಕರು ಶೇ.75ರಷ್ಟು ಬಸ್ ಸಂಚಾರ ವನ್ನು ಸ್ಥಗಿತಗೊಳಿಸಿದ್ದಾರೆ. ಆದುದರಿಂದ ಖಾಸಗಿ ಸರ್ವಿಸ್ ಬಸ್ಗಳಿಗೆ ವಿನಾಯಿತಿ ನೀಡಬೇಕು ಎಂದು ಕೆನರಾ ಬಸ್ ಮಾಲಕರ ಸಂಘದ ಕಾರ್ಯ ದರ್ಶಿ ಸುರೇಶ್ ನಾಯಕ್ ಕುಯಿಲಾಡಿ ಒತ್ತಾಯಿಸಿದರು.
ಮಲ್ಪೆ-ಕರಾವಳಿ ಬೈಪಾಸ್ವರೆಗಿನ ರಾಷ್ಟ್ರೀಯ ಹೆದ್ದಾರಿಯನ್ನು 30ಮೀಟರ್ ಬದಲು 22 ಮೀಟರ್ನಲ್ಲಿ ಅಗಲೀಕರಣಗೊಳಿಸಲಾಗುವುದು. ಈ ಸಂಬಂಧ ಹೆಬ್ರಿ-ಹಿರಿಯಡ್ಕ ದ್ವಿಪಥ, ಹಿರಿಯಡ್ಕ-ಪರ್ಕಳ ಚತ್ಪುಥ ಸೇರಿದಂತೆ ಈ ಮೂರು ಯೋಜನೆಯನ್ನು ಒಂದೇ ಯೋಜನೆಯನ್ನಾಗಿಸಿ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಹೆದ್ದಾರಿ ಅಧಿಕಾರಿಗಳು ತಿಳಿಸಿದರು.
ಪರ್ಕಳ ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನಕ್ಕೆ ಸಂಬಂಧಿಸಿ ಭೂಮಿಯ ದರ ವನ್ನು ನಿಗದಿಪಡಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಆ ಬಳಿಕ ಸ್ಥಳೀಯರ ಸಭೆ ಕರೆದು ಒಪ್ಪಿಸುವ ಕಾರ್ಯ ಮಾಡುವ ಬಗ್ಗೆ ಸಭೆಯಲ್ಲಿತೀರ್ಮಾನ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಜಿಪಂ ಅಧ್ಯಕ್ಷ ದಿನಕರ ಬಾಬು, ಸಿಇಓ ಡಾ.ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಉಪಸ್ಥಿತರಿದ್ದರು.
ಯೋಜನಾ ನಿರ್ದೇಶಕರಿಗೆ ತರಾಟೆ
ನವಯುಗ ಕಂಪೆನಿ ಪರವಾಗಿ ಸಭೆಯಲ್ಲಿ ವಾದ ಮಂಡಿಸುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಯೋಜನಾ ನಿರ್ದೇಶಕ ಶಿಶು ಮೋಹನ್ ಅವರನ್ನು ಸಂಸದೆ ತೀವ್ರ ತರಾಟೆಗೆ ತೆಗೆದುಕೊಂಡರು.
ಕೇಂದ್ರ ಸರಕಾರ ಫಾಸ್ಟ್ಟ್ಯಾಗ್ ಕಡ್ಡಾಯ ಮಾಡಿರುವುದರಿಂದ ಸ್ಥಳೀಯರಿಗೆ ತಿಂಗಳಿಗೆ 275ರೂ. ಮೊತ್ತದ ಪಾಸ್ ಮಾಡಿದ್ದೇವೆ. ದಿನಕ್ಕೆ 10ರೂ. ಮಾತ್ರ ಆಗುತ್ತದೆ. ಇದು ಚಹಾ ಕುಡಿಯಲು ವ್ಯಯಿಸುವ ಹಣ ಎಂದು ಶಿಶು ಮೋಹನ್ ತಿಳಿಸಿದರು. ಇದಕ್ಕೆ ಸಮಿತಿಯವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.