ಪುರಾತತ್ವ ತಜ್ಞ ಕೆ.ಕೆ.ಮುಹಮ್ಮದ್ಗೆ ‘ಪಾದೂರು ಗುರುರಾಜ ಭಟ್ ಪ್ರಶಸ್ತಿ’
ಉಡುಪಿ, ಫೆ.22: ಉಡುಪಿ ಡಾ.ಪಾದೂರು ಗುರುರಾಜ ಭಟ್ ಮೆಮೊ ರಿಯಲ್ ಟ್ರಸ್ಟ್ ವತಿಯಿಂದ ನೀಡುವ 2021ನೆ ಸಾಲಿನ ಡಾ.ಪಾದೂರು ಗುರುರಾಜ ಭಟ್ ಸ್ಮಾರಕ ಪ್ರಶಸ್ತಿಗೆ ಪುರಾತತ್ವ ತಜ್ಞ ಪದ್ಮಶ್ರೀ ಕೆ.ಕೆ.ಮುಹಮ್ಮದ್ ಆಯ್ಕೆಯಾಗಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ನ ಸಂಚಾಲಕ ಪ್ರೊ.ಪಿ.ಶ್ರೀಪತಿ ತಂತ್ರಿ, ಫೆ.28ರಂದು ಬೆಳಗ್ಗೆ 9.30ಕ್ಕೆ ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್ನ ಒಳಾಂಗಣ ಸಭಾಂಗಣದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಲಿರುವರು. ಕೆ.ಕೆ.ಮುಹಮ್ಮದ್ ‘ಅಯೋಧ್ಯೆ ಉತ್ಖನನ ಮತ್ತು ಮಧ್ಯ ಪ್ರದೇಶ ಮತ್ತು ಜಾರ್ಖಂಡ್ನಲ್ಲಿ ಉತ್ಖನನ’ ಕುರಿತು ವಿಶೇಷ ಉಪನ್ಯಾಸ ನೀಡಲಿರುವರು ಎಂದರು.
ಮಧ್ಯಾಹ್ನ 12.15ಕ್ಕೆ ಕೆ.ಕೆ.ಮುಹಮ್ಮದ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡ ಲಾಗುವುದು. ಇದರಲ್ಲಿ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಬೈರಪ್ಪ ಭಾಗವಹಿಸಲಿರುವು ಎಂದು ಅವರು ಮಾಹಿತಿ ನೀಡಿದರು.
ಕೇರಳ ಕಲ್ಲಿಕೋಟೆ ಮೂಲದ ಇವರು, 1996ರಲ್ಲಿ ಬಾಬ್ರಿ ಮಸೀದಿಯ ಉತ್ಖನ ಮಾಡಿದ ಡಾ.ಬಿ.ಬಿ.ಲಾಲರ ತಂಡದಲ್ಲಿ ಸದಸ್ಯರಾಗಿದ್ದರು. ಧ್ವಂಸವಾದ ದೇವಾಲಯಗಳನ್ನು ಕಂಡು ಹಿಡಿಯುವುದು ಇವರ ವಿಶೇಷವಾದ ಆಸಕ್ತಿ ಯಾಗಿದೆ. ಮಧ್ಯಪ್ರದೇಶ, ಜಾರ್ಖಂಡ ಮುಂತಾದ ಪ್ರದೇಶಗಳಲ್ಲಿ 70ಕ್ಕೂ ಅಧಿಕ ದೇವಾಲಯಗಳ ಉತ್ಖನನ ಮತ್ತು ಅವುಗಳನ್ನು ಪುನರುಜ್ಜೀವನ ಮಾಡಿ ಸುವಲ್ಲಿ ಸಫಲರಾಗಿದ್ದಾರೆ. ಇವರು 2019ರಲ್ಲಿ ಪದ್ಮಶ್ರೀ ಪುರಸ್ಕೃತರಾದರು. ಇವರ ಆತ್ಮಚರಿತ್ರೆ ‘ನಾನೊಬ್ಬ ಭಾರತೀಯ’ ಅತ್ಯಂತ ಪ್ರಸಿದ್ಧವಾಗಿದೆ ಎಂದು ಅವರು ತಿಳಿಸಿದರು.