ʼನಕಲಿ ಸರ್ಟಿಫಿಕೇಟ್ʼ‌ ಮೂಲಕ ಔಷಧಿ ತಯಾರಿಸುತ್ತಿರುವ ರಾಮ್‌ ದೇವ್‌ ನನ್ನು ಬಂಧಿಸಿ: ಸಾಮಾಜಿಕ ತಾಣದಾದ್ಯಂತ ಆಕ್ರೋಶ

Update: 2021-02-23 07:50 GMT

ಹೊಸದಿಲ್ಲಿ: ಕೊರೋನ ವೈರಸ್‌ ನ ಪ್ರಾರಂಭದ ಹಂತದಲ್ಲೇ ಬಾಬಾ ರಾಮ್‌ ದೇವ್‌ ಒಡೆತನದ ಪತಂಜಲಿ ಆಯುರ್ವೇದ ಸಂಸ್ತೆಯು ಔಷಧಿಯನ್ನು ಅವಿಷ್ಕರಿಸಿದ್ದಾಗಿ ಹೇಳಿಕೆ ನೀಡಿತ್ತು. ಆದರೆ ಅದನ್ನು ಅಧಿಕೃತಗೊಳಿಸಲು ಸಾಧ್ಯವಾಗಿರಲಿಲ್ಲ. ಇದೀಗ ಕೆಲ ದಿನಗಳ ಹಿಂದೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹಾಗೂ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ರವರು ʼಕೊರೊನಿಲ್‌ʼ ಅನ್ನು ಬಿಡುಗಡೆ ಮಾಡಿದ್ದರು.

ಈ ಸಂದರ್ಭದಲ್ಲಿ ʼಕೊರೊನಿಲ್‌ʼ ಕೊರೋನ ವೈರಸ್‌ ಗೆ ಪರಿಣಾಮಕಾರಿ ಆಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರಮಾಣಪತ್ರ ಪಡೆದುಕೊಂಡಿದೆ ಎಂದು ಬರೆದುಕೊಂಡಿದ್ದು ಮಾತ್ರವಲ್ಲದೇ ಸಾರ್ವಜನಿಕ ಘೋಷಣೆಯನ್ನೂ ಮಾಡಿದ್ದರು. ಬಳಿಕ ವಿಶ್ವ ಆರೋಗ್ಯ ಸಂಸ್ಥೆಯು ʼನಾವು ಯಾವುದೇ ಸಾಂಪ್ರದಾಯಿಕ ಔಷಧಿಗಳಿಗೆ ಪ್ರಮಾಣಪತ್ರ ನೀಡಿಲ್ಲ" ಎಂದು ಟ್ವೀಟ್‌ ಮಾಡಿತ್ತು.

ಈ ಪ್ರಕರಣದ ಬಳಿಕ ಇದೀಗ ಬಾಬಾ ರಾಮ್‌ ದೇವ್‌ ರನ್ನು ಬಂಧಿಸಬೇಕೆಂದು ಸಾಮಾಜಿಕ ತಾಣದಾದ್ಯಂತ ಕೂಗು ಕೇಳಿ ಬರುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಹೆಸರಿನಲ್ಲಿ ಜನರನ್ನು ಮಾತ್ರವಲ್ಲದೇ ಸರಕಾರವನ್ನೂ ವಂಚಿಸಿದಾತನ ಬಂಧನ ಏಕಿಲ್ಲ ಎಂದು ಸಾಮಾಜಿಕ ತಾಣದಲ್ಲಿ ಬಳಕೆದಾರರು ಪ್ರಶ್ನಿಸುತ್ತಿದ್ದಾರೆ.

"ರಾಮ್ ದೇವ್‌ ರ ಕೊರೊನಿಲ್‌, ಕೊರೊನಾ ವೈರಸ್‌ ಗೆ ಪರಿಹಾರ ಎಂದಾದರೆ 35,000ಕೋಟಿ ರೂ.ಯನ್ನು ಕೊರೋನ ಲಸಿಕೆಗೆ ವ್ಯಯಿಸುತ್ತಿರುವುದೇಕೆ? ಇದಕ್ಕೆ ಕೇವಲ ರಾಮ್‌ ದೇವ್‌ ಮಾತ್ರ ಹೊಣೆಯಲ್ಲ, ನಕಲಿ ಪ್ರಮಾಣ ಪತ್ರ ಹೊಂದಿರುವ ಔಷಧಿಯನ್ನು ಪ್ರಮೋಟ್‌ ಮಾಡಿದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ಕೂಡಾ ಉತ್ತರ ನೀಡಬೇಕು ಎಂದು ಬಳಕೆದಾರರು ಆಗ್ರಹಿಸಿದ್ದಾರೆ. ಸದ್ಯ ʼಅರೆಸ್ಟ್‌ ರಾಮ್‌ ದೇವ್‌ʼ ಹ್ಯಾಶ್‌ ಟ್ಯಾಗ್‌ ಟ್ವಿಟರ್‌ ನಲ್ಲಿ ಟ್ರೆಂಡಿಂಗ್‌ ಆಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News