ಪಾದೂರು ಘಟಕ್ಕೆ ಸಮುದ್ರದಲ್ಲಿ ಪೈಪ್‍ಲೈನ್; ಜನವಿರೋಧಿಯಾದರೆ ಜನರೊಂದಿಗೆ: ಲಾಲಾಜಿ ಮೆಂಡನ್

Update: 2021-02-26 09:20 GMT

ಕಾಪು : ಪಾದೂರು ಯೋಜನೆಯಿಂದ ಕಚ್ಚಾತೈಲ ಸಂಗ್ರಹಣೆ ಮತ್ತು ರವಾನೆಗೆ ಜನವಸತಿ ಇಲ್ಲದ ಪ್ರದೇಶದಲ್ಲಿ ಪೈಪ್ ಲೈನ್ ಕಾಮಗಾರಿ ನಡೆಸಲು ಸೂಚಿಸಲಾಗಿದೆ ಎಂದು ಶಾಸಕ ಲಾಲಾಜಿ ಮೆಂಡನ್ ಹೇಳಿದರು.

ಬುಧವಾರ ಕಾಪು ಪುರಸಭೆಯ ಸಾಮನ್ಯ ಸಭೆಯಲ್ಲಿ ಪುರಸಭಾ ಸದಸ್ಯ ಅರುಣ್ ಶೆಟ್ಟಿ ಪಾದೂರು ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಮಲ್ಲಾರು, ಕೊಪ್ಪಲಂಗಡಿ ಮೂಲಕವಾಗಿ ಸಮುದ್ರ ದಡದಿಂದ 22 ಕಿ.ಮೀ ಉದ್ದದ  ಪೈಪ್‍ಲೈನ್ ಕಾಮಗಾರಿಗೆ ನಡೆಯಲಿದೆ. ದೇಶದ  ಭದ್ರತೆಯ ಕಾರಣದಿಂದ ಯೋಜನೆಗೆ ಬೆಂಬಲ ನೀಡಿದ್ದೇವೆ. ಆದರೆ ಅದು ಜನ ವಿರೋಧಿಯಾದರೆ ಜನರೊಂದಿಗೆ ನಾವು ನಿಲ್ಲುತ್ತೇವೆ ಎಂದು ಲಾಲಾಜಿ ಮೆಂಡನ್ ಹೇಳಿದರು.

ಪಾದೂರಿನಲ್ಲಿ ಜನರನ್ನು ಕತ್ತಲಲ್ಲಿಟ್ಟು ಕಚ್ಚಾತೈಲ ಸಂಗ್ರಹಣಾ ರ್ಘಟಕ ಕಾಮಗಾರಿ ನಡೆದಿದೆ. ಪ್ರಸ್ತುತ ಎರಡನೇ ಹಂತದ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ದೊರಕಿದ್ದು, ಇದೀಗ ಘಟಕದಿಂದ ಸಮುದ್ರ ಕಿನಾರೆಯವರೆಗೆ ಪೈಪ್‍ಲೈನ್ ಅಳವಡಿಕೆ ಆಗಲಿದೆ ಎಂಬ ಮಾಹಿತಿ ಬಂದಿದ್ದು, ಈ ಬಗ್ಗೆ ಪುರಸಭೆಗೆ ಅಧಿಕೃತವಾಗಿ ಮಾಹಿತಿ ಇದೆಯೇ ಎಂದು ಅರುಣ್ ಶೆಟ್ಟಿ ಪ್ರಶ್ನಿಸಿದರು.

ಪಡು ಗ್ರಾಮದ ರಾಮನಗರ, ಮಲ್ಲಾರು, ಕುಡ್ತಿಮಾರು ಪೈಪ್‍ಲೈಹ್ ಕಾಮಗಾರಿ ನಡೆಯಲಿದ್ದು, ಕಾಮಗಾರಿಗೆ ಈಗಾಗಲೇ ಸರ್ವೇಗೆ ಜನ ಬಂದಿದ್ದರು. ಆದರೆ ಸ್ಥಳೀಯರ ವಿರೋಧ ಮತ್ತು ಗೊಂದಲಗಳ ಕಾರಣದಿಂದ ಸರ್ವೇ ಕೆಲಸವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಸದಸ್ಯರ ಗಮನಕ್ಕೆ ತಂದು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಹೇಳಿದರು.

ಪೈಪ್‍ಲೈನ್ ಯೋಜನೆಯಿಂದ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಅವರಿಗೆ ಪುನರ್ವಸತಿ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸದಸ್ಯ ಕೆ.ಎಚ್.ಉಸ್ಮಾನ್ ಆಗ್ರಹಿಸಿದರು.

ಸಿಡಿಪಿಐ ವಿರುದ್ಧ ಅಸಮಾಧಾನ: ಕಾಪು ಪುರಸಭೆ ವ್ಯಾಪ್ತಿಯಲ್ಲಿ ಅಂಗನವಾಡಿ ವಿಚಾರದಲ್ಲಿ ಬಹಳಷ್ಟು ಸಮಸ್ಯೆಗಳಿದ್ದು, ಅದನ್ನು ಕೇಳಲು ಅಧಿಕಾರಿಗಳೇ ಇಲ್ಲ. ಹೀಗಾದರೆ ನಮ್ಮ ವಾರ್ಡಗಳಲ್ಲಿ ಇರುವ ಅಂಗವಾಡಿ ಕೇಂದ್ರಗಳ ಸಮಸ್ಯೆಗಳನ್ನು ಪರಿಹರಿಸುದಾದರೂ ಹೇಗೆ ? ಎಂದು ಪುರಸಭಾಧ್ಯಕ್ಷ ಅನಿಲ್ ಕುಮಾರ್ ಪ್ರಶ್ನಿಸಿದರು. ಇದಕ್ಕೆ ಸದಸ್ಯರು ಕೂಡಾ ದನಿಗೂಡಿಸಿದ್ದು, ಸಿಡಿಪಿಒ ಅವರ ಅನುಪಸ್ಥಿತಿ ಪುರಸಭೆ ಸಾಮಾನ್ಯ ಸಭೆಗೆ ನೀಡುವ ಅಗೌರವವಾಗಿದೆ ಎಂದರು.

ಈ ಬಗ್ಗೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ ಪ್ರತಿಕ್ರಿಯಿಸಿ, ಸಿಡಿಪಿಒ ಅವರಿಗೆ ಮುಂದಿನ ಸಭೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಮತ್ತು ಇಲಾಖಾವಾರು ಸಂಪೂರ್ಣ ಮಾಹಿತಿ ನೀಡುವಂತೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು.

ಸುಮಾರು 750 ಟಿಪ್ಪರ್ ತ್ಯಾಜ್ಯ : ನಾಲ್ಕು ವರ್ಷಗಳಿಂದ ಸಂಗ್ರಹವಾಗಿರುವ 750 ಟಿಪ್ಪರ್ ನಷ್ಟು ತ್ಯಾಜ್ಯ ವಿಲೇವಾರಿಗೆ ಸಂಗ್ರಹವಾಗಿದೆ. ಇದಕ್ಕೆ 15 ಲಕ್ಷ ರೂ. ವೆಚ್ಚ ತಗಲಲಿದ್ದು, ಟೆಂಡರ್ ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಶೀಘ್ರ ತ್ಯಾಜ್ಯ ವಿಲೇವಾರಿಗೆ ಕ್ರಮ ತೆಗೆದು ಕೊಳ್ಳುವುದಾಗಿ ಮುಖ್ಯಾದಿಕಾರಿ ಭರವಸೆ ನೀಡಿದರು.

ಸ್ಮಶಾನ ನಿರ್ವಹಣೆ ಮತ್ತು ದಾಖಲಾತಿ ಸಂಗ್ರಹಣೆಯ ಮೇಲುಸ್ತುವಾರಿ ನೋಡಿಕೊಳ್ಳಲು ಸಮಿತಿ ರಚಿಸುವಂತೆ ಸದಸ್ಯರು ಒತ್ತಾಯಿಸಿದರು. ಕೆಲವು ಮಸೀದಿಗಳ ಕಬರಿಸ್ಥಾನಗಳಲ್ಲೂ ಶವ ಧಪನ ನಡೆಯುತ್ತಿದ್ದು ನೋಂದಾವಣೆಗಾಗಿ ಸಮಿತಿ ರಚಿಸುವಂತೆ ಅಗ್ರಹಿಸಿದರು.

ಕಾಪು ಪುರಸಭೆ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಪದೇ ಪದೇ ಕಾಡುತ್ತಿದೆ. ಶಿರ್ವ ಸಬ್ ಸ್ಟೇಷನ್ ನಿಂದ ವಿದ್ಯುತ್ ಪ್ರವಹಿಸುವಿಕೆ ಆಗುತ್ತಿದ್ದು, ಕಾಪುವಿಗೆ ಪ್ರತ್ಯೇಕವಾಗಿ 113/11 ಕೆವಿ ಸಬ್ ಸ್ಟೇಷನ್ ನಿರ್ಮಾಣಕ್ಕೆ ನಿರ್ಣಯ ತೆಗೆದುಕೊಳ್ಳುವಂತೆ ಅರುಣ್ ಶೆಟ್ಟಿ ಪಾದೂರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News