ಅಡಿಕೆಗೆ ಹಳದಿ ರೋಗ: ಸಂಸದರಿಗೆ ಕ್ಯಾಂಪ್ಕೊ ಮನವಿ

Update: 2021-02-26 15:26 GMT

ಮಂಗಳೂರು, ಫೆ.26: ಅಡಿಕೆ ಕೃಷಿಯನ್ನು ವ್ಯಾಪಕವಾಗಿ ಬಾಧಿಸಿರುವ ಹಳದಿ ರೋಗವು ಅಡಿಕೆ ಕೃಷಿಕರನ್ನು ಚಿಂತೆಗೀಡುಮಾಡಿದೆ. ಈ ಬಗ್ಗೆ ಸರಕಾರದ ಗಮನ ಸೆಳೆಯಲು ದ.ಕ. ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಅವರಿಗೆ ಕ್ಯಾಂಪ್ಕೊ ವತಿಯಿಂದ ಮನವಿ ಸಲ್ಲಿಸಲಾಯಿತು.

ಮಂಗಳೂರಿನಲ್ಲಿ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ನೇತೃತ್ವದಲ್ಲಿ ಸಂಸದರನ್ನು ಭೇಟಿ ಮಾಡಿದ ಕ್ಯಾಂಪ್ಕೊ ನಿಯೋಗ ಅಡಿಕೆ ಕೃಷಿಕರ ಆದಾಯದ ಮೂಲಕ್ಕೆ ಹೊಡೆತ ನೀಡಿದ್ದು, ರೋಗ ನಿವಾರಣೆಗಾಗಿ ತಜ್ಞ ವಿಜ್ಞಾನಿಗಳ ತಂಡದ ಮೂಲಕ ಸಂಶೋಧನೆಗಳನ್ನು ನಡೆಸಿ ಶಾಶ್ವತ ಪರಿಹಾರ, ರೋಗಬಾಧೆಯಿಂದ ನೊಂದಿರುವ ಅಡಿಕೆ ಕೃಷಿಕರ ಸಾಲಮನ್ನಾ, ಹೊಸ ಕೃಷಿಯಲ್ಲಿ ತೊಡಗಿಸಿಕೊಳ್ಳುವಲ್ಲಿ ಸಹಕಾರ ನೀಡುವ ಬಗ್ಗೆ ಸರಕಾರವನ್ನು ಒತ್ತಾಯಿಸಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಹಲವು ಭಾಗಗಳಲ್ಲಿ, ಪ್ರಮುಖವಾಗಿ ಸುಳ್ಯ, ಕೊಪ್ಪ, ಮಡಿಕೇರಿ ಮತ್ತು ಶೃಂಗೇರಿ ತಾಲೂಕುಗಳ ಅಡಿಕೆ ತೋಟಗಳನ್ನು ತೀವ್ರ ವಾಗಿ ಬಾಧಿಸಿರುವ ಹಳದಿ ರೋಗವು ಬೆಳೆಗಾರರಲ್ಲಿ ಆತಂಕವನ್ನುಂಟು ಮಾಡಿದೆ. ಅಡಿಕೆ ತೋಟಗಳನ್ನೇ ನುಂಗಿ ಹಾಕುವ ಸಂದೇಹವು ತಾಲೂಕಿನ ಕೃಷಿಕರನ್ನು ಆವರಿಸಿದೆ. ಈ ಬಗ್ಗೆ ಕೃಷಿಕರ ಮೇಲಿನ ಕಾಳಜಿಯಿಂದ ಕ್ಯಾಂಪ್ಕೊ ಮತ್ತು ಸುಳ್ಯ ಅಡಿಕೆ ಬೆಳೆ ಹಿತರಕ್ಷಣಾ ವೇದಿಕೆಗಳ ಸಹಯೋಗದಲ್ಲಿ ಸುಳ್ಯದ ತೊಡಿಕಾನದಲ್ಲಿ ಆಯೋಜಿಸಲಾಗಿದ್ದ ಸಂವಾದದಲ್ಲಿ ಕೈಗೊಂಡ ನಿರ್ಣಯದಂತೆ ಮನವಿ ಸಲ್ಲಿಸಲಾಯಿತು.

ಪದೇಪದೇ ಕೃಷಿಕರ ನಿದ್ದೆಗೆಡಿಸುವ ಅಡಿಕೆಯ ಮೇಲಿನ ನಿಷೇಧದ ತೂಗುಕತ್ತಿಯನ್ನು ನಿವಾರಿಸಲು ವೈಜ್ಞಾನಿಕ ಸಂಶೋಧನೆಗಳ ಅಗತ್ಯ ಇರುವುದನ್ನು ಸಂಸದರ ಗಮನಕ್ಕೆ ತರಲಾಯಿತು. ಕ್ಯಾಂಪ್ಕೊ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ, ಮಹೇಶ್ ಚೌಟ, ರಾಘವೇಂದ್ರ ಭಟ್ ನಿಯೋಗದಲ್ಲಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News