'ತನ್ನ ಕುಟುಂಬದ ಮಾನ ಹರಾಜು ಹಾಕಲೆಂದೇ ಬ್ಯಾಂಕ್ ನಿಂದ ಮನೆ ಜಪ್ತಿಯ ಕಾರ್ಯಾಚರಣೆ'

Update: 2021-02-26 17:28 GMT

ಪುತ್ತೂರು: ಸಾಲದ ಹಣ ಮರುಪಾವತಿಗೆ ಒನ್ ಟೈಂ ಸೆಟಲ್ಮೆಂಟ್ ಗೆ ಬ್ಯಾಂಕ್ ಯಾವುದೇ ಅವಕಾಶವನ್ನು ನೀಡಿಲ್ಲ ಎಂದು ಬ್ಯಾಂಕ್ ಜಪ್ತಿಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಪತಿ ರಘವೀರ್ ಪ್ರಭು ಆರೋಪಿಸಿದ್ದಾರೆ.

ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಾಡಿ  ವ್ಯವಹಾರಕ್ಕೆ ಸಂಬಂಧಿಸಿದಂತೆ 2007 ರಲ್ಲಿ ದಕ್ಷಿಣಕನ್ನಡ ಜಿಲ್ಲೆಯ  ಕೆನರಾ ಬ್ಯಾಂಕ್ ನಿಂದ ರೂ. 6 ಕೋಟಿ ರೂಪಾಯಿ ಸಾಲ ಪಡೆಯಲಾಗಿತ್ತು. ಈ ಪೈಕಿ ರೂ. 3 ಕೋಟಿ ರೂಪಾಯಿಗಳ ಮರುಪಾವತಿಯನ್ನೂ ಮಾಡಲಾಗಿತ್ತು. ಆದರೆ ಬಳಿಕದ ಸಮಯದಲ್ಲಿ ವ್ಯವಹಾರದಲ್ಲಿ ನಾನು ಸಂಪೂರ್ಣ ನಷ್ಟ ಅನುಭವಿಸಿದ ಕಾರಣ ಬ್ಯಾಂಕ್ ಸಾಲವನ್ನು ತುಂಬಲಾಗಿಲ್ಲ. ಬ್ಯಾಂಕ್ ಸಾಲ ಪಡೆಯಲು ಮಕ್ಕಳು ಹಕ್ಕು ಹೊಂದಿದ್ದ ಮನೆ ಸೇರಿದಂತೆ ತನ್ನ ಮಾಲಕತ್ವದ ಕಟ್ಟಡ‌ ಮತ್ತು ಖಾಲಿ ಜಾಗವನ್ನೂ ಅಡಮಾನವಾಗಿ ಇಡಲಾಗಿತ್ತು‌. ವ್ಯವಹಾರದಲ್ಲಿ ಸಂಪೂರ್ಣ ನಷ್ಟ ಅನುಭವಿಸಿದ ಕಾರಣಕ್ಕಾಗಿ ಸುಮಾರು 11 ವರ್ಷಗಳ ಕಾಲ ಸಾಲವನ್ನು ಮರುಪಾವತಿಸಲು ಸಾಧ್ಯವಾಗಿರಲಿಲ್ಲ. ಈ ನಡುವೆ ಬ್ಯಾಂಕ್ ತನ್ನ ಅಕೌಂಟನ್ನು ಎನ್.ಪಿ.ಎ ಮಾಡಿದ ಕಾರಣ ಬ್ಯಾಂಕ್ ಜೊತೆಗೆ ಯಾವುದೇ ವ್ಯವಹಾರ‌ ಮಾಡದಂತೆಯೂ ಮಾಡಲಾಗಿತ್ತು. ಸಾಲಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಬ್ಯಾಂಕ್ ಸಿಬ್ಬಂದಿಗಳನ್ನು ಸಂಪರ್ಕಿಸಿ  ಸೆಟಲ್ಮೆಂಟ್ ಮಾಡಲು ಒತ್ತಾಯ ಮಾಡಲಾಗಿತ್ತು. ಆದರೆ ಯಾವುದೇ‌ ಪ್ರತಿಕ್ರಿಯೆ ನೀಡದೆ ಕೇವಲ ಕಾನೂನು ಮೂಲಕವೇ ಸಾಲವನ್ನು ವಸೂಲಿ ಮಾಡುವುದಾಗಿ ಮೊಂಡು ವಾದವನ್ನು‌ ಬ್ಯಾಂಕ್ ಮಾಡಿತ್ತು. ಈ‌ ನಡುವೆ ಫೆಬ್ರವರಿ 18 ರಂದು ಬ್ಯಾಂಕ್ ಅಧಿಕಾರಿಗಳು ತನ್ನನ್ನು ಮೊಬೈಲ್ ಮೂಲಕ‌ ಸಂಪರ್ಕಿಸಿ ಒನ್ ಟೈಂ ಸೆಟಲ್ಮೆಂಟ್ ಗೆ ಮಂಗಳೂರು ಕಛೇರಿಗೆ ಬರುವಂತೆ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಕಾರ್ಯಪ್ರವೃತ್ತವಾಗಿದ್ದ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿಗಳು ಏಕಾಏಕಿ ಮನೆಗೆ ನುಗ್ಗಿ , ಮನೆಯಲ್ಲಿದ್ದ ತನ್ನ ಪತ್ನಿ, ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಮಗಳು ಹಾಗೂ ಮಗನನ್ನು ಹೊರ ತಳ್ಳುವ ಯತ್ನವನ್ನೂ ನಡೆಸಿದ್ದಾರೆ. ಈ ವಿದ್ಯಾಮಾನಗಳನ್ನೆಲ್ಲಾ ಮನೆ ಒಳಗಿಂದ ಗಮನಿಸುತ್ತಿದ್ದ ಪತ್ನಿ ಪ್ರಾರ್ಥನಾ ಮನನೊಂದು ಆತ್ಮಹತ್ಯೆ ನಡೆಸಿದ್ದಾರೆ ಎಂದು ರಘವೀರ್ ಪ್ರಭು ತಿಳಿಸಿದರು.

ಅಡಮಾನವಾಗಿ ಬೆಲೆಬಾಳುವ ಜಮೀನು ಹಾಗೂ ಕಟ್ಟಡವನ್ನು ಬ್ಯಾಂಕ್ ನಲ್ಲಿ ಇರಿಸಿದ್ದರೂ, ಅವುಗಳನ್ನು ಮುಟ್ಟದೆ ತನ್ನ ಮಾನ ಹರಾಜು ಹಾಕುವ ಮುಖ್ಯ ಉದ್ಧೇಶದಿಂದ ಮನೆಯನ್ನು ಜಪ್ತಿ ಮಾಡಲು ಬ್ಯಾಂಕ್ ಮುಂದಾಗಿದೆ ಎಂದು ಆರೋಪಿಸಿದ ಅವರು ಬ್ಯಾಂಕ್ ನ ಈ ನಿರ್ಧಾರದಿಂದ ಪತ್ನಿಯನ್ನು ಕಳೆದುಕೊಳ್ಳುವಂತಾಯಿತು. ಮಕ್ಕಳ ಅನಾಥರಾದರು ಎಂದ ಅವರು ಈ ಸಂಬಂಧ ಬ್ಯಾಂಕ್ ನವರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ ಎಂದರು.  ಬ್ಯಾಂಕ್ ನಲ್ಲಿರುವ ಸಾಲವನ್ನು ಒನ್ ಟೈಂ ಸೆಟಲ್ಮೆಂಟ್ ಮೂಲಕ ಚುಕ್ತಾ‌ ಮಾಡಲು ತಾನು ಈಗಲೂ ಸಿದ್ಧವಿದ್ದು, ಬ್ಯಾಂಕ್ ಮಾತ್ರ ಇದಕ್ಕೆ ಒಪ್ಪುತ್ತಿಲ್ಲ ಎಂದು ಆರೋಪಿಸಿದ ಅವರು ವ್ಯವಹಾರದಲ್ಲಿ ನಷ್ಟವಾದ ಕಾರಣಕ್ಕಾಗಿ ಕೆಲವು ಸಂದರ್ಭಗಳಲ್ಲಿ ಸಾಲ ಮರುಪಾವತಿ ಮಾಡದೆ ಬಾಕಿ ಉಳಿಯುವ ಸಾಕಷ್ಟು ಪ್ರಕರಣಗಳು ಇವೆ. ಆ ಸಂದರ್ಭದಲ್ಲಿ ಸಾಲ ಮರುಪಾವತಿ ಮಾಡಲು ಅವಕಾಶವನ್ನು ಬ್ಯಾಂಕ್‌ಗಳು ನೀಡುತ್ತವೆ. ಆದರೆ ತನ್ನ ಪ್ರಕರಣದಲ್ಲಿ ಈ ರೀತಿಯ ಯಾವುದೇ ಅವಕಾಶವನ್ನು ನೀಡದೆ ಏಕಾಏಕಿ ಮನೆಯನ್ನೇ ಜಪ್ತಿ ಮಾಡಲು ಮುಂದಾಗಿದೆ. ಈ ಮೂಲಕ ತನ್ನ ಕುಟುಂಬದ ಮಾನ ಹರಾಜು ಹಾಕಲು ಸಿದ್ಧತೆ ನಡೆಸಲಾಗಿತ್ತು ಎಂದು ಸಾಲಗಾರ‌ ರಘುವೀರ್ ಪ್ರಭು ಆರೋಪಿಸಿದ್ದಾರೆ.

ಮನೆಯ ಆಸ್ತಿಯ ಮೇಲೆ ಮಕ್ಕಳೂ ಭಾಧ್ಯಸ್ತರು ಎನ್ನುವ ವಿಚಾರ ಬ್ಯಾಂಕ್ ಗಮನದಲ್ಲಿದ್ದರೂ, ಮನೆಯನ್ನು ಜಪ್ತಿ ಮಾಡಲು ಬಂದು ಕುಟುಂಬವನ್ನೇ ಒಡೆದು ಹಾಕಿದರು ಎಂದು ಅವರು ಆರೋಪಿಸಿದರು‌. ಬ್ಯಾಂಕ್ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣವನ್ನು ಮುಂದು ವರಿಸುವುದಾಗಿ ಸ್ಪಷ್ಟಪಡಿಸಿದ ಅವರು ಇನ್ನು ಮುಂದೆ ಇಂಥಹ ಘಟನೆಗಳಿಗೆ ಬ್ಯಾಂಕ್ ಗಳು ಅವಕಾಶ ನೀಡಬಾರದು ಎಂದು ರಘುವೀರ್ ಪ್ರಭು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರಘುವೀರ್ ಪ್ರಭು ಅವರ ಪುತ್ರಿ ಶ್ರದ್ದಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News