ಬೆಳ್ತಂಗಡಿ: ರೋಟರಿ ಸೇವಾ ಟ್ರಸ್ಟ್ ಸಭಾಭವನ ಉದ್ಘಾಟನೆ
ಬೆಳ್ತಂಗಡಿ: ಆಧುನಿಕ ಪ್ರಾಪಂಚಿಕ ಬದಲಾವಣೆ ತಿಳಿದುಕೊಂಡು ಈಗಿನ ಸಮಾಜಕ್ಕೆ ಬೇಕಾದ ಆವಶ್ಯಕತೆಗಳನ್ನು ಪೂರೈಸಲು ಶ್ರಮಿಸಬೇಕಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಬೆಳ್ತಂಗಡಿ ರೋಟರಿ ಸೇವಾ ಟ್ರಸ್ಟ್, ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ರೋಟರಿ ಸುವರ್ಣ ಮಹೋತ್ಸವ ಸಮಿತಿ ಇವರ ಜಂಟಿ ಆಶ್ರಯದಲ್ಲಿ ಕಾಶಿಬೆಟ್ಟು ಅರಳಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ರೋಟರಿ ಸೇವಾ ಟ್ರಸ್ಟ್ ಸಭಾಭವನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ರೋಟರಿ, ಲಯನ್ಸ್, ಜೇಸಿಐ ಯಂತಹಾ ಸಂಸ್ಥೆಯಲ್ಲಿ ಕುರ್ಚಿಗಾಗಿ ಹೋರಾಟವಿಲ್ಲ.ಸೇವೆಯಲ್ಲಿ ಸ್ಪರ್ಧೆಯಂತೆ ಅವರವರಿಗೆ ಅವಕಾಶ ಬಂದಾಗ ಉತ್ತಮ ಸೇವಾ ಯೋಜನೆ ರೂಪಿಸುತ್ತಾರೆ.
ಸೇವೆಗೆ ಅವಕಾಶ ಬೇಕಾದವರು ಸಂಸ್ಥೆಗೆ ಸೇರಬಹುದು. ಬೆಳ್ತಂಗಡಿ ಕ್ಲಬ್ನಲ್ಲಿ ಯಶಸ್ವಿ ಮನುಷ್ಯರು ಇದ್ದಾರೆ ಎಂಬುದು ಹೆಮ್ಮೆ ಎಂದರು
ಶಾಸಕ ಹರೀಶ್ ಪೂಂಜ ಮಾತನಾಡಿ, ರೋಟರಿ ಸಂಸ್ಥೆಯ ಸೇವೆ ಮಾದರಿಯಾಗಿದೆ. ಈ ಸಭಾಂಗಣಕ್ಕೆ ತನ್ನ ಶಾಸಕರ ಅನುದಾನದಲ್ಲಿ 10 ಲಕ್ಷ ರೂ.ನೀಡಲಿದ್ದೇನೆ.
ಜೊತೆಗೆ ಈ ಸಭಾಂಗಣದ ಮುಂಭಾಗದಲ್ಲಿ ಹಾದುಹೋಗುವಂತೆ 18 ಅಡಿ ಅಗಲದ ರಸ್ತೆ ನಿರ್ಮಾಣ ವಾಗುತ್ತಿದ್ದು, ಅದು ಸಭಾಂಗಣದ ಅಂದ ಹೆಚ್ಚಿಸಲಿದೆ ಎಂದು ಭಾವಿಸುತ್ತೇನೆ ಎಂದರು.
ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಮಾತನಾಡಿ ಕೋರೊನಾ ಕಾಲಘಟ್ಟದಲ್ಲಿ ರೋಟರಿ ಸಂಸ್ಥೆಯ ಸೇವೆ ಅಭಿನಂದನೆಗೆ ಅರ್ಹ, ಸಮಾಜಕ್ಕೆ ಅರ್ಪಣೆಯಾಗುತ್ತಿರುವ ಈಸಭಾಂಗಣಕ್ಕೆ ನನ್ನ ಅನುದಾನದಲ್ಲಿ 5 ಲಕ್ಷ ರೂ. ಅನುದಾನ ನೀಡುತ್ತೇನೆ ಎಂದರು. ರೋಟರಿ ಜಿಲ್ಲಾ ರಾಜ್ಯಪಾಲ ರಂಗನಾಥ ಭಟ್ ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ರಜನಿರಂಗನಾಥ್, ಸಹಾಯಕ ರಾಜ್ಯಪಾಲ ಡಾ. ಯತಿಕುಮಾರಸ್ವಾಮಿ ಗೌಡ, ಮೋನಪ್ಪ ಪೂಜಾರಿ, ರೋಟರಿ ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಬಿ. ಯಶೋವರ್ಮ,ರೋಟರಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಡಾ. ಶಶಿಧರ್ ಡೋಂಗ್ರೆ, ಸುವರ್ಣ ಮಹೋತ್ಸವ ಸಮಿತಿ ಕೋಶಾಧಿಕಾರಿ ಸುನಿಲ್ ಶೆಣೈ, ಕಾರ್ಯದರ್ಶಿ ಡಾ. ಗೋಪಾಲಕೃಷ್ಣ ಭಟ್, ರೋಟರಿ ಕ್ಲಬ್ ಕೋಶಾಧಿಕಾರಿ ಮಿಥುನ್ ಮಾಡ್ತಾ ಉಪಸ್ಥಿತರಿದ್ದರು.
ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಬಿ.ಕೆ ಧನಂಜಯ ರಾವ್ ವರ್ಷದ ಚಟುವಟಿಕೆಯ ವಿವರ ನೀಡಿದರು.ಕಾರ್ಯದರ್ಶಿ ಶ್ರೀಧರ ಕೆ.ವಿ ವರದಿ ನೀಡಿದರು.
ರೋಟರಿ ಸೇವಾ ಟ್ರಸ್ಟ್ ಅಧ್ಯಕ್ಷ, ಎಂ.ವಿ ಭಟ್, ಕಟ್ಟಡದ ನಿರ್ಮಾಣ ಮತ್ತು ಸಹಕಾರ ನೀಡಿದವರನ್ನು ಸ್ಮರಿಸಿದರು. ರೋಟರಿ ಸೇವಾ ಟ್ರಸ್ಟ್ ಕೋಶಾಧಿಕಾರಿ ಶ್ರೀ ಕಾಂತ ಕಾಮತ್ ವಂದಿಸಿದರು.
ಡಾ ಎ ಜಯಕುಮಾರ್ ಶೆಟ್ಟಿ ಮತ್ತು ಮನೋರಮಾ ಭಟ್ ಕಾರ್ಯಕ್ರಮ ನಿರೂಪಿಸಿದರು