ರಾಜ್ಯದಲ್ಲಿ ವಿಕಲಚೇತನರ ಪುನರ್‌ ಸರ್ವೇ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2021-03-01 08:22 GMT

ಮಂಗಳೂರು, ಮಾ.1: ವಿಕಲಚೇತನರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಿಖರವಾಗಿ ಅಂಕಿ ಅಂಶಗಳನ್ನು ಕಲೆ ಹಾಕಲು ರಾಜ್ಯದಲ್ಲಿ ವಿಕಲಚೇತನರ ಪುನರ್‌ ಸರ್ವೇಗೆ ಸರಕಾರ ಚಿಂತನೆ ಮಾಡಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಇಂದು ಮಹಾನಗರ ಪಾಲಿಕೆಯ ನಗರ ಬಡತನ ನಿರ್ಮೂಲನಾ ಕೋಶದಡಿ ವಿವಿಧ ಸವಲತ್ತುಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ವಿಕಲಚೇತನರಿಗೆ ಒದಗಿಸಲಾಗುವ ವೈದ್ಯಕೀಯ ಸೌಲಭ್ಯದಲ್ಲಿ ನಿಯಮಿತ ಬದಲಾವಣೆ ಮಾಡಿ ಅರ್ಹರಿಗೆ ಸೌಲಭ್ಯ ಒದಗಿಸುವಂತಾಗಲು ವಿಭಿನ್ನ ರೀತಿಯ ವಿಕಲಚೇತನರ ನಿಖರವಾದ ಸಂಖ್ಯೆಯನ್ನು ಪಡೆಯುವ ನಿಟ್ಟಿನಲ್ಲಿ ಈ ಸರ್ವೇ ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ದೊರಕಿ ಇಷ್ಟು ವರ್ಷಗಳಾದರೂ ಇನ್ನೂ ನಗರ ಪ್ರದೇಶದಲ್ಲೂ ಮನೆ, ಶೌಚಾಲಯ, ವಿದ್ಯುತ್ ಇಲ್ಲದಿರುವ ಮನೆಗಳಿರುವುದನ್ನು ಗುರುತಿಸಿ ಸಮಾಜದ ಕಟ್ಟಕಡೆಯ ಜನರಿಗೆ ಸೌಲಭ್ಯ ಒದಗಿಸುವುದು ಸರಕಾರದ ಜವಾಬ್ದಾರಿ ಅದಕ್ಕೆ ಒತ್ತು ನೀಡುವ ಕೆಲಸ ಮಾಡಲಾಗುತ್ತಿದೆ. ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗೆ ವೇಗ ನೀಡುವ ಕಾರ್ಯವಾಗುತ್ತಿದೆ ಎಂದು ಹೇಳಿದ ಅವರು, ಮೇಯರ್ ಹಾಗೂ ಉಪ ಮೇಯರ್, ಸ್ಥಾಯಿ ಸಮಿತಿಯ ಅವಧಿಯು ಕೊನೆಯ ದಿನವಾದ ಇಂದು ಬಡತನ ನಿರ್ಮೂಲನಾ ಕೋಶದಡಿ ಸೌಲಭ್ಯಗಳನ್ನು ಒದಗಿಸುತ್ತಿರುವುದು ಅಭಿನಂದನೀಯ ಎಂದರು.

ಕಾರ್ಯಕ್ರಮದಲ್ಲಿ ಶೇ. 24.10ರ ಮೀಸಲು ನಿಧಿಯಡಿ 12 ಫಲಾನುಭವಿಗಳಿಗೆ ಒಟ್ಟು 4,11,216 ರೂ.ಗಳ ವಿತರಣೆ, ಶೇ. 7.25 ಮೀಸಲು ನಿದಿಯಡಿ 59 ಫಲಾನುಭವಿಗಳಿಗೆ 2,64,600 ರೂ.ಗಳ ಸವಲತ್ತುಗಳ ವಿತರಣೆ, ಶೇ. 5 ವಿಕಲಚೇತನ ಕಲ್ಯಾಣ ಕಾರ್ಯಕ್ರಮದಡಿ 688 ಮಂದಿಗೆ ಒಟ್ಟು 45,05,521 ರೂ. ಮೌಲ್ಯದ ವಿವಿಧ ಸಾಧನ, ಸಲಕರಣೆಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು.

ಮನಪಾ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವ 32 ಪೌರ ಕಾರ್ಮಿಕರಿಗೆ ಹಕ್ಕುಪತ್ರವನ್ನೊಳಗೊಂಡು ಮನೆಯ ಕೀಯನ್ನು ಈ ಸಂದರ್ಭ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಮೇಯರ್ ದಿವಾಕರ ಪಾಂಡೇಶ್ವರ, ಉಪ ಮೇಯರ್ ವೇದಾವತಿ ಯಾನೆ ಜಾನಕಿ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಮನಪಾ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಜಗದೀಶ್ ಶೆಟ್ಟಿ, ಪೂರ್ಣಿಮಾ, ಶರತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News