ಉಡುಪಿ: ಸರಕಾರಿ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ 10,000 ಶಿಶುವಿನ ಜನನದ ಸಂಭ್ರಮ

Update: 2021-03-01 14:21 GMT

ಉಡುಪಿ, ಮಾ.1: 2018ರ ಜ.18ರಂದು ಉದ್ಘಾಟನೆಗೊಂಡ ನಗರದ ಕರ್ನಾಟಕ ಸರಕಾರ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 10,000 ಶಿಶುವಿನ ಜನನದ ಸಂಭ್ರಮವನ್ನು ಇಂದು ಶಾಸಕ ಕೆ.ರಘುಪತಿ ಭಟ್, ಜಿಲ್ಲಾಧಿಕಾರಿ ಜಿ.ಜಗದೀಶ್, ಬಿಆರ್‌ಎಸ್ ವೆಂಚೂರ್ಸ್‌ನ ಅಧ್ಯಕ್ಷ ಬಿ.ಆರ್.ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಇಂದು ಆಚರಿಸಲಾಯಿತು.

ಆಸ್ಪತ್ರೆಯಲ್ಲಿ 2018ರ ಜು.2ರಂದು ಜನಿಸಿದ ಮೊದಲ ಮಗು ಕಶ್ವಿ ಹಾಗೂ 2021ರ ಫೆ.24ರಂದು ಜನಿಸಿದ 10000ನೇ ಶಿಶು ಮಹಮ್ಮದ್ ಶಾಝೀಲ್ ಅವರಿಗೆ ವಿಶೇಷ ಉಡುಗೊರೆಗಳನ್ನಿತ್ತು ಗಣ್ಯರು ಹಾಗೂ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಶ್ವಿಯ ತಾಯಿ ಕಾರ್ಕಳ ತಾಲೂಕು ನಂದಳಿಕೆಯ ರೂಪಾ ಪ್ರವೀಣ್ ಹಾಗೂ ಮಹಮ್ಮದ್ ಶಾಝೀಲ್ ತಾಯಿ ಸುರತ್ಕಲ್ ಸಮೀಪದ ಕೃಷ್ಣಾಪುರದ ಉಮೈ ಬಾನು ಅವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಆರ್‌ಎಸ್ ವೆಂಚೂರ್ಸ್‌ನ ಭಾರತೀಯ ಯೋಜನೆಗಳ ರಾಷ್ಟ್ರೀಯ ಮುಖ್ಯಸ್ಥ ಕುಶಲ ಶೆಟ್ಟಿ, ಈ ಆಸ್ಪತ್ರೆ ಪ್ರಾರಂಭಗೊಂಡು ಮೂರು ವರ್ಷವಾಗಿದ್ದು, ಹೆರಿಗೆ ವಿಭಾಗ ಪ್ರಾರಂಭವಾಗಿ ಎರಡೂವರೆ ವರ್ಷಗಳಾಗಿವೆ. ಈ ಅವಧಿಯಲ್ಲಿ 10,000 ಶಿಶುಗಳ ಸುರಕ್ಷಿತ ಹೆರಿಗೆ ನಡೆದಿರುವುದು ನಮಗೆ ಧನ್ಯತೆಯ ಭಾವವನ್ನು ತಂದಿದೆ ಎಂದರು.

ಸಂಪೂರ್ಣ ಹವಾನಿಯಂತ್ರಿತವಾಗಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸರಕಾರಿ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಈ ಆಸ್ಪತ್ರೆಯಲ್ಲಿ ಬಿಲ್ಲಿಂಗ್ ವಿಭಾಗವೇ ಇಲ್ಲ. ಇಲ್ಲಿ ಎಲ್ಲವೂ ಉಚಿತವಾಗಿ ದೊರೆಯುತ್ತಿದೆ. ಹೀಗಾಗಿ ಕರಾವಳಿ ಜಿಲ್ಲೆಗಳ ಮಾತ್ರವಲ್ಲದೇ ರಾಜ್ಯದ 30 ಜಿಲ್ಲೆಗಳಿಂದಲೂ ಚಿಕಿತ್ಸೆಗಾಗಿ ಜನರು ಇಲ್ಲಿಗೆ ಬರುತಿದ್ದಾರೆ. ಅಲ್ಲದೇ ಹೊರರಾಜ್ಯಗಳಿಂದ ಮತ್ತು ನೇಪಾಳದಂಥ ದೇಶದಿಂದಲೂ ಇಲ್ಲಿಗೆ ರೋಗಿಗಳು ಬರುತಿದ್ದಾರೆ ಎಂದರು.

ಒಂದೇ ಸಂಸ್ಥೆಯಡಿ ತಾಯಿ-ಮಕ್ಕಳ ಈ ಆಸ್ಪತ್ರೆಯಲ್ಲದೇ, ಮುಂದೆ ನಿರ್ಮಾಣಗೊಳ್ಳುವ 400 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವೂ ಕಾರ್ಯನಿರ್ವಹಿಸುತ್ತದೆ. ಇಲ್ಲಿ ಬಿಲ್ಲಿಂಗ್ ವಿಭಾಗವೇ ಇಲ್ಲದ ಕಾರಣ ಲಾಭ ನಮ್ಮ ಗುರಿಯಲ್ಲ, ಕೇವಲ ಸೇವೆ ಮಾತ್ರ ಎಂದವರು ಹೇಳಿದರು.

ಹಿಂದೆ ಹಾಜಿ ಅಬ್ದುಲ್ಲಾ ತಾಯಿ-ಮಕ್ಕಳ ಆಸ್ಪತ್ರೆಯಾಗಿದ್ದಾಗ ಕೇವಲ 70 ಹಾಸಿಗೆಗಳಿದ್ದು,ಈಗ ಅದು 200 ಬೆಡ್‌ಗಳ ಆಸ್ಪತ್ರೆಯಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಕೆಲವು ತಾಂತ್ರಿಕ ಸಮಸ್ಯೆಯಿಂದ ನಿಂತಿದ್ದು, ಎಲ್ಲಾ ಬಗೆಹರಿದ ತಕ್ಷಣ ಅದರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ಇದೇ ರೀತಿಯ ಆಸ್ಪತ್ರೆಯನ್ನು ನಿರ್ಮಿಸುವಂತೆ ನಾಲ್ಕು ರಾಜ್ಯಗಳಿಂದ -ಉತ್ತರ ಪ್ರದೇಶ, ಉತ್ತರಖಂಡ್, ಒರಿಸ್ಸಾ ಹಾಗೂ ಬಿಹಾರಗಳಿಂದ ಸಂಸ್ಥೆಗೆ ಆಹ್ವಾನ ಬಂದಿದೆ. ಇಲ್ಲಿ ಕೆಲಸ ಮಾಡುವವರಿಗೆ ಹಣ ಮುಖ್ಯವಲ್ಲ, ಜನರ ಖುಷಿ, ಆರೋಗ್ಯ ಮುಖ್ಯ ಎಂದು ಕುಶಲ ಶೆಟ್ಟಿ ನುಡಿದರು.

ಕೂಸಮ್ಮ  ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ.ಶಿಖಾ ಅವರು ಮಾತನಾಡಿ, ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳು ಉಚಿತವಾಗಿ ಲಭ್ಯವಿದ್ದು, ಎಲ್ಲರೂ ಅದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಕೆ. ರಘುಪತಿ ಭಟ್, ಜಿಲ್ಲಾಧಿಕಾರಿ ಜಿ.ಜಗದೀಶ್, ಬಿ.ಆರ್ ಶೆಟ್ಟಿ ಸಂಸ್ಥೆಯ ಸಂಸ್ಥಾಪಕ ಬಿ. ಆರ್. ಶೆಟ್ಟಿ, ಜಿಲ್ಲಾ ಶಸ್ತ್ರಚಿಕಿತ್ಸಕ ಮಧುಸೂದನ್ ನಾಯಕ್ ಉಪಸ್ಥಿತರಿದ್ದರು. ಆಸ್ಪತ್ರೆಯ ವೈದ್ಯಕೀಯ ಉಪಕರಣ ವಿಭಾಗದ ಮುಖ್ಯಸ್ಥ ಓಂಕಾರ್ ನಾಯಕ್ ಸ್ವಾಗತಿಸಿದರೆ, ಕುಶಲ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೀನಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News