ಶಂಕರ ಶಾಂತಿ ಹಲ್ಲೆ ಪ್ರಕರಣ: ಪ್ರಮುಖ ಆರೋಪಿಯ ಬಂಧನ

Update: 2021-03-02 15:27 GMT

ಬ್ರಹ್ಮಾವರ, ಮಾ.2: ಆರ್‌ಟಿಐ ಕಾರ್ಯಕರ್ತ ಬಾರಕೂರು ಕಚ್ಚೂರು ನಿವಾಸಿ ಶಂಕರ ಶಾಂತಿ(38) ಎಂಬವರ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯನ್ನು ಬ್ರಹ್ಮಾವರ ಪೊಲೀಸರು ಇಂದು ಬೆಳಗ್ಗೆ ಬಂಧಿಸಿದ್ದಾರೆ.

ಬಾರಕೂರು ರಂಗನಕೆರೆಯ ಪ್ರವೀಣ್ ಆಚಾರ್ಯ(44) ಬಂಧಿತ ಆರೋಪಿ. ಫೆ.20ರಂದು ಪ್ರವೀಣ್ ಆಚಾರ್ಯ, ಪ್ರಸಾದ್ ಅಚಾರ್ಯ, ಮಂಜಪ್ಪ ಪೂಜಾರಿ, ಶಾಂತರಾಮ ಶೆಟ್ಟಿ, ದಿವಾಕರ ಹಾಗೂ ಇತರರು ಶಂಕರ ಶಾಂತಿ ಯನ್ನು ಬಾರಕೂರು ಕಾಳಿಕಾಂಬಾ ದೇವಸ್ದಾನದ ಸಭಾಭವನದ ಅಡುಗೆ ಕೋಣೆಗೆ ಕರೆದುಕೊಂಡು ಹೋಗಿ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರೆಂದು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾಗಿ 10 ದಿನಗಳಾದರೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ನೇತೃತ್ವದಲ್ಲಿ ಸೋಮವಾರ ಬನ್ನಂಜೆಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳ ಬಂಧನಕ್ಕಾಗಿ ಬ್ರಹ್ಮಾವರ ಹಾಗೂ ಹಿರಿಯಡ್ಕ ಎಸ್ಸೈಗಳ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿತ್ತು.

ಬ್ರಹ್ಮಾವರ ಎಸ್ಸೈ ಗುರುನಾಥ್ ಹಾದಿಮನಿ ನೇತೃತ್ವದ ತಂಡ ಪ್ರಮುಖ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದೆ. ನ್ಯಾಯಾಲಯ ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದ ಉಳಿದ ಆರೋಪಿಗಳ ಶೋಧ ಕಾರ್ಯ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News