ಸರಕಾರಿ ಬಸ್ ಚಾಲಕನಿಗೆ ಹಲ್ಲೆ: ಆರೋಪಿ ಸೆರೆ

Update: 2021-03-05 11:57 GMT
ಸೈಫ್

ಮಂಗಳೂರು, ಮಾ.5: ಸರಕಾರಿ ಬಸ್ ಚಾಲಕನಿಗೆ ಪಡೀಲ್ ರೈಲ್ವೆ ಓವರ್ ಬ್ರಿಡ್ಜ್ ಬಳಿ ಶುಕ್ರವಾರ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.

ಅಡ್ಯಾರ್ ಕಣ್ಣೂರಿನ ಕುಂಡಾಲದ ಸೈಫ್ (19) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯು ಕೃತ್ಯಕ್ಕೆ ಬಳದಸಿದ್ದ ಸ್ಕೂಟರನ್ನು ವಶಪಡಿಸಲಾಗಿದೆ.

ಪುತ್ತೂರು ಡಿಪೋ ಕೆಎಸ್ಸಾರ್ಟಿಸಿ ಬಸ್ ಚಾಲಕನಾಗಿದ್ದ ರಾಜು ಗಜಕೋಶ ಅವರನ್ನು ತಡೆದ ಆರೋಪಿಯು ಹಲ್ಲೆಗೈದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

 ಮಂಗಳೂರು ಕಡೆಗೆ ಬಸ್ ಚಲಾಯಿಸಿಕೊಂಡು ರಾಜು ಗಜಕೋಶ ತೆರಳುತ್ತಿದ್ದಾಗ ಸ್ಕೂಟರ್ ಸವಾರ ಸೈಫ್ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಪಡೀಲ್ ರೈಲ್ವೆ ಒವರ್ ಬ್ರಿಡ್ಜ್ ಬಳಿ ತಲುಪಿದೊಡನೆ ಬಸ್ಸಿಗೆ ತನ್ನ ಸ್ಕೂಟರ್ ಅಡ್ಡವಿಟ್ಟು ಬಸ್ ಚಾಲಕನಿಗೆ ಅವಾಚ್ಯ ಶಬ್ದದಿಂದ ನಿಂದಿಸಿ ಸ್ಕೂಟರ್‌ನಲ್ಲಿದ್ದ ಚಾಕು ತೋರಿಸಿ ಕೊಲೆ ಬೆದರಿ ಹಾಕಿ ತಿವಿಯಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಕೊಲ್ಲಲು ಯತ್ನಿಸಿದ್ದಾನೆ ಎಂದು ರಾಜು ಗಜಕೋಶ ನೀಡಿದ ದೂರಿನಂತೆ ಕಂಕನಾಡಿ ನಗರ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಕೊಲೆಯತ್ನ ಸಹಿತ ಐದು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News