ತಂತ್ರಜ್ಞಾನ ಬಳಕೆ ಜೊತೆಗೆ ಸುರಕ್ಷತೆಗೂ ಒತ್ತು ನೀಡಿ: ಡಿಸಿ ಜಿ.ಜಗದೀಶ್

Update: 2021-03-05 15:02 GMT

ಉಡುಪಿ, ಮಾ.5: ದೈನಂದಿನ ಕಾರ್ಯಗಳಲ್ಲಿ ತಂತ್ರಜ್ಞಾನದ ಬಳಕೆಯ ಜೊತೆಗೆ ಅವುಗಳ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡುವುದು ಅತ್ಯಗತ್ಯ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್.ಆಚಾರ್ಯ ಸಭಾಂಗಣ ದಲ್ಲಿ ಶುಕ್ರವಾರ ಆಡಳಿತ ತರಬೇತಿ ಸಂಸ್ಥೆ, ಇ-ಆಡಳಿತ ಕೇಂದ್ರ ಬೆಂಗಳೂರು, ಇ-ಆಡಳಿತ ದತ್ತಾಂಶ ಕೇಂದ್ರ ಮೈಸೂರು ಇವರ ಸಹಯೋಗದೊಂದಿಗೆ ಸಾಮರ್ಥ್ಯ ಸಂಘಟನೆ ಯೋಜನೆ ಅಡಿಯಲ್ಲಿ ನಡೆದ ಸೈಬರ್ ಸೆಕ್ಯೂರಿಟಿ ಮತ್ತು ಇ- ಆಡಳಿತ ವಿಷಯಗಳ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮಾಹಿತಿ ತಂತ್ರಜ್ಞಾನದ ಬಳಕೆ ದೈನಂದಿನ ಜೀವನದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಕೆಲವರು ಇದರ ದುರುಪಯೋಗ ಪಡಿಸಿಕೊಂಡು ದೇಶದ ಯಾವುದೋ ಮೂಲೆಯಲ್ಲಿ ಕುಳಿತು ಅಮಾಯಕರ ಬ್ಯಾಂಕ್ ಖಾತೆಗಳಿಗೆ ಕನ್ನ, ಇ-ಮೇಲ್ ಐಡಿಗಳ ಹ್ಯಾಕ್, ಜಾಲತಾಣಗಳ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇವುಗಳಿಗೆ ಕಡಿವಾಣ ಹಾಕಲು ಸೈಬರ್ ಸೆಕ್ಯೂರಿಟಿಗಳ ಮಾಹಿತಿ ಹೊಂದಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವುದು ಒಳ್ಳೆಯದು ಎಂದರು.

ಯಾವುದೇ ಓರ್ವ ಅಪರಿಚಿತ ವ್ಯಕ್ತಿಯ ಹೆಸರಿನಿಂದ ಮೇಲ್ ಅಥವಾ ಸಂದೇಶಗಳು ಬಂದರೆ ಅವುಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ತಪ್ಪಿದ್ದಲ್ಲಿ ಅವುಗಳ ತೆರೆಯುವಿಕೆಯಿಂದ ವೈರಸ್ ಹರಡಿ ದತ್ತಾಂಶಗಳು ಹಾಳಾಗುವ ಸಾಧ್ಯತೆ ಇರುತ್ತದೆ ಎಂದವರು ಎಚ್ಚರಿಸಿದರು. ಹೆಚ್ಚುತ್ತಿರುವ ಸೈಬರ್ ಅಪರಾಧಗಳ ತಡೆಗೆ ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಸೈಬರ್ ಅಪರಾಧಿ ತಡೆ ತಾಣಗಳನ್ನು ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಇವು ತಾಲೂಕು ಗಳಿಗೂ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದರು. ಕಚೇರಿಯಲ್ಲಿ ಬಳಸುವ ಗಣಕ ಯಂತ್ರಗಳಿಗೆ ವೈರಸ್ ನಿರೋಧಕ ತಂತ್ರಾಂಶಗಳನ್ನು ತಪ್ಪದೇ ಅಳವಡಿಸಬೇಕು. ಈ ಬಗ್ಗೆ ನಿರ್ಲಕ್ಷ ತಾಳಬಾರದು ಎಂದರು.

ಸುರತ್ಕಲ್ ಎನ್‌ಐಟಿಕೆ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಲ್ವಿನ್ ರೋಶನ್ ಪಾಯಸ್ ಮಾತನಾಡಿ, ಆನ್‌ಲೈನ್‌ನಲ್ಲಿ ವ್ಯವಹಾರ ಹೆಚ್ಚಿದಂತೆ ಸುರಕ್ಷತೆ ಮತ್ತು ಜಾಗೃತಿ ಇಲ್ಲದೇ ಹಣ ಕಳೆದುಕೊಳ್ಳುತ್ತಿರುವವರು ಹೆಚ್ಚುತ್ತಿ ದ್ದಾರೆ. ಯಾವುದೋ ಉದ್ದೇಶಕ್ಕೆ ಇಟ್ಟುಕೊಂಡ ಹಣ ಕಳೆದುಕೊಂಡು ಅಮಾಯಕರಾಗಿ ಜನರು ಕಂಗಾಲಾಗುತ್ತಿದ್ದಾರೆ. ಕಳೆದುಕೊಂಡ ಹಣ ಮರಳಿ ಸಿಗುವುದು ತೀರ ವಿರಳ ಎಂದರು.

ವೆಬ್‌ಸೈಟ್‌ಗಳನ್ನು ರೂಪಿಸುವ ಸುರಕ್ಷತಾ ಕ್ರಮಗಳಿಗೂ ಹೆಚ್ಚಿನ ಗಮನ ಹರಿಸಬೇಕು. ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಪೇಸ್‌ ಬುಕ್, ಇನ್‌ಸ್ಟಾಗ್ರಾಂಗಳಲ್ಲಿ ಪಾಸ್‌ವರ್ಡ್‌ಗಳನ್ನು ನಿರಂತರವಾಗಿ ಬದಲಾಯಿಸುತ್ತಿರುವುದು ಅತೀ ಅಗತ್ಯ ಎಂದರು.

ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರು, ಮಂಗಳೂರು ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ವೆಂಕಟೇಶ್ ಜಿ. ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News