ರಾಜ್ಯ ಬಜೆಟ್ ಗೆ ಪ್ರತಿಕ್ರಿಯೆಗಳು

Update: 2021-03-08 18:23 GMT

ಹೊಸ ಭರವಸೆ ಮೂಡಿಸಿದ ಶ್ರೇಷ್ಠ ಬಜೆಟ್ 

ಹೊಸ ಭರವಸೆ ಮೂಡಿಸಿದ ಶ್ರೇಷ್ಠ ಬಜೆಟ್ ಇದಾಗಿದ್ದು, ಮಹಿಳಾ ಸಬಲೀಕರಣಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ಕೃಷಿಕರಿಗೆ, ಮೀನುಗಾರರಿಗೆ, ಕಾರ್ಮಿಕರಿಗೆ, ಆರೋಗ್ಯ ಕ್ಷೇತ್ರ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ದೂರದೃಷ್ಟಿಯ ಯೋಜನೆಗಳು ಬಜೆಟ್‌ನಲ್ಲಿ ಅಡಕವಾಗಿವೆ. ಮುಂದಿನ ಮೂರು ವರ್ಷಗಳಲ್ಲಿ 10 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಣೆ ಮತ್ತು 5 ಲಕ್ಷ ಉದ್ಯೋಗಾವಕಾಶ ಸೃಷ್ಟ್ಟಿಗೆ ಮುಂದಾಗಿರುವುದು ಹೆಚ್ಚಿನ ನಿರೀಕ್ಷೆ ಮೂಡಿಸಿದೆ. - ನಳಿನ್ ಕುಮಾರ್ ಕಟೀಲು, ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ 

ಅಭಿವೃದ್ಧಿಗೆ ಪೂರಕ ಬಜೆಟ್ 

ರಾಜ್ಯದ ಕರಾವಳಿ ಭಾಗದ ಹಲವು ಅಭಿವೃದ್ಧಿ ಯೋಜನೆಗಳಿಗೆ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುದಾನ ಘೋಷಿಸಲಾ ಗಿದ್ದು, ಇದು ಅಭಿವೃದ್ಧಿಗೆ ಪೂರಕವಾಗಿರುವ ಬಜೆಟ್. - ವೇದವ್ಯಾಸ ಕಾಮತ್, ಶಾಸಕರು 

ಕಣ್ಣಿಗೆ ಮಣ್ಣೆರೆಚಿದ ಬಜೆಟ್ 

ಹಿಂದಿನಿಂದಲೂ ಇಲಾಖಾವಾರು ಅನುದಾನ ಮೀಸಲಿರಿಸಿ ತಯಾರಿಸುತ್ತಿದ್ದ ಬಜೆಟ್ ಈ ಸರದಿಯಲ್ಲಿ ವಲಯವಾರು ಅನುದಾನ ವಿಂಗಡಿಸಿ ಜನರ ಕಣ್ಣಿಗೆ ಮಣ್ಣೆರೆಚಲಾಗಿದೆ. ಯಾವುದೇ ಜಿಲ್ಲೆಗೆ ಒಂದು ನಿರ್ದಿಷ್ಟವಾದ ಯೋಜನೆಗೆ ಅನುದಾನ ಒದಗಿಸಿಲ್ಲ. ಆದ್ದರಿಂದ ಇದು ದೂರದೃಷ್ಟಿ ಇಲ್ಲದ ಸತ್ತ ಬಜೆಟ್, ಜನರನ್ನು ಮೋಸಗೊಳಿಸಿದ ಬಜೆಟ್ ಆಗಿದೆ. - ಹರೀಶ್ ಕುಮಾರ್,
ವಿಧಾನ ಪರಿಷತ್ ಸದಸ್ಯ, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

ಕರಾವಳಿಗೆ ವಿಶೇಷ ಒತ್ತು

ಮಂಗಳೂರಿನ ಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ರಾಜ್ಯ ಸರಕಾರದಿಂದ 150 ಕೋ.ರೂ. ಅನುದಾನ, ಕರಾವಳಿ-ಮಲೆನಾಡು ಭಾಗದಲ್ಲಿ 100 ಕೋ.ರೂ. ವೆಚ್ಚದಲ್ಲಿ ಕಾಲುಸಂಕ ನಿರ್ಮಿಸುವ ಗ್ರಾಮಬಂಧ ಸೇತುವೆ ಯೋಜನೆ, ಮಂಗಳೂರಿನಲ್ಲಿ ಅಡ್ವಾನ್ಸ್ ಬಯೋಟೆಕ್ ಇನ್ನೋವೇಶನ್ ಸೆಂಟರ್ ಫಾರ್ ಅಕ್ವಾ ಮರೈನ್ ಸ್ಥಾಪನೆ, ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆ ಯನ್ನು ಅನುಷ್ಟಾನಗೊಳಿಸಲು ರಾಜ್ಯ ಸರಕಾರದಿಂದ 62 ಕೋ.ರೂ. ಹೀಗೆ ಕರಾವಳಿಗೆ ವಿಶೇಷ ಒತ್ತು ನೀಡಿದ ಅಭಿವೃದ್ಧಿಗೆ ಸಂಕಲ್ಪ ಮಾಡಿರುವ ಬಜೆಟ್ ಇದಾಗಿದೆ. - ಡಾ.ವೈ.ಭರತ್ ಶೆಟ್ಟಿ, ಶಾಸಕರು

ಕರಾವಳಿ ಸಂಪೂರ್ಣ ಕಡೆಗಣನೆ

ಯಾವುದೇ ಹೊಸ ಅಭಿವೃದ್ಧಿ ಯೋಜನೆಗಳಲ್ಲದ ಶೂನ್ಯ ಬಜೆಟ್ ಇದಾಗಿದ್ದು ಕಾಟಾಚಾರಕ್ಕೆ ಮಂಡಿಸಿದಂತಿದೆ. ದಿನಬಳಕೆಯ ಸಾಮಗ್ರಿಗಳ ಬೆಲೆ ತಾರಕಕ್ಕೇರುತ್ತಿದ್ದರೂ ಅವುಗಳನ್ನು ತಡೆಗಟ್ಟಲು ಬೇಕಾದ ಯಾವುದೇ ಹೊಸ ಯೋಜನೆಗಳಿಲ್ಲ. ಕರಾವಳಿಯ ಅಭಿವೃದ್ದಿಗೆ ಸಂಬಂಧಿಸಿ ಪಶ್ಚಿಮ ವಾಹಿನಿ ಕಿಂಡಿ ಅಣೆಕಟ್ಟು ಒಂದನ್ನು ಬಿಟ್ಟರೆ ಕರಾವಳಿಯನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಮೀನುಗಾರರಿಗೆ ಯಾವುದೇ ಯೋಜನೆಯನ್ನು ಘೋಷಿಸದೆ ಅನ್ಯಾಯ ಮಾಡಲಾಗಿದೆ. -ಯು.ಟಿ.ಖಾದರ್, ಶಾಸಕರು

ಬೋಗಸ್ ಬಜೆಟ್ 

ಕೊರೋನ ಹಿನ್ನೆಲೆಯಲ್ಲಿ ಸರಕಾರ ಕಳೆದ ಬಾರಿ ಮಂಡಿಸಿದ ಬಜೆಟ್‌ನ ಯಾವೊಂದು ಕಾರ್ಯಕ್ರಮ, ಯೋಜನೆಗಳು ಅನುಷ್ಠಾನ ಗೊಂಡಿಲ್ಲ. ಎಲ್ಲ ಅನುದಾನಕ್ಕೂ ಕೋವಿಡ್ ನೆಪದಲ್ಲಿ ಕಡಿವಾಣ ಹಾಕಲಾಗಿತ್ತು. ಹಾಗಾಗಿ ಈ ಬಾರಿ ಬಜೆಟ್‌ನ ಅಗತ್ಯವೇ ಇರ ಲಿಲ್ಲ. ಆದಾಗ್ಯೂ ರಾಜ್ಯ ಸರಕಾರ ಈ ಬಾರಿ ಬೋಗಸ್ ಬಜೆಟ್ ಮಂಡಿಸುವ ಮೂಲಕ ಜನಸಾಮಾನ್ಯರ ಮೇಲೆ ಹೊರೆ ಹಾಕಿದೆ.
-ಮುಹಮ್ಮದ್ ಕುಂಞಿ ವಿಟ್ಲ, ಅಧ್ಯಕ್ಷ, ಜೆಡಿಎಸ್, ದ.ಕ.ಜಿಲ್ಲೆ

ದೂರದೃಷ್ಟಿ ಇಲ್ಲದ ಬಜೆಟ್ 

ಜನರ ಕಷ್ಟಗಳಿಗೆ ಸ್ಪಂದಿಸದ ದೂರದೃಷ್ಟಿ ಇಲ್ಲದ ಬಜೆಟ್ ಇದಾಗಿದೆ. ಕೋವಿಡ್‌ನಿಂದ ಕೆಲಸ ಕಳೆದುಕೊಂಡವರಿಗೆ ಬಜೆಟ್‌ನಲ್ಲಿ ಯಾವ ಅನುದಾನದ ಪ್ರಸ್ತಾಪಗಳೂ ಇಲ್ಲ. ಕೊರೊನ ಸಂದರ್ಭ ಜೀವದ ಹಂಗು ತೊರೆದು ಶ್ರಮಿಸಿದ ಆಶಾ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಮಿಕರಿಗೆ ಯಾವ ಕೊಡುಗೆ ಅಥವಾ ವಿಶೇಷ ಭತ್ತೆಯ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿಲ್ಲ. ಅನಗತ್ಯ ವಿಷಯಗಳಿಗೆ ಸಹಾಯ ಧನ ಘೋಷಿಸಲಾಗಿದೆ. ಅಯೋಧ್ಯೆಗೆ ತೆರಳುವವರಿಗೆ ವಸತಿ ಗೃಹಗಳ ನಿರ್ಮಾಣ, ರಾಜ್ಯದ ಜನತೆಯ ತುರ್ತಿನ ಪ್ರಶ್ನೆಯಲ್ಲ. ಜನರ ಸದ್ಯದ ಸಮಸ್ಯೆಗಳಿಗೆ ಗಮನ ಕೊಡದಿರುವ ರಾಜ್ಯ ಸರಕಾರದ ಬಜೆಟ್ ದೂರದೃಷ್ಟಿ ಇಲ್ಲದ ಬಜೆಟ್ ಆಗಿದೆ. -ವಸಂತ ಆಚಾರಿ, ಕಾರ್ಯದರ್ಶಿ ಸಿಪಿಎಂ ದ.ಕ. ಜಿಲ್ಲೆ 

ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್ 

ಆರ್ಥಿಕ ಸ್ಥಿತಿಗತಿಯ ಬಗ್ಗೆ, ಕಾರ್ಯಕ್ರಮಗಳ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಮಾಹಿತಿ ಇಲ್ಲ. ಅಭಿವೃದ್ಧಿಗೆ ಪೂರಕವಾಗುವ ಯಾವುದೇ ಯೋಜನೆಗಳಿಲ್ಲ. ಇಲಾಖಾವಾರು ಅನುದಾನದ ಬಿಡುಗಡೆಯ ಮಾಹಿತಿ ಬಜೆಟ್‌ನಲ್ಲಿ ನೀಡಿಲ್ಲ. ಸರಕಾರದ ಸಾಲದ ಹೊರೆ 3,97,680 ಕೋಟಿ ರೂ.ನತ್ತ ಸಾಗಿದೆ. ಹೀಗಾಗಿ ಸರಕಾರ ಸಾಲದ ಹೊರೆಯಲ್ಲೇ ನಡೆಯುವಂತಾಗಿದೆ. ಬೆಲೆ ಇಳಿಕೆಗೆ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಬಜೆಟ್‌ನಲ್ಲಿ ಸರಕಾರದ ಜನವಿರೋಧಿ ನೀತಿಯ ಅನಾವರಣವಾಗಿದೆ.
- ಅಶೋಕ್ ಕುಮಾರ್ ಕೊಡವೂರು, ಅಧ್ಯಕ್ಷ ಉಡುಪಿ ಜಿಲ್ಲಾ ಕಾಂಗ್ರೆಸ್ 

ಅಭಿವೃದ್ಧಿ ಪರ ಬಜೆಟ್ 

ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿದ, ಮಹಿಳಾ ಮತ್ತು ರೈತ ಪರ ಬಜೆಟ್. ಮಹಿಳೆಯರಿಗೆ 6 ತಿಂಗಳ ಹೆಚ್ಚುವರಿ ಹೆರಿಗೆ ರಜೆ, ಮಹಿಳಾ ಕಾರ್ಮಿಕರಿಗೆ ಬಿಎಂಟಿಸಿ ರಿಯಾಯಿತಿ ಪ್ರಯಾಣ, ಎಪಿಎಂಸಿಯಲ್ಲಿ ಮಹಿಳಾ ಮೀಸಲಾತಿ, ಮಹಿಳಾ ಸುರಕ್ಷತೆಗೆ ವಿಶೇಷ ಕ್ರಮ, 2 ಕೋಟಿ ಮಹಿಳೆಯರಿಗೆ ಸ್ವೋದ್ಯೋಗಕ್ಕಾಗಿ ಶೇ.4 ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಮುಂತಾದ ಹಲವು ಘೋಷಣೆಗಳೊಂದಿಗೆ ಮಹಿಳಾ ಪರ ಬಜೆಟ್. ಇದೊಂದು ದೂರದರ್ಶಿತ್ವದ ಅಭಿವೃದ್ಧಿ ಪರ ಬಜೆಟ್.

- ಕುಯಿಲಾಡಿ ಸುರೇಶ್ ನಾಯಕ್,ಬಿಜೆಪಿ ಜಿಲ್ಲಾಧ್ಯಕ್ಷ ಉಡುಪಿ 

ನೀರಸ ಬಜೆಟ್ 

ಆರ್ಥಿಕ ಸಂಕಷ್ಟ ಎನ್ನುತ್ತಾ ಜಾತಿವಾರು ನಿಗಮಗಳಿಗೆ ಅನುದಾನ ಬಿಡುಗಡೆಗೊಳಿಸಿ ಮೀಸಲಾತಿ ಕೂಗನ್ನು ಅಡಗಿಸುವ ಪ್ರಯತ್ನ ನಡೆದಿದೆ. ತೆರಿಗೆ ಹೆಚ್ಚಳ ಮಾಡಿಲ್ಲ ಎನ್ನುವುದೇ ಹೆಗ್ಗಳಿಕೆಯಾದರೆ ಸಂಕಷ್ಟದಲ್ಲಿರುವ ಜನಸಾಮಾನ್ಯರ ಹೊರೆಯನ್ನು ಕಡಿತ ಗೊಳಿಸದೆ ಇರುವುದು ಹೆಗ್ಗಳಿಕೆಯಾಗುವುದೇ ? ತೈಲ ತೆರಿಗೆ ಕಡಿತಗೊಳಿಸುವ ನಿರೀಕ್ಷೆ ಹುಸಿಯಾಗಿದೆ. - ಭಾಸ್ಕರ್ ರಾವ್ ಕಿದಿಯೂರು, ವಕ್ತಾರ ಉಡುಪಿ ಜಿಲ್ಲಾ ಕಾಂಗ್ರೆಸ್ 

ನಿರಾಶಾದಾಯಕ ಬಜೆಟ್

ರಾಜ್ಯ ಸರಕಾರ ಪೆಟ್ರೊಲ್, ಡೀಸೆಲ್ ಮೇಲಿನ ಸೆಸ್ ಇಳಿಸಬಹುದಿತ್ತು. ನೀರಾವರಿ, ಕೃಷಿಗೆ ಏನು ಹೆಚ್ಚಿನ ಅನುದಾನ ನೀಡಿಲ್ಲ. ದಿನಬಳಕೆ ವಸ್ತುಗಳ ದರ ಇಳಿಕೆಗೆ ಯಾವುದೇ ಯೋಜನೆಗಳಿಲ್ಲ. ಉದ್ಯೋಗ ಸೃಷ್ಟಿಗೆ ಒತ್ತು ನೀಡಿಲ್ಲ. ಹೀಗಾಗಿ ಇದೊಂದು ಹೊಸತನವಿಲ್ಲದ ನಿರಾಶಾದಾಯಕ ಬಜೆಟ್ ಆಗಿದೆ. -ಯೋಗೀಶ್ ವಿ.ಶೆಟ್ಟಿ, ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ

ಮೀನುಗಾರರಿಗೆ ಸಂತಸ ತಂದ ಬಜೆಟ್ 

ಮೀನುಗಾರರ ಬಹುದಿನಗಳ ಬೇಡಿಕೆ ಡೀಸೆಲ್ ಪಾಯಿಂಟ್‌ನಲ್ಲೇ ಕರರಹಿತ ಡೀಸೆಲ್ ವಿತರಣೆಗೆ ಬಜೆಟ್ ನಲ್ಲಿನಿರ್ಧರಿಸುವ ಮೂಲಕ ಮುಖ್ಯಮಂತ್ರಿ ಮೀನುಗಾರ ರಿಗೆಆರ್ಥಿಕ ಚೈತನ್ಯ ತುಂಬಿದ್ದಾರೆ. ಮೀನು ಮಾರಾಟ ಘಟಕ, ಮತ್ಸ್ಯದರ್ಶಿನಿಗಳ ಸ್ಥಾಪನೆಗೆ 30 ಕೋಟಿ ರೂ., ಮೀನು ಉತ್ಪನ್ನಗಳ ಸಂಸ್ಕರಣಾ ಕೇಂದ್ರ ಸ್ಥಾಪನೆ, ಮತ್ಸ ಸಂಪದ ಯೋಜನೆ ಅನುಷ್ಠಾನಕ್ಕೆ 62 ಕೋಟಿ ರೂ. ಹಾಗೂ ಬಂದರು ಸಂಪರ್ಕ ರಸ್ತೆಗೆ 100 ಕೋ. ರೂ. ಮೀಸಲಿಟ್ಟಿದ್ದು, ರಾಜ್ಯದ ಮೀನುಗಾರರಿಗೆ ಸಂತಸ ತಂದ ಬಜೆಟ್ ಇದಾಗಿದೆ.

- ಯಶ್ಪಾಲ್ ಸುವರ್ಣ, ಅಧ್ಯಕ್ಷ ದ.ಕ. ವುತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ 

ಹೆಚ್ಚಿನ ತೆರಿಗೆ ವಿಧಿಸದಿರುವುದೇ ಹೆಚ್ಚುಗಾರಿಕೆ 

ಕೊರೋನದಿಂದ ಆದ ಆರ್ಥಿಕ ಹೊಡೆತದ ಮಧ್ಯದಲ್ಲಿ ಯಾವುದೇ ಹೆಚ್ಚಿನ ತೆರಿಗೆಯನ್ನು ವಿಧಿಸದೇ ಬಜೆಟ್ ಮಂಡಿಸಿರುವುದು ವಿಶೇಷ. ಆದರೆ ಜಾತಿ ಧರ್ಮಗಳ ನಿಗಮಗಳ ಹೆಸರಿನಲ್ಲಿ ಬಜೆಟ್‌ನಲ್ಲಿ ಹಣ ವಿಂಗಡಿಸುವುದು ರಾಜ್ಯದ ಸಮಗ್ರ ಆರ್ಥಿಕ ಬೆಳವಣಿಗೆಯ ದೃಷ್ಟಿಯಿಂದ ಉತ್ತಮ ಲಕ್ಷಣವಲ್ಲ. ಕಳೆದ ವರ್ಷದ ಬಜೆಟ್ ಪರಾಮರ್ಶೆ ಮೊದಲು ನಡೆದು ನೂತನ ಬಜೆಟ್ ಮಂಡಿಸುವ ವಿಧಾನ ಅಳವಡಿಸಿದಾಗ ಮುಂದಿನ ವಾರ್ಷಿಕ ಆಯವ್ಯಯದ ಬಗ್ಗೆ ಜನರಲಿ್ಲ ಹೆಚ್ಚು ವಿಶ್ವಾಸ ಮೂಡಿಬರುತ್ತದೆ.
- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ರಾಜಕೀಯ ವಿಶ್ಲೇಷಕ ಉಡುಪಿ

ಪ್ಲಾಸ್ಟಿಕ್ ಪಾರ್ಕ್‌ಗೆ ಅನುದಾನ ನಿಗದಿ ಸ್ವಾಗತಾರ್ಹ 

ರಾಜ್ಯದಲ್ಲಿ ಮಹಿಳಾ ಸಬಲೀಕರಣ, ಪ್ರವಾಸೋದ್ಯಮ ಕೃಷಿ ಗೆ ಈ ವರ್ಷದ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ವೆಚ್ಚವನ್ನು 44.237 ಕೋಟಿ ರೂ.ಗೆ ಸೀಮಿತಗೊಳಿಸಲಾಗಿದೆ. ಒಟ್ಟು ಬಜೆಟ್ 2,46, 207 ಕೋಟಿ ರೂ. ಆಗಿದ್ದು, ದ.ಕ.ದ ಗಂಜಿ ಮಠ ದಲ್ಲಿನ ಪ್ಲಾಸ್ಟಿಕ್ ಪಾರ್ಕ್ ಯೋಜನೆಗೆ ರಾಜ್ಯದ ಪಾಲನ್ನು ಬಜೆಟ್‌ನಲ್ಲಿ ನಿಗದಿಪಡಿಸಲಾಗಿದೆ. - ಐಸಾಕ್ ವಾಸ್, ಅಧ್ಯಕ್ಷ, ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ 

ರಾಜ್ಯ ಬಜೆಟ್ ಜನಸಾಮಾನ್ಯರು ಮತ್ತು ಎಂಎಸ್‌ಎಂಇ (ಮಧ್ಯಮ ಮತ್ತು ಸಣ್ಣ ಉದ್ದಿಮೆ)ಗೆ ಹೊರೆಯಾಗದ ಬಜೆಟ್. ಮುಖ್ಯಮಂತ್ರಿ ಪ್ರಕಟಿಸಿರುವ ಮಂಗಳೂರು-ಪಣಜಿ ಸಮುದ್ರ ಮಾರ್ಗ ಯೋಜನೆ ಉದ್ಯಮ ಅಭಿವೃದ್ಧಿಗೆ ನೆರವಾಗಲಿದೆ. ಪೀಣ್ಯ ಇಂಡಸ್ಟ್ರಿಯಲ್ ಟೌನ್‌ಶಿಪ್‌ಗಾಗಿ ಬಜೆಟ್‌ನಲ್ಲಿ ಘೋಷಿಸಿರುವಂತೆ ಮಂಗಳೂರು ಬೈಕಂಪಾಡಿ ಇಂಡಸ್ಟ್ರಿಯಲ್ ಟೌನ್‌ಶಿಪ್‌ನ್ನೂ ಸೇರಿಸಬೇಕಿತ್ತು. - ಬಿ.ಎ.ನಝೀರ್, ಅಧ್ಯಕ್ಷ, ಕೆನರಾ ಪ್ಲಾಸ್ಟಿಕ್ ಮ್ಯಾನುಫ್ಯಾಕ್ಚರರ್ಸ್‌ ಆ್ಯಂಡ್ ಟ್ರೇಡರ್ಸ್‌ ಅಸೋಸಿಯೇಶನ್ ಬೈಕಂಪಾಡಿ

ಅಡಿಕೆಗೆ ಬಾಧಿಸಿರುವ ಹಳದಿ ರೋಗದ ಬಗ್ಗೆ ಸಂಶೋಧನೆ ನಡೆಸಿ ಪರಿಹಾರವನ್ನು ಕಂಡುಕೊಳ್ಳುವುದರ ಜೊತೆಗೆ ಪರ್ಯಾಯ ಬೆಳೆಯನ್ನು ಪ್ರೋತ್ಸಾಹಿಸಲು ಬಜೆಟ್‌ನಲ್ಲಿ 25 ಕೋ. ರೂ. ಘೋಷಿಸಿರುವುದು ಪ್ರಶಂಸನೀಯ. ಇತ್ತೀಚೆಗೆ ಹಳದಿ ರೋಗದ ಸಂತ್ರಸ್ತರ ಪರಿಹಾರಕ್ಕಾಗಿ ಮತ್ತು ನಷ್ಟ ಹೊಂದಿರುವ ರೈತರು ಹೊಸದಾಗಿ ಕೃಷಿಯಲ್ಲಿ ತೊಡಗಿಸಿಕೊಳ್ಳುವಲ್ಲಿ ನೆರವಾಗಲು ಪ್ಯಾಕೇಜ್ ಘೋಷಿಸುವಂತೆ ಮಾಡಿದ್ದ ಮನವಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹಳದಿರೋಗ ಪರಿಹಾರಕ್ಕಾಗಿ ಪ್ಯಾಕೇಜ್ ಘೋಷಣೆ ಮಾಡಿದ್ದರಿಂದ ನಷ್ಟ ಅನುಭವಿಸಿರುವ ರೈತರು ನೋವಿನಿಂದ ಹೊರಬಂದು ತಮ್ಮ ತೋಟಗಳಲ್ಲಿ ಪರ್ಯಾಯ ಕೃಷಿ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗಬಹುದು.

- ಪಿ.ಕಿಶೋರ್ ಕುಮಾರ್ ಕೊಡ್ಗಿ, ಅಧ್ಯಕ್ಷ, ಕ್ಯಾಂಪ್ಕೊ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News