ಹಿರಿಯ ರಂಗಕರ್ಮಿ ಐ.ಕೆ.ಬೊಳುವಾರುರಿಗೆ 'ರಂಗ-ಭಾಸ್ಕರ 2021 ಪ್ರಶಸ್ತಿ'

Update: 2021-03-09 05:21 GMT

ಮಂಗಳೂರು, ಮಾ.9: ಪ್ರತಿಭಾವಂತ ರಂಗ ನಿರ್ದೇಶಕ ದಿವಂಗತ ಭಾಸ್ಕರ ನೆಲ್ಲಿತೀರ್ಥರವರ ನೆನಪಿನಲ್ಲಿ ನೀಡುವ, 2021ನೇ ಸಾಲಿನ ರಂಗಭಾಸ್ಕರ-2021 ಪ್ರಶಸ್ತಿಗೆ ಹಿರಿಯ ರಂಗಕರ್ಮಿ ಐ.ಕೆ.ಬೊಳುವಾರು ಆಯ್ಕೆಯಾಗಿದ್ದಾರೆ ಎಂದು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.  

 ಕಳೆದ 42 ವರ್ಷಗಳಿಂದ ರಂಗಭೂಮಿಗೆ ಸಂಬಂಧಿಸಿದಂತೆ ನಟನೆ, ನಿರ್ದೇಶನ, ನಾಟಕ ರಚನೆ, ನೇಪಥ್ಯ, ಪ್ರಕಟನೆ, ತರಬೇತಿ, ಸಂಘಟನೆ ಮುಂತಾದ ವಿವಿಧ ವಿಭಾಗಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಐ.ಕೆ.ಬೊಳುವಾರು ಮಕ್ಕಳ ರಂಗಭೂಮಿಯಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಗ್ರಹಣ, ಡೋಲು, ಮುದುಕ ಸೆಟ್ಟಿಯೂ, ಮೂವರು ಮಕ್ಕಳೂ, ಮಾಯಾ ಕುದುರೆ ಮುಂತಾದ ನಾಟಕಗಳನ್ನು ರಚಿಸಿರುವ ಬೊಳುವಾರು ಅವರು ಚದುರಂಗ, ನಿರತ ನಿರಂತ ಮುಂತಾದ ಸಂಸ್ಥೆಗಳನ್ನು ಸ್ಥಾಪಿಸಿ, ಆ ಮೂಲಕ ರಂಗ ಕ್ರಾಂತಿ ಮಾಡಿದ್ದಾರೆ. ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರನ್ನರಸಿ ಬಂದಿವೆ.

ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ 12ನೇ ವಾರ್ಷಿಕೋತ್ಸವ ಪ್ರಯುಕ್ತ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಾ.10ರಂದು ಸಂಜೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ 'ರಂಗಭಾಸ್ಕರ' ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ 'ಮಿನುಗೆಲೆ ಮಿನುಗೆಲೆ ನಕ್ಷತ್ರ' ಎಂಬ ಮಕ್ಕಳ ನಾಟಕ ಮತ್ತು 'ದಾಟ್ಸ ಆಲ್ ಯುವರ್ ಆನರ್' ಎಂಬ ಕನ್ನಡ ನಾಟಕ ಪ್ರದರ್ಶನ ಕೂಡ ಇದೆ. ಪ್ರವೇಶ ಉಚಿತವಾಗಿರುತ್ತದೆ ಎಂದು ಗೋಪಾಲಕೃಷ್ಣ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಡಾ.ನಾ.ದಾಮೋದರ ಶೆಟ್ಟಿ, ಡಾ.ಮೀನಾಕ್ಷಿ ರಾಮಚಂದ್ರ ಮತ್ತು ಜಾದೂಗಾರ ಕುದ್ರೋಳಿ ಗಣೇಶ್ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದು, ಆಯ್ಕೆಗೆ ಸಹಕರಿಸಿದ್ದಾರೆ.

ರಂಗಭಾಸ್ಕರ ಪ್ರಶಸ್ತಿಗೆ ಈ ಹಿಂದೆ ವೇಣುಮಿತ್ರ ಕಾಸರಗೋಡು, ವಿಟ್ಲ ಮಂಗೇಶ್ ಭಟ್, ರೋಹಿಣಿ ಜಗರಾಮ್, ಜಗನ್ ಪವಾರ್ ಬೇಕಲ್, ಕಾಸರಗೋಡು ಚಿನ್ನಾ ಮತ್ತು ಯಕ್ಷಗುರು ಗಣೇಶ ಕೊಲೆಕಾಡಿ ಭಾಜನರಾಗಿದ್ದರು ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News