ಸುಬ್ರಹ್ಮಣ್ಯ ವಡ್ಡಾರು ಉಡುಪಿಯ ಮನೆಗೆ ಎಸಿಬಿ ದಾಳಿ: ಅಪಾರ ಪ್ರಮಾಣದ ಚಿನ್ನಾಭರಣ, ನಗದು, ದಾಖಲೆ ವಶ
Update: 2021-03-09 20:48 IST
ಉಡುಪಿ, ಮಾ.9: ಮೈಸೂರು ನಗರ ಮತ್ತು ಗ್ರಾಮಾಂತರ ಯೋಜನೆಗಳ ಜಂಟಿ ನಿರ್ದೇಶಕ ಸುಬ್ರಹ್ಮಣ್ಯ ಕೆ.ವಡ್ಡಾರು ಅವರ ಉಡುಪಿ ಪುತ್ತೂರು ಮನೆಯ ಮೇಲೂ ಭ್ರಷ್ಟಾಚಾರ ನಿಗ್ರಹ ದಳ ಮಂಗಳವಾರ ಬೆಳಗ್ಗೆ ದಾಳಿ ನಡೆಸಿ ಅಪಾರ ಪ್ರಮಾಣದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದೆ.
ಬೆಳಗಿನ ಜಾವ 6ಗಂಟೆಗೆ ದಾಳಿ ನಡೆಸಿದ ತಂಡ, 205.610 ಗ್ರಾಂ ಚಿನ್ನ, 2.473 ಕೆಜಿ ಬೆಳ್ಳಿ, 1 ಲಕ್ಷ ರೂ. ನಗದು, ಅಪಾರ ಪ್ರಮಾಣದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದೆ. ಈ ಹಿಂದೆ ಉಡುಪಿಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಮೈಸೂರಿಗೆ ವರ್ಗಾವಣೆ ಗೊಂಡಿದ್ದರು.
ಎಸಿಬಿ ಎಸ್ಪಿ ಭೂಪಯ್ಯ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಮಂಜುನಾಥ್ ಕವಾರಿ, ನಿರೀಕ್ಷಕರಾದ ಸತೀಶ್ ಮತ್ತು ಚಂದ್ರಕಲಾ, ಹೆಡ್ಕಾನ್ಸ್ಟೆಬಲ್ ಯತಿನ್, ಸಿಬ್ಬಂದಿಗಳಾದ ಪ್ರಸನ್ನ, ರವೀಂದ್ರ ಗಾಣಿಗ, ಅಬ್ದುಲ್ ಜಲಾಲ್, ಪ್ರಥಮ ದರ್ಜೆ ಸಹಾಯಕ ರಮೇಶ್ ಭಂಡಾರಿ ಪಾಲ್ಗೊಂಡಿದ್ದರು.