ಐಷಾರಾಮಿ ಕಾರು ಮಾರಾಟ ಪ್ರಕರಣ: ತನಿಖೆ ಸಿಐಡಿ ಎಸ್ಪಿ ಹಂತಕ್ಕೆ
Update: 2021-03-09 21:35 IST
ಮಂಗಳೂರು, ಮಾ.9: ಮಂಗಳೂರು ಸಿಸಿಬಿ ಪೊಲೀಸರಿಂದ ಐಷಾರಾಮಿ ಕಾರು ಮಾರಾಟದ ತನಿಖೆಯನ್ನು ಸಿಐಡಿ ಎಸ್ಪಿ ಹಂತದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ಸಿಐಡಿ ಎಸ್ಪಿ ರಮೇಶ್ ಎಂಬವರು ಮಂಗಳೂರಿಗೆ ಆಗಮಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಸಿಐಡಿ ಇನ್ಸ್ಪೆಕ್ಟರ್ ಈವರೆಗೆ ಪ್ರಕರಣದ ತನಿಖೆ ನಡೆಸುತ್ತಿದ್ದರು. ಈ ತನಿಖೆ ಹಾದಿತಪ್ಪುತ್ತಿರುವ ಶಂಕೆ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಬಾಕಿ ಉಳಿದ ತನಿಖೆಯನ್ನು ಇನ್ಸ್ಪೆಕ್ಟರ್ ಬದಲು ಎಸ್ಪಿ ಹಂತದ ಅಧಿಕಾರಿಗೆ ವರ್ಗಾಯಿಸಲಾಗಿದೆ. ಸಿಐಡಿ ರೋಹಿಣಿ ಕಟ್ಟೋಚ್ ಅವರ ಬದಲು ಎಸ್ಪಿ ರಮೇಶ್ ಅವರನ್ನು ಸಮಗ್ರ ತನಿಖೆ ನಡೆಸುವಂತೆ ಮಂಗಳೂರಿಗೆ ಸಿಐಡಿ ಉನ್ನತಾಧಿಕಾರಿಗಳು ಕಳುಹಿಕೊಟ್ಟಿದ್ದರು. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ ಅಮಾನತುಗೊಂಡ ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಅದಕ್ಕೆ ನೆರವಾದವರಿಗೆ ನೋಟಿಸ್ ನೀಡಿದ್ದು, ವಿಚಾರಣೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.