‘ಹಲ್ಲೆ ಆರೋಪಿಗಳನ್ನು ಶೀಘ್ರ ಬಂಧಿಸದಿದ್ದರೆ ಮಾ. 15ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ’
ಉಡುಪಿ, ಮಾ.11:ಆರ್ಟಿಐ ಕಾರ್ಯಕರ್ತರಾಗಿದ್ದ ತನ್ನ ಪತಿ ಬಾರಕೂರಿನ ಶಂಕರ ಶಾಂತಿ ಅವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಈಗಾಗಲೇ 20 ದಿನಗಳಾಗಿವೆ. ಹಲ್ಲೆ ಆರೋಪಿಗಳನ್ನು ಶೀಘ್ರವೇ ಬಂಧಿಸದಿದ್ದರೆ ಮಾ.15ರ ಸೋಮವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಾನು ಹಾಗೂ ನನ್ನ ಮಕ್ಕಳು ಉಪವಾಸ ಸತ್ಯಾಗ್ರಹ ನಡೆಸ ಲಿದ್ದೇವೆ ಎಂದು ಶಂಕರ ಶಾಂತಿ ಅವರ ಪತ್ನಿ ಪೂರ್ಣಿಮ ಶಂಕರ ಶಾಂತಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗಂಡನನ್ನು ಮನೆಯ ಸಮೀಪದ ಕಾಳಿಕಾಂಬ ದೇವಸ್ಥಾನದ ಅಡುಗೆ ಕೋಣೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಈಗಾಗಲೇ ಮೂರುವಾರವಾಗಿದ್ದರೂ, ಘಟನೆಯ ಪ್ರಮುಖ ಆರೋಪಿಗಳ ಬಂಧನವಾಗದಿರುವುದು ವಿಷಾಧನೀಯ. ಪ್ರಕರಣಕ್ಕೆ ಸಂಬಂಧಿಸಿ ದಂತೆ ಪ್ರಭಾವಿ ವ್ಯಕ್ತಿಗಳು, ರಾಜಕೀಯ ಪ್ರೇರಿತ ಶಕ್ತಿಗಳು ಪೊಲೀಸ್ ಇಲಾಖೆಯ ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಿರುವ ಶಂಕೆ ವ್ಯಕ್ತವಾಗಿದೆ ಎಂದರು.
ಹೀಗಾಗಿ ತಾನು ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಹಿಂದುಳಿದ ವರ್ಗಗಳ ಸಚಿವರು ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ಶಾಸಕರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ನನ್ನ ಗಂಡನಿಗಾದ ಅನ್ಯಾಯಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಹಾಗೂ ಕೂಡಲೇ ಪ್ರಮುಖ ಆರೋಪಿಗಳನ್ನು ಬಂಧಿಸಬೇಕು ಎಂದರು.
ರವಿವಾರದೊಳಗೆ ಪ್ರಮುಖ ಆರೋಪಿಗಳ ಬಂಧನವಾಗದಿದ್ದಲ್ಲಿ ಮಾ.15ರ ಸೋಮವಾರ ಬೆಳಗ್ಗೆನಿಂದ ಉಡುಪಿ ಬಿಲ್ಲವ ಯುವ ವೇದಿಕೆ ಹಾಗೂ ಇತರ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ನಾನು, ಮಕ್ಕಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಪೂರ್ಣಿಮಾ ತಿಳಿಸಿದರು.
ಹಲ್ಲೆಗೆ ಕಾರಣ: ತನ್ನ ಪತಿ ಶಂಕರ ಶಾಂತಿ (38) ಜನಸಾಮಾನ್ಯರಿಗಾಗುತಿದ್ದ ಅನ್ಯಾಯದ ವಿರುದ್ಧ ಹೋರಾಟಗಳನ್ನು ರೂಪಿಸುತ್ತಾ, ಕಾನೂನು, ನಿಯಮ ಪಾಲನೆ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತಿದ್ದರು. ಇದೇ ಫೆ.20ರ ಶನಿವಾರ ಬೆಳಗ್ಗೆ 9 ಗಂಟೆಗೆ ಚಹಾ ಕುಡಿಯಲು ಹೊರಗೆ ಹೋಗಿದ್ದ ಅವರನ್ನು ಮನೆಯ ಸಮೀಪದಲ್ಲೇ ಇರುವ ಕಾಳಿಕಾಂಬ ದೇವಸ್ಥಾನದ ಅಡುಗೆ ಕೋಣೆಯಲ್ಲಿ ಕೂಡಿಹಾಕಿ ತೀವ್ರವಾಗಿ ಚಿತ್ರಹಿಂಸೆ ನೀಡಿ ಮಾರಾಣಾಂತಿಕ ಹಲ್ಲೆ ನಡೆಸಲಾಗಿತ್ತು ಎಂದವರು ಆರೋಪಿಸಿದರು.
ಅದೇ ವೇಳೆ ಬೊಬ್ಬೆ ಕೇಳಿ ಮನೆಯಿಂದ ಓಡಿ ಬಂದ ನಾನು ಸ್ಥಳಕ್ಕಾಗಮಿಸಿದಾಗ ನನ್ನ ಗಂಡ ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಅನಂತರ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದೆ ಎಂದವರು ಘಟನೆಯನ್ನು ವಿವರಿಸಿದರು.
ಆರ್ಟಿಐ ಕಾರ್ಯಕರ್ತರಾಗಿದ್ದ ಶಂಕರ ಶಾಂತಿ, ಸಾಮಾಜಿಕ ನೆಲೆಯಲ್ಲಿ ಊರಿನ ಹಾಗೂ ಸುತ್ತಮುತ್ತ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತಿದ್ದರು. ಕಾಂಕ್ರಿಟ್ ರಸ್ತೆ ಕಳಪೆ ಕಾಮಗಾರಿ, ಬಾರಕೂರು ಜೈನ ಬಸದಿ ಅತಿಕ್ರಮಣ ತೆರವು, ಬಾರಕೂರು ಗ್ರಾಪಂ ಅವ್ಯವಹಾರ, ಹೊಸಾಳ ಗರಡಿಯಲ್ಲಿ ವೈದಿಕರೋರ್ವರ ಅನಾಚಾರ ಪ್ರಶ್ನಿಸುವಿಕೆ ಮುಂತಾದ ವಿಷಯಗಳನ್ನು ಅವರು ಕೈಗೆತ್ತಿಕೊಂಡಿದ್ದರು ಎಂದರು.
ಜೈನರ ಬಸದಿ ಅತಿಕ್ರಮಣ ತೆರವು ಹಾಗೂ ರಸ್ತೆ ಬದಿಯಲ್ಲಿ ಬ್ಯಾನರ್ ಅಳವಡಿಕೆಯಿಂದ ಸಾರ್ವಜನಿಕರಿಗಾದ ತೊಂದರೆಯ ಕುರಿತು ಗಂಡ ಕ್ರಮ ಕೈಗೊಂಡಿದ್ದರಿಂದ ದುಷ್ಕರ್ಮಿಗಳಾದ ಪ್ರವೀಣ ಆಚಾರ್ಯ, ಪ್ರಸಾದ ಆಚಾರ್ಯ, ಶಾಂತರಾಮ ಶೆಟ್ಟಿ, ಮಂಜಪ್ಪ ಪೂಜಾರಿ, ದಿವಾಕರ ಮತ್ತಿತರರು ಸೇರಿ ಕಬ್ಬಿಣದ ರಾಡ್ನಿಂದ ಕೊಲೆ ಯತ್ನ ನಡೆಸಿದ್ದಾರೆ ಎಂದವರು ದೂರಿದರು.
ತನ್ನ ಗಂಡನ ಮೇಲಾದ ಮಾರಣಾಂತಿಕ ಹಲ್ಲೆ ಪ್ರಕರಣದ ಬಗ್ಗೆ ನಾನು ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಿಸುವ ಮೊದಲೇ ಮಂಜಪ್ಪ ಪೂಜಾರಿ ನನ್ನ ಗಂಡನ ವಿರುದ್ದ ಸುಳ್ಳು ದೂರು ದಾಖಲಿಸಿದ್ದು, ಗಂಡನೇ ದಾವಾಲಯದ ಕಿಟಕಿ ಗಾಜನ್ನು ಒಡೆದು ಇತರರ ಮೇಲೆ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ ಎಂದರು. ಅದೇ ದಿನ ತಾನು ಪ್ರವೀಣ ಆಚಾರ್ಯ, ಪ್ರಸಾದ್ ಆಚಾರ್ಯ, ಶಾಂತರಾಮ ಶೆಟ್ಟಿ, ಮಂಜಪ್ಪ ಪೂಜಾರಿ, ದಿವಾಕರ ವಿರುದ್ದ ಹಲ್ಲೆ ಪ್ರಕರಣವನ್ನು ಬ್ರಹ್ಮಾವರ ಠಾಣೆಯಲ್ಲಿ ದಾಖಲಿಸಿದ್ದಾಗಿ ಪೂರ್ಣಿಮಾ ತಿಳಿಸಿದರು.
ಇದೀಗ ಕಾಳಿಕಾಂಬ ದೇವಸ್ಥಾನದ ಅಧ್ಯಕ್ಷರು ಇಲ್ಲಿ ಅಂಥ ಘಟನೆಯೇ ನಡೆದಿಲ್ಲ ಎಂದು ಹೇಳುತಿದ್ದಾರೆ. ಈ ಬಗ್ಗೆ ನಾನು ಯಾವುದೇ ದೇವಸ್ಥಾನಕ್ಕೆ ಬೇಕಿದ್ದರೂ ಬಂದು ದೇವರ ಮುಂದೆ ಪ್ರಮಾಣ ಮಾಡುತ್ತೇನೆ. ಯಾಕೆಂದರೆ ಘಟನೆಗೆ ನಾನೇ ಪ್ರತ್ಯಕ್ಷ ಸಾಕ್ಷಿಯಾಗಿದ್ದು, ನನಗೆ ಯಾವುದೇ ದೇವರ ಭಯವಿಲ್ಲ. ಘಟನೆ ನಡೆದಿಲ್ಲ ಎನ್ನುವವರು ಹೀಗೆ ಮಾಡುವರೇ ಎಂದವರು ಪ್ರಶ್ನಿಸಿದರು.
ಶಂಕರ ಶಾಂತಿ ಅವರು ಇನ್ನೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಅವರೀಗಲೂ ನಡೆಯಲು ಸಾಧ್ಯವಾಗುತ್ತಿಲ್ಲ. ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಈಗಾಗಲೇ ಎಸ್ಪಿಯವರಿಗೆ ಮನವಿ ಸಲ್ಲಿಸಲಾಗಿದೆ. ಉಡುಪಿ ಬನ್ನಂಜೆ ಬಿಲ್ಲವ ಸಂಘದಲ್ಲಿ ಜಿಲ್ಲಾ ಬಿಲ್ಲವ ಯುವ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಕಳೆದ ವಾರ ಬ್ರಹ್ಮಾವರ ಠಾಣೆಯ ಎದುರು ಸಹ ಪ್ರತಿಭಟನೆ ನಡೆಸಲಾಗಿದೆ. ಈಗ ಪ್ರವೀಣ್ ಆಚಾರ್ಯ ಸೇರಿದಂತೆ ಮೂವರನ್ನು ಮಾತ್ರ ಬಂಧಿಸಲಾಗಿದೆ. ಪ್ರಮುಖ ಆರೋಪಿಗಳ ಬಂಧನವಿನ್ನೂ ಆಗಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪೂರ್ಣಿಮ ಶಂಕರ್ ಅವರ ತಂದೆ ಇನ್ನಂಜೆ ರಾಘು ಪೂಜಾರಿ ಹಾಗೂ ತಂಗಿ ಪೂಜಾ ಉಪಸ್ಥಿತರಿದ್ದರು.